ADVERTISEMENT

ಮುದ್ರಾಂಕ ಶುಲ್ಕ ತಗ್ಗಿಸಿ: ಕಾಸಿಯಾ

ಸಣ್ಣ ಕೈಗಾರಿಕೆಗಳ ಸಮಸ್ಯೆ ಪರಿಹರಿಸಲು ಸರ್ಕಾರಕ್ಕೆ ಮನವಿ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2024, 15:32 IST
Last Updated 27 ನವೆಂಬರ್ 2024, 15:32 IST
ಬೆಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಸಿಯಾ  ಅಧ್ಯಕ್ಷ ಎಂ.ಜಿ. ರಾಜಗೋಪಾಲ್‌ ಮಾತನಾಡಿದರು. ಜಂಟಿ ಕಾರ್ಯದರ್ಶಿ ಜೆ.ಎಸ್. ಬಾಬು, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್, ಉಪಾಧ್ಯಕ್ಷ ಬಿ.ಆರ್. ಗಣೇಶ್ ರಾವ್ ಮತ್ತು ಖಜಾಂಚಿ ಎಚ್. ಮಂಜುನಾಥ್ ಇದ್ದರು
ಬೆಂಗಳೂರಿನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕಾಸಿಯಾ  ಅಧ್ಯಕ್ಷ ಎಂ.ಜಿ. ರಾಜಗೋಪಾಲ್‌ ಮಾತನಾಡಿದರು. ಜಂಟಿ ಕಾರ್ಯದರ್ಶಿ ಜೆ.ಎಸ್. ಬಾಬು, ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್, ಉಪಾಧ್ಯಕ್ಷ ಬಿ.ಆರ್. ಗಣೇಶ್ ರಾವ್ ಮತ್ತು ಖಜಾಂಚಿ ಎಚ್. ಮಂಜುನಾಥ್ ಇದ್ದರು   

ಬೆಂಗಳೂರು: ಮುದ್ರಾಂಕ ಶುಲ್ಕ ಹೆಚ್ಚಳ ಹಾಗೂ ಇ–ಖಾತೆ ಪಡೆಯುವಲ್ಲಿ ಎದುರಾಗಿರುವ ತಂತ್ರಾಂಶ ದೋಷದಿಂದಾಗಿ ಸಣ್ಣ ಕೈಗಾರಿಕೆಗಳು ಸಮಸ್ಯೆ ಎದುರಿಸುತ್ತಿವೆ. ದೇಶದ ಆರ್ಥಿಕತೆಗೆ ಗಮನಾರ್ಹ ಕೊಡುಗೆ ನೀಡುತ್ತಿರುವ ಎಂಎಸ್‌ಎಂಇಗಳಿಗೆ ಉತ್ತೇಜನ ನೀಡಲು ಸರ್ಕಾರ ಮುಂದಾಗಬೇಕಿದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಒತ್ತಾಯಿಸಿದೆ.

ನಗರದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ.ಜಿ. ರಾಜಗೋಪಾಲ್‌, ಕೈಗಾರಿಕೆಗಳನ್ನು ಆರಂಭಿಸಲು ಬ್ಯಾಂಕ್‌ಗಳಿಂದ ಸಾಲ ಪಡೆಯಲಾಗುತ್ತದೆ. ಆದರೆ, ಸರ್ಕಾರವು ಈ ಸಾಲದ ಮೇಲೆ ಮುದ್ರಾಂಕ ಶುಲ್ಕವನ್ನು ಶೇ 0.5ಕ್ಕೆ ಹೆಚ್ಚಿಸಿದೆ. ಇದು ಕೈಗಾರಿಕೆಗಳ ಬಂಡವಾಳ ಕುಂಠಿತಕ್ಕೆ ಕಾರಣವಾಗಿದೆ. ಕೂಡಲೇ ಶುಲ್ಕವನ್ನು ಶೇ 0.1ಕ್ಕೆ ತಗ್ಗಿಸಬೇಕು. ಗರಿಷ್ಠ ಮಿತಿಯನ್ನು ₹25 ಸಾವಿರಕ್ಕೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು. 

ಇ–ಖಾತೆಯಲ್ಲಿನ ಲೋಪದೋಷ  ಸರಿಪಡಿಸಲು ಅನಗತ್ಯ ವಿಳಂಬವಾಗುತ್ತಿದೆ. ವರ್ಷಗಳೇ ಕಳೆದರೂ ಇ–ಖಾತೆ ಪಡೆಯಲು ಸಾಧ್ಯವಾಗುತ್ತಿಲ್ಲ. ದೋಷಪೂರಿತವಾಗಿರುವ ತಂತ್ರಾಂಶವನ್ನು ಸರಿಪಡಿಸಬೇಕಿದೆ ಎಂದು ಆಗ್ರಹಿಸಿದರು.

ADVERTISEMENT

ಇ–ಖಾತೆ ಸಮಸ್ಯೆಯನ್ನು ಸಕಾಲ ಯೋಜನೆಯಡಿ ತರಬೇಕು. ಅಲ್ಲಿಯವರೆಗೂ ನೋಂದಣಿ ಪ್ರಕ್ರಿಯೆ ನಿರ್ಬಂಧಿಸದೆ ಈ ಹಿಂದೆ ಅನುಸರಿಸುತ್ತಿದ್ದ ಪದ್ಧತಿಯಂತೆ ಲಭ್ಯವಿರುವ ಖಾತೆಗಳ ಅಥವಾ ದಾಖಲೆಗಳ ಆಧಾರದ ಮೇಲೆ ನೋಂದಣಿ ಪ್ರಕ್ರಿಯೆ ಮಾಡಬೇಕಿದೆ ಎಂದು ಹೇಳಿದರು.

ಅತಿ ಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ಕೈಗೆಟಕುವ ಬೆಲೆಯಲ್ಲಿ ಭೂಮಿ ನೀಡಲು ಕೆಎಸ್‌ಎಸ್‌ಐಡಿಸಿಗೆ ಸಾಧ್ಯವಾಗುತ್ತಿಲ್ಲ. ಭೂಮಿಯನ್ನು ಸ್ವಾಧೀನಪಡಿಸಿಕೊಂಡ ನಂತರ ಕೆಐಎಡಿಬಿ ಹಂಚಿಕೆ ದರದಲ್ಲಿ ಕೆಎಸ್ಎಸ್ಐಡಿಸಿಗೆ ಭೂಮಿಯನ್ನು ವರ್ಗಾಯಿಸಲಾಗುತ್ತಿದೆ. ಇದರಿಂದಾಗಿ ಎಂಎಸ್ಎಂಇಗಳಿಗೆ ಕೈಗೆಟಕುವ ದರದಲ್ಲಿ ಭೂಮಿಯನ್ನು ಒದಗಿಸಲು ಕೆಎಸ್ಎಸ್ಐಡಿಸಿಗೆ ಸಾಧ್ಯವಾಗುತ್ತಿಲ್ಲ ಎಂದರು.

ವಜ್ರ ಮಹೋತ್ಸವ:

1949ರಲ್ಲಿ ಸ್ಥಾಪನೆಯಾದ ‘ಕಾಸಿಯಾ’ಗೆ, 75 ವರ್ಷ ತುಂಬಿದೆ. ಮುಂದಿನ ವರ್ಷದ ಏಪ್ರಿಲ್‌ ಅಥವಾ ಮೇ ತಿಂಗಳಲ್ಲಿ ವಜ್ರ ಮಹೋತ್ಸವ ಆಚರಿಸಲಾಗುವುದು. ಇದೇ ವೇಳೆ ದಾಬಸ್‌ಪೇಟೆಯಲ್ಲಿರುವ ಕಾಸಿಯಾ ಸೆಂಟರ್ ಆಫ್ ಎಕ್ಸಲೆನ್ಸ್ ಆ್ಯಂಡ್‌ ಇನ್ನೋವೇಶನ್‌ ಅನ್ನು ಉದ್ಘಾಟಿಸಲಾಗುವುದು ಎಂದು ಹೇಳಿದರು.

‘ಕೈಗಾರಿಕೆಗಳಿಂದ ಹೊರಬರುವ ಘನತ್ಯಾಜ್ಯ ವಿಲೇವಾರಿಗೆ ವಿಧಿಸುತ್ತಿರುವ ಶುಲ್ಕ ಹೆಚ್ಚಿದೆ. ಪೀಣ್ಯ ಕೈಗಾರಿಕಾ ವಲಯ ಸೇರಿ ಇತರೆಡೆ ಕೈಗಾರಿಕೆಗಳು ಇರುವ ಸ್ಥಳದಲ್ಲಿ ಮೂಲಸೌಕರ್ಯದ ಕೊರತೆಯಿದೆ. ಉತ್ತಮ ರಸ್ತೆ ಸಂಪರ್ಕ ಇಲ್ಲ. ನಿರಂತರ ವಿದ್ಯುತ್‌ ಪೂರೈಕೆಯಲ್ಲೂ ತೊಂದರೆಯಿದೆ. ಕೈಗಾರಿಕೆಗಳ ಸ್ಥಾಪನೆಗೆ ಜಾಗದ ಕೊರತೆ  ಎದುರಿಸಲಾಗುತ್ತಿದೆ’ ಎಂದು ಸಂಘದ ಗೌರವ ಪ್ರಧಾನ ಕಾರ್ಯದರ್ಶಿ ಸುರೇಶ್ ಎನ್. ಸಾಗರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಸಿಯಾದ ಉಪಾಧ್ಯಕ್ಷ ಬಿ.ಆರ್. ಗಣೇಶ್ ರಾವ್, ಜಂಟಿ ಕಾರ್ಯದರ್ಶಿ ಜೆ.ಎಸ್. ಬಾಬು, ಖಜಾಂಚಿ ಎಚ್. ಮಂಜುನಾಥ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.