ಕೋಲ್ಕತ್ತ : ಆರೋಗ್ಯ ಮತ್ತು ಜೀವ ವಿಮಾ ಕಂತುಗಳ ಮೇಲೆ ವಿಧಿಸುತ್ತಿರುವ ಸರಕು ಮತ್ತು ಸೇವಾ ತೆರಿಗೆಯನ್ನು ಕೇಂದ್ರ ಸರ್ಕಾರ (ಜಿಎಸ್ಟಿ) ಹಿಂಪಡೆಯಬೇಕು ಎಂದು ಅಖಿಲ ಭಾರತ ಜೀವ ವಿಮಾ ನೌಕರರ ಒಕ್ಕೂಟ (ಎಐಎನ್ಎಲ್ಐಇಎಫ್) ಆಗ್ರಹಿಸಿದೆ.
ಭಾರತೀಯ ವಿಮಾ ಕಂಪನಿಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (ಎಫ್ಡಿಐ) ಪ್ರಮಾಣವು ಸದ್ಯ ಶೇ 74ರಷ್ಟಿದೆ. ಇದನ್ನು ಶೇ 100ರಷ್ಟಕ್ಕೆ ಹೆಚ್ಚಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಜಿಎಸ್ಟಿ ವಾಪಸ್ ಹಾಗೂ ಹಾಲಿ ಇರುವ ಎಫ್ಡಿಐ ಮಿತಿಯನ್ನೇ ಕಾಯ್ದುಕೊಳ್ಳುವಂತೆ ಆಗ್ರಹಿಸಿ ದೇಶದಾದ್ಯಂತ ಅಭಿಯಾನಕ್ಕೆ ಚಾಲನೆ ನೀಡಲಾಗುವುದು ಎಂದು ಒಕ್ಕೂಟವು ಶನಿವಾರ ತಿಳಿಸಿದೆ.
ಈ ಬೇಡಿಕೆಗಳ ಈಡೇರಿಕೆಗೆ ಸಂಬಂಧಿಸಿದಂತೆ ಎಲ್ಲಾ ರಾಜಕೀಯ ಪಕ್ಷದ ಸಂಸದರ ಬೆಂಬಲ ಕೋರಲಾಗುವುದು ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ವಿ. ನರಸಿಂಹನ್ ತಿಳಿಸಿದ್ದಾರೆ.
ಹೊಸ ಕಾನೂನು ಸಂಹಿತೆಯನ್ನು ಹಿಂಪಡೆಯಬೇಕು. 2010ರ ನಂತರ ಭಾರತೀಯ ಜೀವ ವಿಮಾ ನಿಗಮದಲ್ಲಿ (ಎಲ್ಐಸಿ) ನೇಮಕವಾದವರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.
ವಿಮಾ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ ಹೆಚ್ಚಳಕ್ಕೆ ಮುಂದಾಗಿರುವ ಕೇಂದ್ರದ ನಿರ್ಧಾರ ಸರಿಯಲ್ಲ ಎಂದು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.