ಬೆಂಗಳೂರು: ಪ್ರಧಾನ ಮಂತ್ರಿ ಉಜ್ವಲ ಯೋಜನೆಯ (ಪಿಎಂಯುವೈ) ಎಲ್ಲ ಅರ್ಹ ಫಲಾನುಭವಿಗಳಿಗೆ ಅಡುಗೆ ಅನಿಲ (ಎಲ್ಪಿಜಿ) ಸಂಪರ್ಕ ಒದಗಿಸಲು ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನೀಲನಕ್ಷೆ ಸಿದ್ಧಪಡಿಸಿದೆ.
ಫಲಾನುಭವಿಗಳ ಸಂಖ್ಯೆ ಹೆಚ್ಚಿಸಲು ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿಯು ಅನುಮೋದನೆ ನೀಡಿದ ನಂತರ ‘ಐಒಸಿ’ಯು ಹಿರಿಯ ಅಧಿಕಾರಿಗಳ ಸಭೆ ನಡೆಸಿದೆ. ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ‘ಐಒಸಿ’ಯ ನಿರ್ದೇಶಕ (ಮಾರುಕಟ್ಟೆ) ಗುರ್ಮೀತ್ ಸಿಂಗ್ ಅವರು, ‘ದೇಶದಲ್ಲಿನ ಪ್ರತಿಯೊಂದು ಅಡುಗೆ ಮನೆಯೂ ಎಲ್ಪಿಜಿಯ ಸುಗಮ ಸಂಪರ್ಕ ಪಡೆದು ಹೊಗೆ ಮುಕ್ತವಾಗಿರಬೇಕು ಎಂಬ ಉದ್ದೇಶ ಸಾಧಿಸಲು ಎಲ್ಲರೂ ಕೈಜೋಡಿಸಬೇಕು’ ಎಂದು ಮನವಿ ಮಾಡಿಕೊಂಡಿದ್ದಾರೆ.
‘ನಮ್ಮೆಲ್ಲರ ನಿರಂತರ ಪ್ರಯತ್ನಗಳ ಫಲವಾಗಿ, ದೇಶದಲ್ಲಿ ಎಲ್ಪಿಜಿ ಬಳಕೆಯ ಪ್ರಮಾಣವು ಮೂರು ವರ್ಷಗಳಲ್ಲಿ ಶೇ 62 ರಿಂದ ಶೇ 89ಕ್ಕೆ ತಲುಪಿದೆ. ಕೈಗೆಟುಕುವ ದರ ಮತ್ತು ಎಲ್ಪಿಜಿಯ ನಿರಂತರ ಬಳಕೆಗಾಗಿ ‘ಪಿಎಂಯುವೈ’ ಫಲಾನುಭವಿಗಳಿಗೆ 5 ಕೆ.ಜಿ.ಯ ಸಿಲಿಂಡರ್ ಲಭ್ಯವಾಗುವಂತೆ ಮಾಡಬೇಕು’ ಎಂದೂ ಅವರು ಪ್ರತಿಪಾದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.