ಮಂಗಳೂರು: ನವಮಂಗಳೂರು ಬಂದರಿನ 16ನೇ ಜೆಟ್ಟಿಯಲ್ಲಿ ಕಲ್ಲಿದ್ದಲು ಸರಕಿನ ಸಂಪೂರ್ಣ ಯಾಂತ್ರೀಕೃತ ನಿರ್ವಹಣೆಯನ್ನು ಮಾರ್ಚ್ನಲ್ಲಿ ಆರಂಭಿಸಲಾಗುವುದು ಎಂದು ನವಮಂಗಳೂರು ಬಂದರು ಮಂಡಳಿಯ (ಎನ್ಎಂಪಿಟಿ) ಅಧ್ಯಕ್ಷ ಎಂ.ಟಿ.ಕೃಷ್ಣಬಾಬು ಹೇಳಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘16ನೇ ಜೆಟ್ಟಿನಲ್ಲಿ (ಚೆಟ್ಟಿನಾಡ್ ಮಂಗಳೂರು ಕಲ್ಲಿದ್ದಲು ಟರ್ಮಿನಲ್) ಸರಕು ನಿರ್ವಹಣೆ ಸಂಪೂರ್ಣ ಯಾಂತ್ರೀಕರಣಗೊಳ್ಳಲಿದೆ. ಇದಕ್ಕಾಗಿ ₹ 469 ಕೋಟಿ ವೆಚ್ಚ ಮಾಡಲಾಗಿದ್ದು, ಹಡಗಿನಿಂದ ಕಲ್ಲಿದ್ದಲನ್ನು ಗ್ರಾಹಕರ ಕೇಂದ್ರದವರೆಗೆ ತಲುಪಿಸುವ ತನಕವೂ ಯಂತ್ರವೇ ಎಲ್ಲ ಕೆಲಸ ನಿರ್ವಹಿಸಲಿದೆ’ ಎಂದರು.
‘ಹೀಗೆ ಮಾಡುವುದರಿಂದ ದೂಳು, ವಾಯುಮಾಲಿನ್ಯ ಕಡಿಮೆಯಾಗಲಿದೆ. ಅಲ್ಲದೆ ಈ ಮೂಲಕ ಜೆಟ್ಟಿಯ ಸರಕು ನಿರ್ವಹಣಾ ಸಾಮರ್ಥ್ಯ ವಾರ್ಷಿಕ 67 ಲಕ್ಷ ಟನ್ಗೆ ಹೆಚ್ಚಳವಾಗಲಿದೆ.
‘ಇದೇ ರೀತಿ 14ನೇ ಜೆಟ್ಟಿಯನ್ನು ಯಾಂತ್ರೀಕರಣಗೊಳಿಸಲು ಪ್ರಸ್ತಾವನೆಯನ್ನು ಸರ್ಕಾರಕ್ಕೆ ಕಳುಹಿಸಲಾಗುವುದು. ಈ ಜೆಟ್ಟಿಯಲ್ಲಿ ಸರಕು ನಿರ್ವಹಣಾ ಸಾಮರ್ಥ್ಯ 60 ಲಕ್ಷ ಟನ್ ಆಗಲಿದ್ದು, ₹280 ಕೋಟಿ ವೆಚ್ಚದಲ್ಲಿ ಯಾಂತ್ರೀಕರಣ ಕೆಲಸವನ್ನು ಎರಡು ಹಂತಗಳಲ್ಲಿ ಕೈಗೆತ್ತಿಕೊಳ್ಳಲಾಗುವುದು. ಗ್ರಾಹಕರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕಂಟೈನರ್ ಮತ್ತು ಇತರ ಸರಕು ನಿರ್ವಹಣೆಗಾಗಿ ₹ 280 ಕೋಟಿ ವೆಚ್ಚದಲ್ಲಿ ಬಹೂಪಯೋಗಿ ಜೆಟ್ಟಿ (17ನೇ ಜೆಟ್ಟಿ) ನಿರ್ಮಿಸುವ ಉದ್ದೇಶವೂ ಬಂದರಿಗೆ ಇದೆ. ಖಾಸಗಿ ಸಾರ್ವಜನಿಕ ಸಹಭಾಗಿತ್ವದಲ್ಲಿ ಈ ಜೆಟ್ಟಿಯ ನಿರ್ವಹಣೆಯನ್ನು ಸಂಪೂರ್ಣ ಯಾಂತ್ರೀಕರಣಗೊಳಿಸಲಾಗುವುದು’ ಎಂದರು.
ವಹಿವಾಟು: 2018ರ ಏಪ್ರಿಲ್ನಿಂದ ಡಿಸೆಂಬರ್ ಅವಧಿಗೆ ಎನ್ಎಂಪಿಟಿ 3.19 ಕೋಟಿ ಟನ್ ಸರಕು ನಿರ್ವಹಣೆ ಮಾಡಿದ್ದು 2017ನೇ ಸಾಲಿಗಿಂತ ಶೇ 2.89ರ ಪ್ರಗತಿ ಸಾಧಿಸಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.