ನವದೆಹಲಿ (ಪಿಟಿಐ): 16ನೇ ಹಣಕಾಸು ಆಯೋಗದ ಪ್ರಥಮ ಸಭೆಯು ಅಧ್ಯಕ್ಷ ಅರವಿಂದ್ ಪನಗಡಿಯಾ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.
ಆಯೋಗದ ಕಾರ್ಯದರ್ಶಿ ರಿತ್ವಿಕ್ ರಂಜನಂ ಪಾಂಡೆ ಅವರು, ಆಯೋಗದ ಅಧ್ಯಕ್ಷರು ಮತ್ತು ಸದಸ್ಯರನ್ನು ಸ್ವಾಗತಿಸಿದರು.
ಕಳೆದ ವರ್ಷದ ಡಿಸೆಂಬರ್ನಲ್ಲಿ ರಾಷ್ಟ್ರಪತಿ ಅವರ ಆದೇಶದ ಮೇರೆಗೆ ಕೇಂದ್ರ ಹಣಕಾಸು ಸಚಿವಾಲಯವು ಸೂಚಿಸಿರುವ ನಿಯಮಾವಳಿಗಳ ಬಗ್ಗೆ ಚರ್ಚಿಸಲಾಯಿತು. ಕೇಂದ್ರ ಹಾಗೂ ರಾಜ್ಯಗಳ ನಡುವಿನ ತೆರಿಗೆ ಹಂಚಿಕೆ, ರಾಜ್ಯದಲ್ಲಿ ಸಂಚಿತ ನಿಧಿಯನ್ನು ಹೆಚ್ಚಿಸಿ ಗ್ರಾಮ ಪಂಚಾಯಿತಿ ಮತ್ತು ನಗರ ಸ್ಥಳೀಯ ಸಂಸ್ಥೆಗಳಿಗೆ ನೀಡುವ ಶಿಫಾರಸು ಕುರಿತಂತೆ ಚರ್ಚೆ ನಡೆಯಿತು.
ರಾಜ್ಯಗಳಿಗೆ ತೆರಿಗೆ ಹಂಚಿಕೆ ಮತ್ತು ವರಮಾನ ವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಆಯೋಗವು, ರಾಷ್ಟ್ರಪತಿ ಅವರಿಗೆ 2025ರ ಅಕ್ಟೋಬರ್ 31ರೊಳಗೆ ವರದಿ ಸಲ್ಲಿಸಲಿದೆ. 2026ರ ಏಪ್ರಿಲ್ 1ರಿಂದ ಈ ಶಿಫಾರಸುಗಳು ಜಾರಿಗೆ ಬರುತ್ತವೆ.
ಕೇಂದ್ರದ ನಿವೃತ್ತ ಅಧಿಕಾರಿಗಳಾದ ಅಜಯ್ ನಾರಾಯಣ್ ಝಾ, ಅನ್ನಿ ಜಾರ್ಜ್ ಮ್ಯಾಥ್ಯೂ ಹಾಗೂ ಅರ್ಥಾ ಗ್ಲೋಬಲ್ನ ಕಾರ್ಯ ನಿರ್ವಾಹಕ ನಿರ್ದೇಶಕ ನಿರಂಜನ್ ರಾಜಾಧ್ಯಕ್ಷ ಅವರು ಪೂರ್ಣಕಾಲಿಕ ಸದಸ್ಯರಾಗಿದ್ದಾರೆ. ಎಸ್ಬಿಐ ಗ್ರೂಪ್ನ ಮುಖ್ಯ ಹಣಕಾಸು ಸಲಹೆಗಾರರಾದ ಸೌಮ್ಯ ಕಾಂತಿ ಘೋಷ್ ಅವರು ಅರೆಕಾಲಿಕ ಸದಸ್ಯರಾಗಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.