ನವದೆಹಲಿ: ಕನಸಿನ ಕಂಪನಿ ಅಥವಾ ಹೊಸ ಸ್ಟಾರ್ಟ್ಅಪ್ (ನವೋದ್ಯಮ) ಆರಂಭಿಸಲು ಹಂಬಲಿಸುವ ಯುವಕರು ಮೊದಲು ತಮ್ಮ ಕೆಲಸ ಮೇಲಿನ ಬದ್ಧತೆ, ಪರಿಶ್ರಮ ಹಾಗೂ ಒತ್ತಡ ನಿರ್ವಹಣೆಯೊಂದಿಗೆ ಯಾವುದೇ ವಿಷಯಕ್ಕೂ ವಿಚಲಿತರಾಗದಂತೆ ಗುರಿ ಸಾಧಿಸುವತ್ತ ತಮ್ಮ ಗಮನವನ್ನು ಕೇಂದ್ರೀಕರಿಸಬೇಕು ಎಂದು ಆಹಾರ ಡೆಲಿವರಿ ಕಂಪನಿ ಜೊಮಾಟೊ ಸಿಇಒ ದೀಪಿಂದರ್ ಗೋಯಲ್ ಸಲಹೆ ನೀಡಿದ್ದಾರೆ.
ಸ್ಟಾರ್ಟ್ಅಪ್ ಮಹಾಕುಂಭ ಸಮಾರಂಭದಲ್ಲಿ ಮಾತನಾಡಿದ ಗೋಯಲ್, ಉತ್ಸಾಹ ಹಾಗೂ ಒಳ್ಳೆಯ ಉದ್ದೇಶದಿಂದ ಕಂಪನಿಯನ್ನು ಮುನ್ನಡೆಸಬೇಕೇ ಹೊರತು ಕೇವಲ ಹಣಗಳಿಸುವ ಗುರಿಯೊಂದಿಗೆ ಯಾವುದೇ ಕಂಪನಿಯನ್ನು ಸ್ಥಾಪಿಸಬಾರದು. ಇಂತಹ ಮನಃಸ್ಥಿತಿ ಕಂಪನಿ ಯಶಸ್ಸಿಗೆ ಕಾರಣವಾಗುವುದಿಲ್ಲ ಎಂದು ಹೇಳಿದರು.
ನಾನು ಅನೇಕ ಹೊಸ ಉದ್ಯಮಿಗಳನ್ನು ನೋಡಿದ್ದೇನೆ. ಅವರೊಂದಿಗೆ ಸಮಾಲೋಚನೆಯನ್ನು ಮಾಡಿದ್ದೇನೆ. ನೀವು ಏಕೆ ಕಂಪನಿಯನ್ನು ಸ್ಥಾಪಿಸಿದ್ದೀರಿ ಎಂದು ಕೇಳಿದಾಗ ಬಹಳಷ್ಟು ಜನರು ಹಣ ಗಳಿಸುವ ಉದ್ದೇಶದಿಂದ ಎಂದು ಉತ್ತರ ನೀಡಿದರು. ಆದರೆ ಹೀಗೆ ಲಾಭ ಸಂಪಾದನೆ ಒಂದೇ ಉದ್ದೇಶದಿಂದ ಕಂಪನಿಯನ್ನು ಪ್ರಾರಂಭಿಸಿದರೆ ಮುಂದೊಂದು ದಿನ ಕಂಪನಿಯ ಕೆಟ್ಟ ಆಡಳಿತಕ್ಕೆ ಕಾರಣವಾಗುತ್ತದೆ ಎಂದು ಗೋಯಲ್ ಎಚ್ಚರಿಕೆ ನೀಡಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.