ADVERTISEMENT

ಮತ್ಸ್ಯಕ್ಷಾಮ: ಒಣಮೀನು ದರ ಏರಿಕೆ, ಕಾರವಾರದ ಮಾರುಕಟ್ಟೆಯಲ್ಲಿ ವ್ಯಾಪಾರ ಕುಂಠಿತ

ಮೀನು ವರ್ತಕರ ಚಿಂತೆ

​ಪ್ರಜಾವಾಣಿ ವಾರ್ತೆ
Published 8 ಮೇ 2019, 11:09 IST
Last Updated 8 ಮೇ 2019, 11:09 IST
ಕಾರವಾರದಲ್ಲಿ ರಸ್ತೆ ಬದಿ ಒಣಮೀನು ಒಣಗಲು ಇಟ್ಟಿರುವುದು 
ಕಾರವಾರದಲ್ಲಿ ರಸ್ತೆ ಬದಿ ಒಣಮೀನು ಒಣಗಲು ಇಟ್ಟಿರುವುದು    

ಕಾರವಾರ:ಈ ಬಾರಿ ಮೀನುಗಾರಿಕೆಯ ಆರಂಭದಲ್ಲಿ ಭರವಸೆ ಮೂಡಿಸಿದ್ದ ಮೀನುಬೇಟೆ, ಏಪ್ರಿಲ್ ತಿಂಗಳಿನಲ್ಲಿ ಕ್ಷಾಮ ಕಂಡಿದೆ. ಇದರಿಂದ ಈಗಾಗಲೇ ಒಣಮೀನಿನ ಧಾರಣೆಯಲ್ಲಿಏರಿಕೆಯಾಗಿದೆ. ಕಳೆದ ವರ್ಷಕ್ಕಿಂತ ₹ 50ರಿಂದ ₹ 100ವರೆಗೂ ಹೆಚ್ಚಳವಾಗಿದೆ.

ಜೂನ್‌ನಿಂದ ಆಗಸ್ಟ್‌ವರೆಗೆ ಆಳ ಸಮುದ್ರ ಮೀನುಗಾರಿಕೆಗೆ ನಿಷೇಧವಿರುತ್ತದೆ. ಹಾಗಾಗಿ ಆಗ ಮೀನು ಖಾದ್ಯ ಪ್ರಿಯರು ಒಣಮೀನನ್ನು ಅಡುಗೆಗೆ ಬಳಸುತ್ತಾರೆ. ಮಳೆಗಾಲದಲ್ಲಿ ಬಳಸಲು‌ಏಪ್ರಿಲ್, ಮೇ ತಿಂಗಳಲ್ಲಿ ಒಣಮೀನು ಖರೀದಿಸಿ ಸಂಗ್ರಹಿಸಿಟ್ಟುಕೊಳ್ಳುತ್ತಾರೆ.

ಈ ಬಾರಿ ಸಮುದ್ರದಲ್ಲಿ ಮೀನುಗಾರರ ಬಲೆಗೆ ಕಡಿಮೆ ಮೀನುಗಳು ಸಿಗುತ್ತಿವೆ. ಹಾಗಾಗಿ ಮಾರುಕಟ್ಟೆಯಲ್ಲಿ ಒಣಮೀನಿನ ದರ ಏರಿಕೆಯಾಗಿದೆ.ದೋಡಿ ₹ 100, ದೊಡ್ಡ ಸೆಟ್ಲೆ ಎರಡು ಪಾವಿಗೆ ₹ 100, ಮರಿಸೆಟ್ಲೆ ನಾಲ್ಕುಪಾವಿಗೆ ₹ 100, ಮೋರಿ ಜಾತಿಯ ಎರಡು ಮೀನಿಗೆ ₹1,000ದಿಂದ₹ 1,400, ಪೇಡಿ ಬುಟ್ಟಿಗೆ ₹ 200, ಡೈನಾ ಬುಟ್ಟಿಗೆ ₹ 150, ಬೆಳ್ಳಂಜಿ ಬುಟ್ಟಿಗೆ ₹ 500, ಬಂಗುಡೆ ಐದಕ್ಕೆ ₹100, 100ಕ್ಕೆ ₹ 1,500ರಿಂದ ₹ 1,800ರಂತೆ ಮಾರಾಟವಾಗುತ್ತಿವೆ.

ADVERTISEMENT

ಕಳೆದ ಬಾರಿ ಬಂಗುಡೆ ಮೀನಿಗೆ ₹800ರಿಂದ₹ 1,000ವಿತ್ತು. ಉಳಿದ ಜಾತಿಯ ಮೀನುಗಳ ಬೆಲೆ ಕೂಡಾ ಸರಾಸರಿ ₹ 50ರಿಂದ ₹ 100 ಏರಿಕೆ ಆಗಿದೆ ಎನ್ನುತ್ತಾರೆ ಮೀನು ಮಾರಾಟಗಾರರು.

ಒಣ ಮೀನು ಲಾಭವಲ್ಲ

‘ಸಾಮಾನ್ಯವಾಗಿ ಏಪ್ರಿಲ್ ತಿಂಗಳ ಅಂತ್ಯದಲ್ಲಿ ಒಣ ಮೀನಿಗೆ ಬೇಡಿಕೆ ಹೆಚ್ಚಿರುತ್ತದೆ.ಆದರೆ, ಈ ವರ್ಷ ಮಾರ್ಚ್ ತಿಂಗಳ ಅಂತ್ಯದಿಂದಲೇ ಇದರವಹಿವಾಟು ನಡೆಯುತ್ತಿದೆ.ಹಸಿ ಮೀನನ್ನು ಖರೀದಿಸಿ ಒಣಗಿಸಿದರೆ ಹೆಚ್ಚಿನ ತೂಕವಿರುವುದಿಲ್ಲ. ಸಾವಿರಾರು ರೂಪಾಯಿಗೆ ಖರೀದಿಸಿದ ಹಸಿ ಮೀನನ್ನು ಒಣಗಿಸಿ ಹೆಚ್ಚಿನ ದರಕ್ಕೆ ಮಾರಬೇಕು. ಆದರೆ, ದರ ಹೆಚ್ಚಾಯ್ತು ಎಂದು ಯಾರೂ ಖರೀದಿಸುವುದಿಲ್ಲ. ಇದರಿಂದ ನಷ್ಟವೇ ಹೆಚ್ಚು ಎನ್ನುವುದು ಅವರ ಅಭಿಪ್ರಾಯ.

ಒಣಮೀನು ತಯಾರಿ

ಸಮುದ್ರದಿಂದ ಹಿಡಿದು ತಂದ ಮೀನನ್ನು ಸಮುದ್ರದ ನೀರಿನಲ್ಲೇ ಸ್ವಚ್ಛವಾಗಿ ತೊಳೆಯಲಾಗುತ್ತದೆ. ಬಳಿಕಎರಡು ಮೂರು ದಿನ ಉಪ್ಪು ಹಾಕಿಇಡಲಾಗುತ್ತದೆ. ಬಳಿಕ ಮೀನನ್ನು ನಾಲ್ಕೈದು ದಿನ ಬಿಸಿಲಿನಲ್ಲಿ ಒಣಗಿಸಲಾಗುತ್ತದೆ. ಈ ಮೀನುಆರು ತಿಂಗಳವರೆಗೂ ಹಾಳಾಗುವುದಿಲ್ಲ. ಬಹುತೇಕ ಎಲ್ಲಜಾತಿಯ ಮೀನುಗಳನ್ನೂ ಈ ಪ್ರಕ್ರಿಯೆಯಲ್ಲಿ ಬಳಸಬಹುದು.

ಒಣಗಿಸಲು ಸ್ಥಳವಿಲ್ಲ

‘ಮೀನು ಒಣಗಿಸಲು ಕೂಡಾ ಸೂಕ್ತವಾದ ಸ್ಥಳವಿಲ್ಲ. ಸೀಬರ್ಡ್ ನೌಕಾನೆಲೆ, ವಾಣಿಜ್ಯ ಬಂದರು ಮುಂತಾದ ಯೋಜನೆಗಳಿಂದ ಸ್ಥಳಾಭಾವ ಆಗಿದೆ. ಬೈತಖೋಲ್ ಮೀನುಗಾರಿಕಾ ಬಂದರಿನಲ್ಲಿ ಮಾತ್ರ ಸ್ವಲ್ಪ ಸ್ಥಳಾವಕಾಶವಿದೆ. ಬೇಲೆಕೇರಿಯಲ್ಲಿ ಅದಿರು ಸಾಗಣೆ ಆರಂಭಿಸಿದ ಬಳಿಕ ಅಲ್ಲಿಯೂ ಮೀನುಗಾರರಿಗೆ ಸ್ಥಳಾವಕಾಶ ಇಲ್ಲದಂತಾಯಿತು ಒಣಮೀನು ವ್ಯಾಪಾರಿ ಬೇಬಿ ಕುಡ್ತಳಕರ್ಸಮಸ್ಯೆಯನ್ನು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.