ನವದೆಹಲಿ: ಆರ್ಥಿಕ ಚೇತರಿಕೆಯು ನಿಧಾನವಾಗಿ ಶಕ್ತಿ ಪಡೆದುಕೊಳ್ಳುತ್ತಿದೆಯಾದರೂ, ಹಣದುಬ್ಬರ ಪ್ರಮಾಣವು ಅಲ್ಪಾವಧಿಯಲ್ಲಿ ಹೆಚ್ಚಿನ ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ.
ಈ ವರ್ಷದ ಬಹುಪಾಲು ಅವಧಿಯಲ್ಲಿ ಆಹಾರ ಪದಾರ್ಥಗಳು ದುಬಾರಿಯಾಗಿದ್ದ ಕಾರಣ, ಹಣದುಬ್ಬರ ಪ್ರಮಾಣವೂ ಹೆಚ್ಚಿನ ಮಟ್ಟದಲ್ಲಿಯೇ ಇದೆ. ಹಣದುಬ್ಬರವು ಮಾರ್ಚ್ನಲ್ಲಿ ಶೇಕಡ 5.91ರಷ್ಟು ಇತ್ತು. ಉಳಿದಂತೆ ಇದು ಶೇಕಡ 6.58ರಿಂದ ಶೇ 7.61ರ ಪ್ರಮಾಣದಲ್ಲಿ ಇದೆ.
ಚಿಲ್ಲರೆ ಹಣದುಬ್ಬರ ದರವು ಹಾಲಿ ಆರ್ಥಿಕ ವರ್ಷದಲ್ಲಿ ಸರಾಸರಿ ಶೇ 6.3ರ ಮಟ್ಟದಲ್ಲಿ ಇರಲಿದೆ. ಬೇರೆ ಬೇರೆ ವಲಯಗಳ ಉತ್ಪನ್ನಗಳ ಬೇಡಿಕೆಯಲ್ಲಿ ಚೇತರಿಕೆ ಕಂಡುಬರುತ್ತಿರುವ ಕಾರಣ, ಹಣದುಬ್ಬರ ಪ್ರಮಾಣವು ಹೆಚ್ಚಿನ ಮಟ್ಟದಲ್ಲಿಯೇ ಇರುವ ಸಾಧ್ಯತೆ ಇದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಗಾರು ಹಂಗಾಮಿನ ಬೆಳೆ ಚೆನ್ನಾಗಿ ಆಗಿದ್ದು, ಆ ಬೆಳೆ ಈಗ ಮಾರುಕಟ್ಟೆ ಪ್ರವೇಶಿಸಲಿದೆ. ಹಾಗಾಗಿ ಧಾನ್ಯಗಳ ಬೆಲೆಯಲ್ಲಿ ಇಳಿಕೆ ಆಗುವ ನಿರೀಕ್ಷೆ ಇದೆ. ಚಳಿಗಾಲದಲ್ಲಿ ಮಾರುಕಟ್ಟೆಗೆ ಬರುವ ಕೆಲವು ತರಕಾರಿಗಳ ಬೆಲೆಯಲ್ಲಿ ಕೂಡ ಇಳಿಕೆ ಆಗುವ ಸಂಭವ ಇದೆ. ಇನ್ನಿತರ ಆಹಾರ ಉತ್ಪನ್ನಗಳ ಬೆಲೆ ಹೆಚ್ಚಿನ ಮಟ್ಟದಲ್ಲಿಯೇ ಇರಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅಂದಾಜಿಸಿದೆ.
ಆರ್ಥಿಕ ಚಟುವಟಿಕೆಗಳು ಚುರುಕು ಪಡೆಯುತ್ತಿರುವುದರ ಪರಿಣಾಮವಾಗಿ ಕಚ್ಚಾ ತೈಲದ ಬೆಲೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ಚಿಲ್ಲರೆ ಹಣದುಬ್ಬರ ದರವು 2021ರ ಮಾರ್ಚ್ ಅಂತ್ಯದ ವೇಳೆಗೆ ಶೇ 5.8ರ ಮಟ್ಟಕ್ಕೆ ತಗ್ಗಬಹುದು ಎಂಬುದು ಆರ್ಬಿಐ ನಿರೀಕ್ಷೆ. ಹಣದುಬ್ಬರ ಪ್ರಮಾಣವು ಮುಂದಿನ ವರ್ಷದ ಸೆಪ್ಟೆಂಬರ್ ವೇಳೆಗೆ ಶೇ 5.2ರಿಂದ ಶೇ 4.6ರ ಮಟ್ಟಕ್ಕೆ ತಗ್ಗಬಹುದು.
‘ಬೇಡಿಕೆ ಈಗ ಹೆಚ್ಚಾಗುತ್ತಿದೆ. ಹಾಗಾಗಿ, ಪೂರೈಕೆ ವ್ಯವಸ್ಥೆಯು ತುಸು ಸರಿದಾರಿಗೆ ಬಂದರೂ ಹಣದುಬ್ಬರ ಪ್ರಮಾಣವು ತಕ್ಷಣಕ್ಕೆ ಕೆಳಕ್ಕೆ ಬರುವುದಿಲ್ಲ’ ಎಂದು ರೇಟಿಂಗ್ ಸಂಸ್ಥೆ ಇಕ್ರಾದ ಪ್ರಧಾನ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.