ADVERTISEMENT

ಸೆಬಿ’ಗೆ ಹೆಚ್ಚು ಅಧಿಕಾರ ಅಗತ್ಯ: ಅಧ್ಯಕ್ಷ ಅಜಯ್ ತ್ಯಾಗಿ ಪ್ರತಿಪಾದನೆ

ಪಿಟಿಐ
Published 20 ನವೆಂಬರ್ 2019, 20:00 IST
Last Updated 20 ನವೆಂಬರ್ 2019, 20:00 IST
ಅಜಯ್‌ ತ್ಯಾಗಿ
ಅಜಯ್‌ ತ್ಯಾಗಿ   

ಮುಂಬೈ: ‘ಅಕ್ರಮಗಳನ್ನು ಬಯಲಿಗೆ ಎಳೆಯುವ ಅನಾಮಧೇಯರಲ್ಲಿ ವಿಶ್ವಾಸ ಮೂಡಿಸಲು ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಗೆ (ಸೆಬಿ) ಹೆಚ್ಚು ಅಧಿಕಾರ ಬೇಕಾಗಿದೆ’ ಎಂದು ಮಂಡಳಿ ಅಧ್ಯಕ್ಷ ಅಜಯ್‌ ತ್ಯಾಗಿ ಹೇಳಿದ್ದಾರೆ.

ಇನ್ಫೊಸಿಸ್‌ನ ಲೆಕ್ಕಪತ್ರಗಳಲ್ಲಿ ಅಕ್ರಮಗಳನ್ನು ಎಸಗಲಾಗಿದೆ ಎಂದು ಅನಾಮಧೇಯರು ‘ಸೆಬಿ’ಗೆ ದೂರು ಸಲ್ಲಿಸುವ ಬದಲಿಗೆ ಅಮೆರಿಕದ ಸೆಕ್ಯುರಿಟಿ ಎಕ್ಸ್‌ಚೇಂಜ್‌ ಕಮಿಷನ್‌ಗೆ (ಎಸ್‌ಇಸಿ) ದೂರು ನೀಡಿದ್ದರು. ಈ ಕಾರಣಕ್ಕೆ ತ್ಯಾಗಿ ಅವರ ಹೇಳಿಕೆಗೆ ಮಹತ್ವ ಬಂದಿದೆ. ಇನ್ಫೊಸಿಸ್‌ ಷೇರು ಅಮೆರಿಕದ ಷೇರುಪೇಟೆಯಲ್ಲಿಯೂ ವಹಿವಾಟು ನಡೆಸುತ್ತಿರುವುದರಿಂದ ಅನಾಮಧೇಯರು ‘ಎಸ್‌ಇಸಿ’ಗೆ ದೂರು ನೀಡಿದ್ದಾರೆ.

ನಿರ್ದೇಶಕ ಮಂಡಳಿಯ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡುತ್ತಿದ್ದರು. ‘ಷೇರುಪೇಟೆಯಲ್ಲಿ ವಹಿವಾಟು ನಡೆಸುವವರ ಪ್ರತಿಯೊಂದು ವಿಷಯದ ಬಗ್ಗೆ ನಾವು ಅವರ ಜತೆ ಸಂವಾದ ನಡೆಸಿ ವಿವೇಕದಿಂದಲೇ ವರ್ತಿಸುತ್ತೇವೆ. ಈ ಬಗ್ಗೆ ಬಡಾಯಿಕೊಚ್ಚಿಕೊಳ್ಳಲು ನಾನು ಇಷ್ಟಪಡುವುದಿಲ್ಲ. ಅನಾಮಧೇಯ ದೂರುದಾರರು ಇನ್ಫೊಸಿಸ್‌ ವಿರುದ್ಧ ಅಮೆರಿಕದ ಷೇರು ನಿಯಂತ್ರಣ ಮಂಡಳಿಗೆ (ಎಸ್‌ಇಸಿ) ದೂರು ನೀಡಿರುವ ಬಗ್ಗೆ ನನ್ನಲ್ಲಿ ಯಾವುದೇ ಉತ್ತರ ಇಲ್ಲ. ‘ಸೆಬಿ’ ಸಾಕಷ್ಟು ಬಲಿಷ್ಠವಾಗಿದೆ ಎನ್ನುವ ಅಭಿಪ್ರಾಯಕ್ಕೆ ಈ ವಿದ್ಯಮಾನವು ವ್ಯತಿರಿಕ್ತವಾಗಿದೆ ಎಂದಷ್ಟೇ ಹೇಳಬಲ್ಲೆ’ ಎಂದು ಉತ್ತರಿಸಿದ್ದಾರೆ.

ADVERTISEMENT

‘ಈ ಅರೆ ನ್ಯಾಯಾಂಗ ಕೆಲಸವನ್ನು ನಾವು ತುಂಬ ಗಂಭೀರವಾಗಿ ಪರಿಗಣಿಸಿದ್ದೇವೆ. ಹಿಂದೆ ನಿರ್ಧಾರಕ್ಕೆ ಬರಲು ಸಾಕಷ್ಟು ವಿಳಂಬವಾಗುತ್ತಿತ್ತು. ಒಂದೂವರೆ ವರ್ಷದಲ್ಲಿ ಈ ನಿಟ್ಟಿನಲ್ಲಿ ಸಾಕಷ್ಟು ಸುಧಾರಣೆಯಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.