ನವದೆಹಲಿ: ಕೇಂದ್ರ ಸರ್ಕಾರಿ ಸ್ವಾಮ್ಯದ ಆರು ಉದ್ದಿಮೆಗಳು ಆರಂಭಿಕ ಸಾರ್ವಜನಿಕ ನೀಡಿಕೆ (ಐಪಿಒ) ಮೂಲಕ ಬಂಡವಾಳ ಸಂಗ್ರಹಿಸಿ ಷೇರುಪೇಟೆಯಲ್ಲಿ ವಹಿವಾಟು ನಡೆಸಲಿವೆ.
ಕೇಂದ್ರೋದ್ಯಮಗಳಲ್ಲಿ ಒಂದಾಗಿರುವ ಕುದುರೆಮುಖ ಕಬ್ಬಿಣ ಅದಿರು ಕಂಪನಿಯು (ಕೆಐಒಸಿಎಲ್) ಹೂಡಿಕೆದಾರರಿಗೆ ಕೊಡಮಾಡುವ ಹೆಚ್ಚುವರಿ ಷೇರುಗಳ ಕೊಡುಗೆ (ಎಫ್ಪಿಒ) ಮೂಲಕ ಬಂಡವಾಳ ಸಂಗ್ರಹಿಸಲಿದೆ.
‘ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಚಿವ ಸಂಪುಟ ಸಮಿತಿಯು ಐಪಿಒ ಮತ್ತು ಎಫ್ಪಿಒ ಮೂಲಕ ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಈ ಕೇಂದ್ರೋದ್ಯಮಗಳಿಗೆ ಅನುಮತಿ ನೀಡಿದೆ’ ಎಂದು ಕೇಂದ್ರ ಕಾನೂನು ಸಚಿವ ರವಿ ಶಂಕರ್ ಪ್ರಸಾದ್ ಅವರು ತಿಳಿಸಿದ್ದಾರೆ.
ಟೆಲಿಕಮ್ಯುನಿಕೇಷನ್ ಕನ್ಸಲ್ಟಂಟ್ಸ್ (ಇಂಡಿಯಾ) ಲಿಮಿಟೆಡ್ (ಟಿಸಿಐಎಲ್), ರೇಲ್ಟೆಲ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್, ನ್ಯಾಷನಲ್ ಸೀಡ್ ಕಾರ್ಪೊರೇಷನ್ ಇಂಡಿಯಾ ಲಿಮಿಟೆಡ್ (ಎನ್ಎಸ್ಸಿ), ತೆಹ್ರಿ ಹೈಡ್ರೊ ಡೆವಲಪ್ಮೆಂಟ್ ಕಾರ್ಪೊರೇಷನ್ (ಟಿಎಚ್ಡಿಸಿಐಎಲ್), ವಾಟರ್ ಆ್ಯಂಡ್ ಪವರ್ ಕನ್ಸಲ್ಟನ್ಸಿ ಸರ್ವಿಸಸ್ (ಇಂಡಿಯಾ) ಲಿಮಿಟೆಡ್ (ಡಬ್ಲ್ಯುಎಪಿಸಿಒಎಸ್), ಎಫ್ಸಿಐ ಅರವಳಿ ಜಿಪ್ಸಂ ಆ್ಯಂಡ್ ಮಿನರಲ್ಸ್ (ಇಂಡಿಯಾ) ಲಿಮಿಟೆಡ್ (ಎಫ್ಎಜಿಎಂಐಎಲ್) – ಐಪಿಒ ಬಿಡುಗಡೆ ಮಾಡಲಿವೆ.
ಕುದುರೆಮುಖ ಕಬ್ಬಿಣ ಅದಿರು ಕಂಪನಿ (ಕೆಐಒಸಿಎಲ್), ‘ಐಎಫ್ಒ’ ಬಿಡುಗಡೆ ಮಾಡಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.