ಮುಂಬೈ/ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಅವಧಿಗೂ ಮುನ್ನವೇ ₹15 ಸಾವಿರ ಕೋಟಿ ಮೌಲ್ಯದ ಸರ್ಕಾರಿ ಸಾಲಪತ್ರಗಳನ್ನು ಖರೀದಿಸಲು ನಿರ್ಧರಿಸಿದೆ.
ಮಾರ್ಚ್ 30ರಂದು ಖರೀದಿಗೆ ನಿರ್ಧರಿಸಲಾಗಿತ್ತು. ಆದರೆ, ಸದ್ಯದ ನಗದು ಮತ್ತು ಹಣಕಾಸು ಸ್ಥಿತಿಗಳನ್ನು ಗಮನದಲ್ಲಿ ಇಟ್ಟುಕೊಂಡು ನಾಲ್ಕು ದಿನ ಮುಂಚಿತವಾಗಿಯೇ ಅಂದರೆ ಮಾರ್ಚ್ 26ರಂದು ಖರೀದಿಸಲು ನಿರ್ಧರಿಸಿದೆ.ಮಾರುಕಟ್ಟೆಗೆ ಹೆಚ್ಚಿನ ನಗದು ಲಭ್ಯವಿರುವಂತೆ ಮಾಡುವ ಉದ್ದೇಶದಿಂದಮಾರ್ಚ್ನಲ್ಲಿ ಎರಡು ಕಂತುಗಳಲ್ಲಿ ಒಟ್ಟಾರೆ ₹30 ಸಾವಿರ ಕೋಟಿ ಮೌಲ್ಯದ ಸಾಲಪತ್ರಗಳನ್ನು ಖರೀದಿಸಲು ಆರ್ಬಿಐ ನಿರ್ಧರಿಸಿದೆ. ಮೊದಲ ಕಂತು ಮಾರ್ಚ್ 24ರಂದು ನಡೆಯಲಿದೆ.
ಕೊರೊನಾ–2 ವೈರಸ್ ಹಾವಳಿ ಯಿಂದಾಗಿ ಹಣಕಾಸು ಮಾರುಕಟ್ಟೆ ಒತ್ತಡದಲ್ಲಿದೆ. ಹೀಗಾಗಿ ಮಾರುಕಟ್ಟೆಯು ಸಹಜವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದೆ.
ವಿತ್ತೀಯ ಉತ್ತೇಜನ: ಜಲನ್ ಒತ್ತಾಯ ಕೊರೊನಾ ವೈರಸ್ನಿಂದ ಆಗಿರುವ ಪರಿಣಾಮಗಳನ್ನು ತಗ್ಗಿಸಲು ವಿತ್ತೀಯ ಉತ್ತೇಜನಾ ಕ್ರಮಗಳನ್ನು ಜಾರಿಗೊಳಿಸುವಂತೆ ಆರ್ಬಿಐನ ಮಾಜಿ ಗವರ್ನರ್ ಬಿಮಲ್ ಜಲನ್ ಒತ್ತಾಯಿಸಿದ್ದಾರೆ.ದೇಶದ ಆರ್ಥಿಕತೆಯು ಈಗಾಗಲೇ ಮಂದಗತಿಯಲ್ಲಿದೆ. ಇದೀಗ ‘ಕೋವಿಡ್–19’ಯಿಂದಾಗಿ ಉದ್ಯೋಗ ನಷ್ಟವಾಗಲಿದ್ದು, ಆರ್ಥಿಕತೆಗೆ ಇನ್ನಷ್ಟು ಸಮಸ್ಯೆಯಾಗಲಿದೆ ಎಂದು ಹೇಳಿದ್ದಾರೆ.
‘ವಿತ್ತೀಯ ಕೊರತೆ ಬಗ್ಗೆ ಈಗ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ದೇಶದ ಸುರಕ್ಷತೆ ದೃಷ್ಟಿಯಿಂದ ವಿತ್ತೀಯ ಕೊರತೆ ಬಗ್ಗೆ ಚಿಂತಿಸದೇ ಹೆಚ್ಚು ವೆಚ್ಚಮಾಡಬೇಕಾದ ಅನಿವಾರ್ಯತೆ ಎದುರಾಗಿದೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.