ADVERTISEMENT

ನಮ್ಮೊಳಗೆ ವಿಶಾಲತತ್ವದ ಹರಡಿಕೆ

ಡಾ. ಗುರುರಾಜ ಕರಜಗಿ
Published 7 ಜುಲೈ 2019, 20:11 IST
Last Updated 7 ಜುಲೈ 2019, 20:11 IST
   

ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯು |
ತುಸಿರಾಗಿ ನಮ್ಮೊಳಾವಗಮಾಡುವಂತೆ ||
ವಿಸದಸತ್ತ್ವಮದೊಂದದೆತ್ತಣಿನೊ ಬಂದು ನ |
ಮ್ಮಸುಗಳೊಳವೊಗುತಿಹುದು – ಮಂಕುತಿಮ್ಮ || 155 ||

ಪದ=ಅರ್ಥ: ಶ್ವಸನನಾಗಸದಿನಿಳಿದದ್ರಿಗುಹೆಗಳೊಳಲೆಯುತುಸಿರಾಗಿ=ಶ್ವಸನ(ಗಾಳಿ)+ಆಗಸದಿಂ+ಇಳಿದು+ಅದ್ರಿ(ಬೆಟ್ಟ)+ಗುಹೆಗಳೊಳು+ಅಲೆಯುತ+ಉಸಿರಾಗಿ, ನಮ್ಮೊಳಾವಗಮಾಡುವಂತೆ=ನಮ್ಮೊಳು+ಆವಗಂ (ಯಾವಾಗಲೂ)+ಆಡುವಂತೆ, ವಿಸದಸತ್ತ್ವಮದೊಂದದೆತ್ತಣಿನೊ=ವಿಸದ(ವಿಶಾಲವಾದ)+ಸತ್ತ್ವಂ+ಅದೊಂದು+ಎತ್ತಣಿನೊ (ಎತ್ತಲಿಂದಲೋ), ನಮ್ಮಸುಗಳೊಳವೊಗುತಿಹುದು=ನಮ್ಮ+ಅಸುಗಳೊಳು (ಪ್ರಾಣಗಳಲ್ಲಿ)+ವೊಗುತಿಹುದು(ಸೇರಿಕೊಳ್ಳುತ್ತಿಹುದು)

ವಾಚ್ಯಾರ್ಥ:ಆಕಾಶದಿಂದ ಗಾಳಿ ಕೆಳಗಿಳಿದು ಬೆಟ್ಟ, ಗುಹೆಗಳಲ್ಲಿ ಅಲೆಯುತ್ತ, ನಮ್ಮ ಉಸಿರಾಗಿ ನಮ್ಮೊಳಗೆ ಯಾವಾಗಲೂಆಡುವಂತೆ ವಿಶಾಲವಾದಯಾವುದೋ ಸತ್ತ್ವಎತ್ತಲಿಂದಲೋ ಬಂದು ನಮ್ಮ ಪ್ರಾಣಗಳಲ್ಲಿ ಸೇರಿಕೊಳ್ಳುತ್ತಿದೆ.

ADVERTISEMENT

ವಿವರಣೆ: ನೀವು ತಿರುಗಾಡಲುಯಾವುದೋಒಂದುಉದ್ಯಾನವನಕ್ಕೆ ಹೋಗಿದ್ದೀರಿ. ಸ್ವಲ್ಪ ಆಯಾಸವೆನ್ನಿಸಿದಾಗ ಅಲ್ಲಿದ್ದಕಲ್ಲುಬೆಂಚಿನ ಮೇಲೆ ವಿಶ್ರಾಂತಿಗೆಂದುಕಣ್ಣುಮುಚ್ಚಿಕ್ಷಣಕಾಲ ಕುಳಿತಿದ್ದೀರಿ. ಆಗ ತಂಪುಗಾಳಿ ಬೀಸಿ ಬಂದು ನಿಮ್ಮ ಮೈಯನ್ನುತಡವುತ್ತದೆ. ಆ ಗಾಳಿಯ ತಂಪು, ಶುದ್ಧತೆ ನಿಮಗೆ ತುಂಬ ಹಿತ ನೀಡುತ್ತದೆ. ಆಗ ನೀವೇನು ಮಾಡುತ್ತೀರಿ? ಬಹುಶ: ದೀರ್ಘಶ್ವಾಸತೆಗೆದುಕೊಂಡು ಆ ಶುದ್ಧ ಗಾಳಿಯನ್ನು ನಿಮ್ಮ ಪುಪ್ಪುಸಗಳಲ್ಲಿ ತುಂಬಿಕೊಂಡು ಸಂತೋಷಪಡುತ್ತೀರಿ. ಒಂದುಕ್ಷಣ ಯೋಚಿಸಿ. ಈ ತಂಪು ಗಾಳಿ ಬಂದದ್ದುಎಲ್ಲಿಂದ? ಅದುಎಲ್ಲಿಯೋಆಕಾಶದಲ್ಲಿ ಹುಟ್ಟಿತಿರುತಿರುಗಿ ಬೆಟ್ಟಗಳ ಮೇಲೆ, ಗುಹೆಗಳೊಳಗೆ, ಸುಳಿದಾಡಿ ನೆಲಕ್ಕಿಳಿದು ನೀವಿದ್ದಲ್ಲಿಗೆ ಬಂದಿದೆ. ಈಗ ಅದು ನಿಮ್ಮ ಉಸಿರಾಗಿದೆ. ಎಲ್ಲಿಯ ಗಾಳಿ? ಎಲ್ಲಿಯ ನೀವು? ಆ ಗಾಳಿ ಬಂದು ನಿಮ್ಮ ಪುಪ್ಪುಸಗಳನ್ನು ತುಂಬಿಕೊಂಡದ್ದು ನಿಮ್ಮ ಭಾಗ್ಯ. ಅದೊಂದು ನಿಸರ್ಗದಋಣ ನಮ್ಮ ಮೇಲೆ.

ಇದೇಚಿಂತನೆಯನ್ನು ಮುಂದುವರೆಸಿದರೆ, ನಮ್ಮ ಉಸಿರಿಗೆ ಈ ಗಾಳಿ ಕಾರಣವಾದರೆ ನಮ್ಮ ಬದುಕಿಗೆಯಾರುಕಾರಣ? ಗಾಳಿ ನಮ್ಮ ಮೈಯನ್ನು ಸ್ಪರ್ಶ ಮಾಡುತ್ತದೆ, ನಮಗೆ ಅದರಅರಿವಿದೆ. ಆದರೆ ಪ್ರಾಣ ಬಂದದ್ದು ಹೇಗೆ? ಎಲ್ಲಿಂದ? ನನ್ನೊಬ್ಬನದಲ್ಲ, ಪ್ರಪಂಚದ ಸರ್ವಪ್ರಾಣಿಗಳಲ್ಲಿ ಜೀವಸಂಚಾರವನ್ನು ಮಾಡಿದ್ದುಯಾರು? ಹಾಗಾದರೆಯಾವುದೋಒಂದು ಶಕ್ತಿ ಈ ಜಗತ್ತುಸೃಷ್ಟಿಯಾಗುವ ಮೊದಲೇಇದ್ದು, ಇದನ್ನು ಸೃಷ್ಟಿಮಾಡಿ ಪ್ರತಿಯೊಂದುಜೀವದಲ್ಲಿ ಪ್ರಾಣಶಕ್ತಿಯನ್ನುಊದಿರಬಹುದುಎಂದು ತತ್ವದರ್ಶಿಗಳು ಯೋಚಿಸಿದರು. ಭಾಗವತ ಹೇಳುತ್ತದೆ:

ಏತಾವದೇವಜಿಜ್ಞಾಸ್ಯಂತತ್ವಜಿಜ್ಞಾಸುನಾssತ್ಮನ: |
ಅನ್ವಯವ್ಯತಿರೇಕಾಭ್ಯಾಂಯತ್ ಸ್ಯಾತ್ ಸರ್ವತ್ರ ಸರ್ವದಾ ||

“ಆತ್ಮತತ್ವದ ಬಗೆಗೆ ಜಿಜ್ಞಾಸೆಗೆ ಒಳಗಾದ ಸಾಧಕಅತ್ಯಂತಜರೂರಾಗಿ ತಿಳಿದುಕೊಳ್ಳಬೇಕಾದ ವಿಷಯಇದು. ಈ ಪ್ರಪಂಚಇದ್ದಾಗಲೂ, ಇರದಿದ್ದಾಗಲೂಯಾವ ಸತ್ವಎಂದೆಂದೂಇದೆಯೋಅದೇ ಪರಮತತ್ವ”.

ಈ ಪರಮತತ್ವ ದೇಹಗಳನ್ನು ಸೃಷ್ಟಿಸಿತು. ಬೆಟ್ಟಗುಹೆಗಳ ಗಾಳಿ ಹೇಗೆ ಕೆಳಗೆ ಬಂದು ನಮ್ಮ ಉಸಿರಾಯಿತೋ, ಅಂತೆಯೇ ವಿಶಾಲವಾದ ಪರಮಸತ್ವ ದೇಹಗಳೊಳಗೆ ಪ್ರಾಣವಾಗಿ ನೆಲೆಸಿತು, ಬದುಕು ಬೆಳೆಸಿತು.

ಇಂತಹ ವಿಸ್ತಾರವಾದ ಚಿಂತನೆಯನ್ನು ನಾಲ್ಕೇ ನಾಲ್ಕು ಸಾಲುಗಳಲ್ಲಿ ಕಟ್ಟಿಕೊಡುವ ಕಗ್ಗಕ್ಕೆ ನಮ್ಮ ಪ್ರಣಾಮಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.