
ಸವದತ್ತಿ ತಾಲ್ಲೂಕು ಧಾರವಾಡ ಜಿಲ್ಲೆಗೆ ಸೇರ್ಪಡೆಯ ಹೋರಾಟ ಸಮಿತಿಯಿಂದ ಗ್ರೇಡ್–2 ತಹಶೀಲ್ದಾರ್
ಎಂ.ಎನ್. ಮಠದ ಅವರಿಗೆ ಮನವಿ ಸಲ್ಲಿಸಲಾಯಿತು
ಸವದತ್ತಿ: ಸವದತ್ತಿ ತಾಲ್ಲೂಕು ಧಾರವಾಡ ಜಿಲ್ಲೆಗೆ ಸೇರ್ಪಡೆಯ ಹೋರಾಟ ಸಮಿತಿಯಿಂದ ಗುರುವಾರ ಇಲ್ಲಿನ ಎಪಿಎಂಸಿಯಿಂದ ತಾಲ್ಲೂಕು ಆಡಳಿತ ಸೌಧದ ವರೆಗೆ ಪಾದಯಾತ್ರೆ ಮೂಲಕ ಪ್ರತಿಭಟಿಸಿ, ಗ್ರೇಡ್–2 ತಹಶೀಲ್ದಾರ್ ಎಂ.ಎನ್. ಮಠದ ಅವರಿಗೆ ಮನವಿ ಸಲ್ಲಿಸಲಾಯಿತು.
ಡಿಸಿಸಿ ಬ್ಯಾಂಕ್ ನಿರ್ದೇಶಕ ವಿರುಪಾಕ್ಷ ಮಾಮನಿ ಮಾತನಾಡಿ, ‘ಸವದತ್ತಿ ಜಿಲ್ಲಾ ಕೇಂದ್ರವಾಗಿಸಲು ಹೋರಾಟ ನಡೆಯಲಿ. ಯಲ್ಲಮ್ಮ ದೇವಿಯ ಕ್ಷೇತ್ರವಾಗಿರುವುದರಿಂದ ಹೆಚ್ಚಿನ ಶ್ರೇಷ್ಠತೆ ಹೊಂದಿ ಜನತೆಗೆ ಸೌಲಭ್ಯಗಳು ಹೆಚ್ಚಲಿವೆ. ಸರ್ಕಾರ ಜಿಲ್ಲಾ ವಿಭಜನೆಗೆ ಮುಂದಾದಲ್ಲಿ ಸವದತ್ತಿ ಜಿಲ್ಲಾ ಕೇಂದ್ರವಾಗಲು ಆದ್ಯತೆ ನೀಡಬೇಕು. ಧಾರವಾಡವನ್ನೂ ಸೇರಲಿಲ್ಲ, ಜಿಲ್ಲಾ ಕೇಂದ್ರವೂ ಆಗಲಿಲ್ಲವಾದರೆ ಯಥಾಸ್ಥಿತಿ ಮುಂದುವರಿಯಲಿದೆ ಎಂದರು.
ಆಡಳಿತಾತ್ಮಕ ದೃಷ್ಟಿಯಿಂದ ಧಾರವಾಡಕ್ಕೆ ಸೇರುವುದು ಉತ್ತಮ. ಆದರೆ, ಈ ವರೆಗೂ ಧಾರವಾಡ ಜಿಲ್ಲೆಯಿಂದ ಆಹ್ವಾನವಿಲ್ಲ. ಜೊತೆಗೆ ಒಂದು ವಿಧಾನಸಭಾ ಕ್ಷೇತ್ರ ಎರಡು ಜಿಲ್ಲೆಯಲ್ಲಿರಲು ಸಾಧ್ಯವಿಲ್ಲ. ಧಾರವಾಡ ಜಿಲ್ಲೆಗೆ ಸೇರುವುದು ಕಷ್ಟಕರ, ಸೇರ್ಪಡೆಯಾದಲ್ಲಿ ಉತ್ತಮ ಬೆಳವಣಿಗೆ ಎಂದರು.
ಕರವೇ ಅಧ್ಯಕ್ಷ ಮಹಾದೇವ ಕಿಚಡಿ ಮಾತನಾಡಿ, ಈಗಾಗಲೆ ಯರಗಟ್ಟಿ ತಾಲ್ಲೂಕಾಗಿದೆ. ಸವದತ್ತಿ ಕೇಂದ್ರ ಸ್ಥಾನದಲ್ಲಿದ್ದು ಸುತ್ತಲಿನ ತಾಲ್ಲೂಕುಗಳು ಕೇವಲ 40 ಕಿ.ಮೀ. ಅಂತರದಲ್ಲಿವೆ. ಕಾರಣ ಸವದತ್ತಿಯನ್ನೇ ಜಿಲ್ಲಾ ಕೇಂದ್ರವನ್ನಾಗಿಸಬೇಕು ಎಂದರು.
ಪ್ರಮುಖ ಎನ್.ಸಿ. ಬೆಂಡಿಗೇರಿ ಮಾತನಾಡಿದರು. ಹೋರಾಟಕ್ಕೆ ದಲಿತ, ವಕೀಲರು, ಕನ್ನಡ ಹಾಗೂ ರೈತಪರ ಸಂಘಟನೆಗಳು ಮತ್ತು ಸ್ಥಳೀಯರು ಬೆಂಬಲ ಸೂಚಿಸಿದರು.
ಜೆ.ವೈ. ಕರಮಲ್ಲಪ್ಪನವರ, ಭರಮಣ್ಣ ಅಣ್ಣಿಗೇರಿ, ಬಸವರಾಜ ತಳವಾರ, ಎ.ಸಿ. ಕಬ್ಬಿಣ, ಮಲ್ಲು ಬೀಳಗಿ, ಗಿರೀಶ ಬೀಳಗಿ, ಅಲ್ಲಮಪ್ರಭು ಪ್ರಭುನವರ, ಹೇಮಂತ ಭಸ್ಮೆ, ಬಸವರಾಜ ಸಾಲಿಮಠ, ನಿಂಗಪ್ಪ ಮೇಟಿ, ಮಲ್ಲು ಕಬ್ಬಿಣ, ಮುದೆಪ್ಪ ಅಮಾತೆನ್ನವರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.