ADVERTISEMENT

ಮಿತಿ ತಪ್ಪಿದ ಆಸೆ

ಡಾ. ಗುರುರಾಜ ಕರಜಗಿ
Published 30 ಆಗಸ್ಟ್ 2020, 20:15 IST
Last Updated 30 ಆಗಸ್ಟ್ 2020, 20:15 IST
ಗುರುರಾಜ ಕರಜಗಿ
ಗುರುರಾಜ ಕರಜಗಿ   

ಇಪ್ಪತ್ತೈದು ವ್ಯಾಪಾರಿಗಳು ವ್ಯಾಪಾರ ಮಾಡಲೆಂದು ದೂರದ ಪ್ರವಾಸಕ್ಕೆ ಹೊರಟರು. ಹೊರಡುವ ಮುನ್ನ ಭಗವಾನ್‌ ಬುದ್ಧನನ್ನು ಸಂದರ್ಶಿಸಿ ಆಶೀರ್ವಾದವನ್ನು ಪಡೆದರು. ನಂತರ ಐದು ನೂರು ಗಾಡಿಗಳಲ್ಲಿ ಸಾಮಾನುಗಳನ್ನು ಹೇರಿಕೊಂಡು ಹೊರಟರು. ಮುಂದೆ ಒಂದು ದಟ್ಟವಾದ ಕಾಡು ಬಂದಿತು. ಅಲ್ಲಿ ಅವರಿಗೆ ದಾರಿ ತಪ್ಪಿತು. ಕಂಡಕಂಡಲ್ಲಿ ಸುತ್ತುತ್ತ ವ್ಯಾಪಾರಿಗಳು ಮತ್ತಷ್ಟು ದಟ್ಟವಾದ ಕಾಡಿನ ಪ್ರದೇಶಕ್ಕೆ ಬಂದರು. ಹಸಿವು, ನೀರಡಿಕೆಯಿಂದ ಕಂಗಾಲಾದರು. ಕೊನೆಗೊಂದು ಅರಳಿ ಮರದ ಕೆಳಗೆ ವಿಶ್ರಾಂತಿಗಾಗಿ ಕುಳಿತರು. ಆ ಮರ ನಾಗರಾಜನದು.

ವ್ಯಾಪಾರಿಗಳು ಮರದಲ್ಲಿ ಒಂದು ವಿಶೇಷವನ್ನು ಗಮನಿಸಿದರು. ಮರದ ಎಲೆಗಳು ಹಸಿಹಸಿಯಾಗಿ ನೀರಿನಲ್ಲಿ ನೆನೆದಂತಿವೆ, ಕೊಂಬೆಗಳಿಂದ ನೀರು ಹನಿಹನಿಯಾಗಿ ಬೀಳುತ್ತಿದೆ. ಬಹುಶಃ ಈ ಮರದ ಕೊಂಬೆಗಳಲ್ಲಿ ಸಾಕಷ್ಟು ನೀರಿರಬೇಕು. ಅದಕ್ಕೆ ಮರದ ಪೂರ್ವ ದಿಕ್ಕಿನ ಕೊಂಬೆಯನ್ನು ಕಡಿದು ಅದರಲ್ಲಿರುವ ನೀರನ್ನು ಕುಡಿಯೋಣ ಎಂದು ತೀರ್ಮಾನಿಸಿ ಪೂರ್ವದ ಕೊಂಬೆಯನ್ನು ಕತ್ತರಿಸಿದರು. ಒಂದು ತಾಳೆಯ ಮರದ ಕಾಂಡದಷ್ಟು ಎತ್ತರದ ನೀರಿನ ಪ್ರವಾಹ ಕೊಂಬೆಯಿಂದ ಬಂದಿತು. ಒಂದು ಸಣ್ಣ ಸರೋವರವೇ ನಿರ್ಮಾಣವಾಯಿತು. ವ್ಯಾಪಾರಿಗಳು ಅದರಲ್ಲೇ ಸ್ನಾನ ಮಾಡಿ, ನೀರು ಕುಡಿದು ಸಂತೋಷಪಟ್ಟರು.

ಅವರಲ್ಲೊಬ್ಬ ದಕ್ಷಿಣ ದಿಕ್ಕಿನ ಕೊಂಬೆಯನ್ನು ಕಡಿದ. ಅದರಿಂದ ತರತರಹದ, ವಿಶೇಷವಾದ ಭೋಜನ ಬಂದಿತು. ಹೊಟ್ಟೆ ತುಂಬ ಊಟ ಮಾಡಿದರು. ಈ ಮರ ಅತ್ಯಂತ ವಿಶೇಷವಾದದ್ದು, ಇನ್ನೇನಾದರೂ ದೊರಕಬಹುದೆಂದು, ಮತ್ತೊಬ್ಬ ಪಶ್ಚಿಮ ದಿಕ್ಕಿನ ಕೊಂಬೆಯನ್ನು ಕಡಿದ. ಅದರಿಂದ ಅಲಂಕೃತರಾದ ಸುಂದರಿಯರು ಹೊರಬಂದರು. ಚೆಂದದ ವಸ್ತ್ರಾಲಂಕಾರಗಳನ್ನು ಹೊಂದಿದ ತರುಣಿಯರು ಒಬ್ಬೊಬ್ಬ ವ್ಯಾಪಾರಿಗೆ ಒಬ್ಬರಂತೆ ಇದ್ದರು. ವ್ಯಾಪಾರಿಗಳು ಅವರನ್ನು ಮುತ್ತಿಕೊಂಡು, ರಮಿಸಿ ಆನಂದಪಟ್ಟರು.

ADVERTISEMENT

ಅವರಿಗೀಗ ವಿಪರೀತ ಆಸೆ ಬಂದಿತು. ಮೂರು ಕೊಂಬೆಗಳಲ್ಲಿ ನಮಗೆ ಇದೆಲ್ಲ ಸಿಗುವುದಾದರೆ ಉತ್ತರದ ಕೊಂಬೆಯಲ್ಲಿ ಮತ್ತೇನೋ ಇರಬೇಕು ಎಂದುಕೊಂಡು ಅದನ್ನು ಕತ್ತರಿಸಿದರು. ಆಹಾ! ಆ ಕೊಂಬೆಯಿಂದ ರಾಶಿ, ರಾಶಿ ಮುತ್ತು, ಹವಳ, ಸ್ಫಟಿಕ, ಬೆಳ್ಳಿ, ಚಿನ್ನ, ವಜ್ರಗಳು ಸುರಿದವು. ಅವನ್ನೆಲ್ಲ ತಮ್ಮ ಐದು ನೂರು ಗಾಡಿಗಳಲ್ಲಿ ತುಂಬಿಕೊಂಡರು. ಆನಂತರ ಅವರು ವಿಚಾರ ಮಾಡಿದರು. ಈ ಮರದ ಕೊಂಬೆಗಳಲ್ಲೇ ಇಷ್ಟೊಂದು ಅದ್ಭುತ ವಸ್ತುಗಳಿರುವುದಾದರೆ, ಮರದಲ್ಲಿ ಬುಡದಲ್ಲಿ ಮತ್ತೇನಿರಬಹುದು? ಹಾಗಾದರೆ ಮರವನ್ನು ಬುಡಸಹಿತ ಕಡಿಯಲು ನಿರ್ಧರಿಸಿದರು.

ಆಗ ಅವರೊಂದಿಗಿದ್ದ ಸಾರ್ಥವಾಹ ಕೈ ಮುಗಿದು ಬೇಡಿಕೊಂಡ, ‘ಬೇಡ, ಈ ಮರ ನಮಗೆ ಏನೆಲ್ಲವನ್ನು ಕೇಳದೆಯೆ ಕೊಟ್ಟಿದೆ. ನಮಗೆ ಆಶ್ರಯವನ್ನು ನೀಡಿ, ಆಹಾರ, ನೀರು, ಸಂತೋಷ, ಐಶ್ವರ್ಯಗಳನ್ನು ಕೊಟ್ಟ ಮರಕ್ಕೆ ನಾವು ಕೃತಜ್ಞರಾಗಿರುವುದನ್ನು ಬಿಟ್ಟು ಕಡಿಯವುದು ಸರಿಯಲ್ಲ’. ಆದರೆ ವ್ಯಾಪಾರಿಗಳಲ್ಲಿ ಹುಟ್ಟಿದ ಅತಿಯಾಸೆಯಿಂದ ಅವರು ಬುಡವನ್ನು ಕಡಿಯತೊಡಗಿದರು. ಆಗ ಕೋಪಗೊಂಡ ನಾಗರಾಜ, ತನ್ನ ಸೈನಿಕರನ್ನು ಕಳುಹಿಸಿ, ಸಾರ್ಥವಾಹನೊಬ್ಬನನ್ನು ಬಿಟ್ಟು ಉಳಿದವರನ್ನು ಕೊಂದು ಹಾಕಿಸಿದ. ಸಾರ್ಥವಾಹನನ್ನು ಸಂಪತ್ತು ತುಂಬಿದ ಐದುನೂರು ಗಾಡಿಗಳೊಂದಿಗೆ ಅವನ ಮನೆಯವರೆಗೂ ಹೋಗಿ ತಲುಪಿಸಿ ಬಂದ.

ಮನುಷ್ಯನಿಗೆ ಆಸೆ ಬೇಕು, ಅದು ಮಿತಿಯಲ್ಲಿರಬೇಕು. ಮಿತಿ ತಪ್ಪಿದರೆ ಅನಾಹುತ ಬೆನ್ನಲ್ಲೇ ಕಾದಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.