ADVERTISEMENT

ದಿನದ ಸೂಕ್ತಿ: ಲಾಭದಲ್ಲಿರುವ ನಷ್ಟ

ಎಸ್.ಸೂರ್ಯಪ್ರಕಾಶ ಪಂಡಿತ್
Published 4 ನವೆಂಬರ್ 2020, 2:33 IST
Last Updated 4 ನವೆಂಬರ್ 2020, 2:33 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಲುಬ್ಧಸ್ಯ ನಶ್ಯತಿ ಯಶಃ ಪಿಶುನಸ್ಯ ಮೈತ್ರೀ

ನಷ್ಟಕ್ರಿಯಸ್ಯ ಕುಲಮರ್ಥಪರಸ್ಯ ಧರ್ಮಃ ।

ವಿದ್ಯಾಫಲಂ ವ್ಯಸನಿನಃ ಕೃಪಣಸ್ಯ ಸೌಖ್ಯಂ

ADVERTISEMENT

ರಾಜ್ಯಂ ಪ್ರಮತ್ತಸಚಿವಸ್ಯ ನರಾಧಿಪಸ್ಯ ।।

ಇದರ ತಾತ್ಪರ್ಯ ಹೀಗೆ:

‘ಲೋಭಿಯ ಯಶಸ್ಸು ನಾಶವಾಗುತ್ತದೆ; ಚಾಡಿ ಹೇಳುವವನಿಗೆ ಸ್ನೇಹ ನಷ್ಟವಾಗುತ್ತದೆ; ಸರಿಯಾದ ಕೆಲಸಗಳನ್ನು ಮಾಡದವನ ಕುಲ ನಾಶವಾಗುತ್ತದೆ; ಹಣವನ್ನಷ್ಟೆ ಎಣಿಸುವವನಿಗೆ ಧರ್ಮನಾಶವಾಗುತ್ತದೆ; ಕೆಟ್ಟ ಹವ್ಯಾಸಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ನಷ್ಟವಾಗುತ್ತದೆ; ಜಿಪುಣನಿಗೆ ಸುಖ ಸಿಗುವುದಿಲ್ಲ; ಹೀಗೆಯೇ, ಮೈಮರೆತ ಮಂತ್ರಿಯನ್ನು ಹೊಂದಿರುವಂಥ ರಾಜನ ರಾಜ್ಯ ನಾಶವಾಗುತ್ತದೆ.’

ಈ ಸುಭಾಷಿತವನ್ನು ಅರ್ಥಮಾಡಿಕೊಳ್ಳುವುದಕ್ಕೆ ಕಷ್ಟವೇನೂ ಇಲ್ಲ. ನಾವು ಯಾವುದೋ ಒಂದು ಗುರಿಯನ್ನು ಇಟ್ಟುಕೊಂಡು, ಅದೇ ಸರ್ವಶ್ರೇಷ್ಠ ಎಂದುಕೊಂಡು ಮುನ್ನಡೆಯುತ್ತಿರುತ್ತೇವೆ. ನಾವು ಆ ಗುರಿಯನ್ನೂ ಮುಟ್ಟಬಹುದು. ಆದರೆ ನಾವು ನಮ್ಮ ದಾರಿಯನ್ನು ಸರಿಯಾಗಿ ಗಮನಿಸದಿದ್ದರೆ ಆಗ ಹಲವು ಬೆಲೆಬಾಳುವ ವಿವರಗಳನ್ನು ನಮ್ಮ ಪ್ರಯಾಣದಲ್ಲಿ ಕಳೆದುಕೊಳ್ಳಬೇಕಾಗುತ್ತದೆ. ಇದನ್ನೇ ಸುಭಾಷಿತ ಹೇಳುತ್ತಿರುವುದು.

ಮೊದಲಿಗೆ ಸುಭಾಷಿತದ ಕೊನೆಯ ಮಾತನ್ನು ನೋಡೋಣ: ’ಮೈಮರೆತ ಮಂತ್ರಿಯನ್ನು ಹೊಂದಿರುವ ರಾಜನ ರಾಜ್ಯ ನಾಶವಾಗುತ್ತದೆ.’

ಈ ಮಾತನ್ನು ಇಂದಿನ ಸಂದರ್ಭಕ್ಕೆ ಹೇಗೆ ಹೊಂದಿಸುವುದು? ಸುಲಭ. ನಮ್ಮ ಕಾಲದಲ್ಲಿ ರಾಜ ಯಾರು? ಪ್ರಜೆಗಳೇ ಪ್ರಭುಗಳು ಅಲ್ಲವೆ? ಹೀಗಾಗಿ ಮೈಮರೆತ ಮಂತ್ರಿಗಳನ್ನು ಪಡೆದಿರುವ ರಾಜರು ಎಂದರೆ ಪ್ರಭುಗಳೇ, ಎಂದರೆ ನಾವೇ. ಆದುದರಿಂದ ಇಂಥ ಮಂತ್ರಿಗಳಿರುವ ನಮ್ಮ ರಾಜ್ಯವೇ ನಾಶವಾಗುತ್ತದೆ – ಎಂದು ಸುಭಾಷಿತ ಹೇಳುತ್ತಿದೆ. ನಮ್ಮ ಕಾಲದ ಮಂತ್ರಿಗಳು ಎಂದರೆ ಕಾರ್ಪೊರೇಟರ್‌ಗಳು, ಎಂಎಲ್‌ಎಗಳು, ಎಂಪಿಗಳು, ರಾಜ್ಯ–ಕೇಂದ್ರ ಸರ್ಕಾರದ ಮಂತ್ರಿಗಳು – ಇವರಲ್ಲಿ ಬಹುಪಾಲು ಜನರು ಮೈಮರೆತಿದ್ದಾರೆಂದು ತಿಳಿಸಿಕೊಡಲು ಸುಭಾಷಿತವೇ ಬೇಕಾಗಿಲ್ಲವಷ್ಟೆ. ಈಗಾಗಲೇ ದಿಕ್ಕು ತಪ್ಪಿರುವರುವ ನಮ್ಮ ವ್ಯವಸ್ಥೆಯನ್ನು ಅನುಭವಿಸುತ್ತಿರುವ ನಮ್ಮೆಲ್ಲರಿಗೂ ಇದು ಸ್ವಯಂ ಅನುಭವವೇದ್ಯವೇ ಆಗಿದೆ.

ಲೋಭಿಯ ಯಶಸ್ಸು ನಾಶವಾಗುತ್ತದೆ; ಏಕೆಂದರೆ ಅವನಿಗೆ ಇನ್ನೊಬ್ಬರಿಗೆ ಕೊಡುವ ಗುಣವೇ ಇರುವುದಿಲ್ಲ. ಚಾಡಿ ಹೇಳುವವನಿಗೆ ಸ್ನೇಹ ನಷ್ಟವಾಗುತ್ತದೆ; ಏಕೆಂದರೆ ಇಂಥ ಅಪಯಕಾರಿ ವ್ಯಕ್ತಿಯ ಜೊತೆ ಯಾರು ತಾನೆ ಸ್ನೇಹವನ್ನು ಉಳಿಸಿಕೊಳ್ಳಲು ಬಯಸುತ್ತಾರೆ? ಸರಿಯಾದ ಕೆಲಸಗಳನ್ನು ಮಾಡದವನ ಕುಲ ನಾಶವಾಗುತ್ತದೆ; ಏಕೆಂದರೆ ಒಬ್ಬ ತಪ್ಪು ಮಾಡಿದರೂ ಅದರ ಫಲವನ್ನು ಇಡಿಯ ಕುಟುಂಬ ಅನುಭವಿಸಬೇಕಾಗುತ್ತದೆ. ಹಣವನ್ನಷ್ಟೆ ಎಣಿಸುವವನಿಗೆ ಧರ್ಮನಾಶವಾಗುತ್ತದೆ; ಏಕೆಂದರೆ ಹಣದ ಗಳಿಕೆಯೇ ಮುಖ್ಯವಾದವನಿಗೆ ಧರ್ಮ–ಅಧರ್ಮಗಳ ತಿಳಿವಳಿಕೆಯೇ ಬೇಡವಾಗಿರುತ್ತದೆ. ಕೆಟ್ಟ ಹವ್ಯಾಸಗಳಿಗೆ ತುತ್ತಾದವನಿಗೆ ವಿದ್ಯೆಯ ಫಲ ನಷ್ಟವಾಗುತ್ತದೆ; ಏಕೆಂದರೆ ನಾವು ಹೇಗೆ ಜೀವನದಲ್ಲಿ ನಡೆದುಕೊಳ್ಳುತ್ತೇವೆ ಎಂಬುದೇ ನಮ್ಮ ಸಾಧನೆಗೆ ಮುಖ್ಯ ದಾರಿಯಾಗಿರುತ್ತದೆ. ಜಿಪುಣನಿಗೆ ಸುಖ ಸಿಗುವುದಿಲ್ಲ; ಏಕೆಂದರೆ ಅವನು ತನ್ನ ಸಂಪತ್ತನ್ನು ಅವನೂ ಅನುಭವಿಸುವುದಿಲ್ಲ, ಇನ್ನೊಬ್ಬರಿಗೂ ಕೊಡುವುದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.