ADVERTISEMENT

ದಿನದ ಸೂಕ್ತಿ: ಇದೇ ಸನಾತನಧರ್ಮ

ಎಸ್.ಸೂರ್ಯಪ್ರಕಾಶ ಪಂಡಿತ್
Published 25 ಆಗಸ್ಟ್ 2020, 16:28 IST
Last Updated 25 ಆಗಸ್ಟ್ 2020, 16:28 IST
ಧ್ಯಾನ–ಪ್ರಾತಿನಿಧಿಕ ಚಿತ್ರ
ಧ್ಯಾನ–ಪ್ರಾತಿನಿಧಿಕ ಚಿತ್ರ   

ಸತ್ಯಂ ಬ್ರೂಯಾತ್‌ ಪ್ರಿಯಂ ಬ್ರೂಯಾತ್‌

ನ ಬ್ರೂಯಾತ್‌ ಸತ್ಯಮಪ್ರಿಯಮ್ ।

ಪ್ರಿಯಂ ಚ ನಾನೃತಂ ಬ್ರೂಯಾತ್‌

ADVERTISEMENT

ಏಷ ಧರ್ಮಃ ಸನಾತನಃ ।।

ಇದರ ತಾತ್ಪರ್ಯ ಹೀಗೆ:

‘ಸತ್ಯವನ್ನು ಹೇಳಬೇಕು. ಪ್ರಿಯವಾದುದನ್ನು ಹೇಳಬೇಕು. ಸತ್ಯವಾದರೂ ಅಪ್ರಿಯವಾದುದನ್ನು ಹೇಳಬಾರದು. ಪ್ರಿಯವಾದುದ್ದಾದರೂ ಸುಳ್ಳನ್ನು ಹೇಳಬಾರದು. ಇದೇ ಸನಾತನಧರ್ಮ.’

ಈ ಶ್ಲೋಕ ನಮಗೆ ಎದುರಾಗಬಹುದಾದ ತುಂಬ ನಾಜೂಕಿನ, ಕಷ್ಟತಮ ಸಂದರ್ಭದ ಬಗ್ಗೆ ಮಾತನಾಡುತ್ತಿದೆ.

ಸತ್ಯವನ್ನೇ ಹೇಳಬೇಕು. ಇದು ನಿಯಮ.

ಸತ್ಯ ಎಂದರೆ ಏನು? ಇದಕ್ಕೆ ಉತ್ತರವನ್ನು ಕಂಡುಕೊಳ್ಳುವುದು ಸುಲಭವಲ್ಲ. ಯಥಾರ್ಥವನ್ನು ಹೇಳುವುದೇ ಸತ್ಯ ಲಕ್ಷಣೀಕರಿಸಲಾದೀತು. ಒಂದು ವಸ್ತುವನ್ನು ನೋಡುತ್ತೇವೆ; ಅದು ಇರುವಂಥ ಸ್ಥಿತಿ, ಅದರ ದಿಟವಾದ ನೆಲೆ – ಇದೇ ಅದರ ಯಥಾರ್ಥಜ್ಞಾನ. ಈ ಮಾತು ಕ್ರಿಯೆಗೂ ಸಲ್ಲುತ್ತದೆ, ವ್ಯಕ್ತಿಗೂ ಸಲ್ಲುತ್ತದೆ. ಹೀಗೆ ಒಂದು ವಸ್ತುವನ್ನೋ ಘಟನೆಯನ್ನೋ ವ್ಯಕ್ತಿಯನ್ನೋ ಕುರಿತು ಅದರ/ಅವನ ದಿಟವಾದ ವಿವರಗಳನ್ನು ಇದ್ದಂತೆಯೇ ಹೇಳುವುದು ಸತ್ಯ ಎಂದು ಎನಿಸಿಕೊಳ್ಳುತ್ತದೆ.

ಇಲ್ಲಿ ಇನ್ನೊಂದು ಪ್ರಶ್ನೆ ಏಳುತ್ತದೆ. ಯಥಾರ್ಥಜ್ಞಾನವನ್ನು ಕಂಡುಕೊಳ್ಳುವುದು ಅಷ್ಟು ಸುಲಭವೇ? ಸುಲಭವಲ್ಲ; ಹೀಗೆ ಕಂಡುಕೊಳ್ಳುವಾಗ ನಾಲ್ಕಾರು ವಿಧದ ಸಮಸ್ಯೆಗಳು ಎದುರಾಗುತ್ತವೆ. ಸದ್ಯಕ್ಕೆ ನಾವು ಈ ವಿಷಯದ ತಾತ್ತ್ವಿಕ ಜಿಜ್ಞಾಸೆಯನ್ನು ಕೈಬಿಡೋಣ. ನಮ್ಮ ಅನುಭವಕ್ಕೆ ಯಾವುದು ಗೋಚರವಾಗುತ್ತದೆಯೋ ಅದನ್ನೇ ಯಥಾರರ್ಥ ಎಂದು ಸ್ವೀಕರಿಸೋಣ. ಈ ಯಥಾರ್ಥವನ್ನು ಹಾಗೆಯೇ ಹೇಳುವುದನ್ನೇ ಸತ್ಯವನ್ನು ಹೇಳುವುದು, ಸತ್ಯವಚನ ಎಂದು ಹೇಳಬಹುದು.

ಈ ಯಥಾರ್ಥ ಹಲವೊಮ್ಮೆ ಹಿತವಾಗಿರುವುದಿಲ್ಲ; ಕಠಿಣವಾಗಿರುತ್ತದೆ, ಕ್ರೂರವಾಗಿರುತ್ತದೆ, ಭಯಂಕರವಾಗಿರುತ್ತದೆ; ಅದನ್ನು ಕೇಳಿ ನೆಮ್ಮದಿಯಿಂದ ಇರುವುದಕ್ಕೆ ಸಾಧ್ಯವಾಗಲಾರದು ಎಂದೆನಿಸುವಷ್ಟು ಅಪ್ರಿಯವೂ ಆಗಿರುತ್ತದೆ. ಆಗೇನು ಮಾಡಬೇಕು? ಸತ್ಯವನ್ನೇ ಹೇಳಬೇಕು ಎಂದಲ್ಲವೆ ವಿಧಿ ಇರುವುದು?

ಸತ್ಯವನ್ನಷ್ಟೇ ಹೇಳುವುದಲ್ಲ; ಪ್ರಿಯವಾದುದನ್ನೇ ಹೇಳಬೇಕು. ಹೀಗಾಗಿ ಸತ್ಯವನ್ನು ಹೇಳಬೇಕು ಎಂಬ ಧಾವಂತದಲ್ಲಿ ಅಪ್ರಿಯವಾದುದನ್ನು ಹೇಳಬಾರದು ಎಂಬುದು ಕೂಡ ಶಾಸ್ತ್ರದ ಸ್ಪಷ್ಟ ನಿಲವು.

ಹೀಗಾಗಿ ಸತ್ಯ, ಅದು ಒಂದು ವೇಳೆ ಅಪ್ರಿಯವಾಗಿದ್ದರೆ ಅದನ್ನು ಹೇಳಬಾರದು – ಎಂದು ಶಾಸ್ತ್ರ ಇಲ್ಲಿ ಹೇಳುತ್ತಿರುವುದು. ಹೀಗೆಂದು ಪ್ರಿಯವಾಗಿರುವ ಸುಳ್ಳನ್ನು ಹೇಳಬಹುದೆ? ಪ್ರಿಯವಾಗಿದೆ ಎಂದು ಅಸತ್ಯವನ್ನು ಹೇಳುವಂತಿಲ್ಲ. ಇದು ಕೂಡ ಶಾಸ್ತ್ರದ ಆದೇಶವೇ.

ಸತ್ಯವನ್ನು ಹೇಳುವಾಗಲೂ ಎಷ್ಟೆಲ್ಲ ಎಚ್ಚರವಾಗಿರಬೇಕೆಂದು ಪರಂಪರೆ ಬಯಸುತ್ತಿರುವುದಾದರೂ ನಮ್ಮ ಹಿತದಿಂದಲೇ, ಮನುಷ್ಯರ ಮೇಲಿನ ಕಾಳಜಿಯಿಂದಲೇ – ಎನ್ನುವುದನ್ನು ಮರೆಯುವಂತಿಲ್ಲ. ಸತ್ಯದ ಉದ್ದೇಶವೇ ಮನುಷ್ಯನನ್ನು, ಅವನ ಜೀವನವನ್ನು ಉದ್ಧರಿಸಲು. ಆದರೆ ಅದೇ ಸತ್ಯ ಅವನಿಗೆ ಮಾರಕವಾಗಬಾರದು ಎಂಬುದು ಶಾಸ್ತ್ರದ ಎಚ್ಚರಿಕೆ.

ಹೀಗೆ ಪರಿಸ್ಥಿತಿಯನ್ನು ಸಮಗ್ರವಾಗಿ ಗ್ರಹಿಸಿ, ಸೂಕ್ಷ್ಮವಾಗಿ ನಿರ್ವಹಿಸುವುದೇ ಸನಾತನಧರ್ಮ ಎನ್ನುವುದನ್ನು ನಾವಿಲ್ಲಿ ಗಮನಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.