ಬೀದರ್: ಭಾರತದಲ್ಲಿ ಪ್ರಾಮಾಣಿಕತೆಗೆ ಕೊರತೆ ಇದೆ. ಎಷ್ಟೇ ಸಂಬಳವಿದ್ದರೂ ಗಿಂಬಳಕ್ಕೆ ಆಸೆ ಮಾಡುತ್ತಾರೆ. ಅಲ್ಪ ಸ್ವಾರ್ಥಕ್ಕಾಗಿ ವ್ಯಕ್ತಿತ್ವ ಕಲುಷಿತ ಮಾಡಿಕೊಳ್ಳುತ್ತಾರೆ. ಭಾವ ದುರ್ಭಾವ ಆಗುತ್ತದೆ. ಪ್ರಾಮಾಣಿಕ ಜೀವನ ನಮ್ಮ ನಡೆ-ನುಡಿ ಪವಿತ್ರವಾಗಿಸುತ್ತದೆ.
ಇದಕ್ಕೊಂದು ನಡೆದ ಘಟನೆ ಹೇಳುವೆ ಒಬ್ಬ ಯುವಕ ವಿಶ್ವವಿದ್ಯಾಯಲಕ್ಕೆ ಪ್ರಥಮ ರ್ಯಾಂಕ್ ಪಡೆದಿದ್ದ. ಪ್ರತಿ ತಿಂಗಳು ಹತ್ತು ಲಕ್ಷ ಸಂಬಳ ಕಾರಿನ ವ್ಯವಸ್ಥೆ, ಇರಲಿಕ್ಕೆ ಸುಸಜ್ಜಿತ ಮನೆ ಕೊಡುತ್ತೇವೆ ಎಂದು ಪತ್ರಿಕೆಯಲ್ಲಿ ಜಾಹೀರಾತು ಬಂದಿತ್ತು. ಇವನೂ ಅರ್ಜಿ ಹಾಕಿದ. ಸಂದರ್ಶನದ ಕರೆಯೂ ಬಂತು.
ಹಾಜರಾದ, ಪ್ರತಿಯೊಬ್ಬರಿಗೆ ಉತ್ತಮ ಲಾಡ್ಜದಲ್ಲಿ ವ್ಯವಸ್ಥೆ ಮಾಡಿದ್ದರು. ಕೊಣೆಯೊಳಗಿನ ಟೇಬಲ್ ಡ್ರಾದಲ್ಲಿ ಪಾಕೀಟಿನಲ್ಲಿ ಹತ್ತು ಸಾವಿರ ರೂಪಾಯಿಗಳು ಇದ್ದವು. ಯಾರೋ ಬಿಟ್ಟು ಹೋಗಿದ್ದಾರೆ ಎಂದು ಅನಿಸಿದರೂ ತಾನೇ ಜೇಬಿನಲ್ಲಿ ಇಟ್ಟುಕೊಂಡ. ಸಂದರ್ಶನ ನೀಡಿ ಮನೆಗೆ ಹೋದ. ನಂತರ ಅದೇ ಕಂಪೆನಿಯಿಂದ ಪತ್ರ ಬಂದಿತು. ನೇಮಕದ ಪತ್ರ ಎಂದು ಭಾವಿಸಿದ ಓದಿದ.
ಅದರಲ್ಲಿ ಈ ರೀತಿ ಬರೆದಿತ್ತು. ‘ಆತ್ಮೀಯರೆ, ಮೌಖಿಕ ಮತ್ತು ಲಿಖಿತ ಪರೀಕ್ಷೆಗಳಲ್ಲಿ ನೀವೇ ಪ್ರಥಮ ರ್ಯಾಂಕ್ ಬಂದಿದ್ದೀರಿ. ಆದರೆ ನಿಮ್ಮಲ್ಲಿ ಪ್ರಾಮಾಣಿಕ ಗುಣವಿಲ್ಲ. ನಿಮ್ಮ ಪರೀಕ್ಷೆ ಸಲುವಾಗಿ ಆ ಪಾಕೇಟದಲ್ಲಿ ಹತ್ತು ಸಾವಿರ ರೂಪಾಯಿ ಟೆಬಲ್ ಡ್ರಾದಲ್ಲಿ ನಾವೇ ಇಟ್ಟಿದ್ದೆವು. ಅದನ್ನು ಹಿಂದಿರುಗಿಸುವಷ್ಟು ಸೌಜನ್ಯ ನಿಮ್ಮಲ್ಲಿ ಇಲ್ಲ. ಪ್ರಾಮಾಣಿಕತೆ ಇಲ್ಲ. ಹೀಗಾಗಿ ಮ್ಯಾನೇಜರ್ ಹುದ್ದೆ ಕಳೆದುಕೊಂಡಿದ್ದೀರಿ‘ ಎಂದು ಬರೆದಿತ್ತು.
ಬಸವಣ್ಣನವರು ‘ಕಾಣಿಯ ಲೋಭ ಕೋಟಿಯ ಲಾಭ ಕೆಡಿಸುತ್ತದೆ‘ ಎಂದಿದ್ದಾರೆ. ಪ್ರಾಮಾಣಿಕತೆಯನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.