ADVERTISEMENT

ಅಮೃತವಾಣಿ: ಲಿಂಗದ ಮುಖವೇ ಜಂಗಮ

ಭಾಲ್ಕಿ ಹಿರೇಮಠ ಸಂಸ್ಥಾನದ ಶ್ರೀ ಬಸವಲಿಂಗ ಪಟ್ಟದ್ದೇವರು

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2021, 15:07 IST
Last Updated 8 ಫೆಬ್ರುವರಿ 2021, 15:07 IST
ಬಸವಲಿಂಗ ಪಟ್ಟದ್ದೇವರು
ಬಸವಲಿಂಗ ಪಟ್ಟದ್ದೇವರು   

ಲಿಂಗಪೂಜೆ ಎಂದರೆ ನಿರಾಕಾರ ನಿರ್ಗುಣ ಜಗದಗಲ ಮುಗಿಲಗಲವಾದ ಎತ್ತೆತ್ತ ನೋಡಿದತ್ತ ತುಂಬಿ ತುಳುಕಿರುವ ಪರಶಿವನ ಪೂಜೆ. ಲಿಂಗ ಪೂಜೆ ಮಾಡಿದ ಫಲ ಸಿಗಬೇಕಾದರೆ ಜಂಗಮ ಸೇವೆ ಮಾಡಲೇಬೇಕು. ಜಂಗಮ ಎಂದರೆ ಸಮಾಜ. ಸಮಾಜದಲ್ಲಿರುವ ಬಡವ, ದೀನ, ದಲಿತ, ದು:ಖಿತ, ಅನಾಥರ ಸೇವೆ ಮಾಡುವುದೇ ನಿಜವಾದ ಲಿಂಗಪೂಜೆ. ಶಿವನ ಕರುಣೆ ಹರಿದು ಬರಬೇಕಾದರೆ ಜಂಗಮಸೇವೆ ಮಾಡಲೇಬೇಕು. ಸಮಾಜಮುಖಿ ಸೇವೆ ಮಾಡಿದರೆ ಮಾತ್ರ ಲಿಂಗಪೂಜೆಗೆ ಫಲ ಇದೆ.

ಪಂಚಪಕ್ವಾನ್ನ ಲಿಂಗಕ್ಕೆ ನೈವೇದ್ಯ ಮಾಡಿದರೆ ಸಾಲದು. ಆ ನೈವೇದ್ಯ ದೇವನಿಗೆ ಸಮರ್ಪಣೆಯಾಗಬೇಕಾದರೆ ಹಸಿದವನಿಗೆ ಉಣಿಸಿದಾಗ ಮಾತ್ರ ಲಿಂಗಯ್ಯ ಸಂತೃಪ್ತನಾಗುತ್ತಾನೆ. ‘ಉಂಬ ಜಂಗಮ ಬಂದಡೆ ನಡೆಯೆಂಬರು, ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ’ ನಾವು ಲಿಂಗಯ್ಯನಿಗೆ ಅಭಿಷೇಕ ಮಾಡುತ್ತೇವೆ. ನೀರಡಿಸಿ ಬಂದವನಿಗೆ ನೀರು ಕೊಡದೆ ಇದ್ದಾಗ ಲಿಂಗಯ್ಯನ ಅಭಿಷೇಕಕ್ಕೆ ಅರ್ಥವೇ ಇಲ್ಲ. ಅದಕ್ಕೆ ಗುರುಬಸವಣ್ಣನವರು ಹೇಳುತ್ತಾರೆ ‘ಎರೆದಡೆ ನೆನೆಯದು ಮರೆದಡೆ ಬಾಡದು ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ ಕೂಡಲಸಂಗಮದೇವಾ ಜಂಗಮಕ್ಕೆರೆದಡೆ ಸ್ಥಾವರ ನೆನೆಯಿತ್ತು’.

ಲಿಂಗದ ಮುಖವೆ ಜಂಗಮ (ಸಮಾಜ) ಜಂಗಮವಾಗುವುದರಿಂದ ಸಮಾಜಮುಖಿ ಕಾರ್ಯ ಮಾಡಿದರೆ ದೇವನು ಸಂತೃಪ್ತನಾಗುತ್ತಾನೆ. ಆದ್ದರಿಂದ ಕೇವಲ ಲಿಂಗಪೂಜೆ ಮಾಡುವುದೇ ಅಂತಿಮ ಗುರಿಯಲ್ಲ. ಲಿಂಗದಮುಖವೇ ಆಗಿರುವ ಜಂಗಮ (ಸಮಾಜ) ಸೇವೆ ಮಾಡುವುದು ಅಂತಿಮ ಗುರಿ ಎನ್ನುವುದು ಬಸವಸಿದ್ಧಾಂತ. ಆ ಸಿದ್ಧಾಂತ ಬದುಕಿನಲ್ಲಿ ಅಳವಡಿಸಿಕೊಳ್ಳೋಣ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.