ರಾಯಚೂರು: ಮಹಾಶಿವರಾತ್ರಿ ನಿಮಿತ್ತ ಶುಕ್ರವಾರ ಉಪವಾಸ ಆಚರಣೆಯಲ್ಲಿ ತೊಡಗಿರುವ ಭಕ್ತರು ಶಿವಧ್ಯಾನದಲ್ಲಿ ಮುಳುಗಿದ್ದರು. ಶಿವ ದೇವಸ್ಥಾನಗಳಲ್ಲಿ ದರ್ಶನಕ್ಕಾಗಿ ಭಕ್ತರು ಬೆಳಿಗ್ಗೆಯಿಂದಲೇ ಸರದಿಯಲ್ಲಿ ನಿಂತಿದ್ದರು.
ದೇವರಿಗೆ ಹಣ್ಣು–ಹಂಪಲು ನೈವೇದ್ಯ ವಿಶೇಷವಾಗಿತ್ತು. ಪುರಾತನ ರಾಮಲಿಂಗೇಶ್ವರ ದೇವಸ್ಥಾನ, ನಂದೀಶ್ವರ ದೇವಸ್ಥಾನಗಳಲ್ಲಿ ಗ್ರಾಮೀಣ ಭಾಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದರು.
ನಗರೇಶ್ವರ ದೇವಸ್ಥಾನ, ಶಂಕರಮಠ, ಚಂದ್ರಮೌಳೇಶ್ವರ ದೇವಸ್ಥಾನ ಸೇರಿದಂತೆ ಪ್ರತಿಯೊಂದು ಶಿವ ದೇವಸ್ಥಾನಗಳಲ್ಲಿ ಪೂಜೆ, ಪುನಸ್ಕಾರಗಳು ಮೊಳಗಿದ್ದವು. ಭಕ್ತರು ದೇವರ ದರ್ಶನ ಪಡೆದು ಪುನೀತರಾದರು. ಎಲ್ಲೆಡೆಯಲ್ಲೂ ಪೊಲೀಸರು ಬಿಗಿ ಬಂದೋಬಸ್ತ್ ಏರ್ಪಡಿಸಿದ್ದರು.
ಸರ್ವ ಜನಾಂಗಗಳ ಸಾಂಸ್ಕೃತಿಕ ಜನಜಾಗರಣೆ:ನಗರದ ಟಿಪ್ಪು ಸುಲ್ತಾನ್ ಉದ್ಯಾನದಲ್ಲಿ ಸಿಎಎ, ಎನ್ಆರ್ಸಿ ಹಾಗೂ ಎನ್ಪಿಆರ್ ವಿರೋಧಿಸಿ ಸಂವಿಧಾನ ಹಕ್ಕುಗಳ ರಕ್ಷಣಾ ವೇದಿಕೆಯಿಂದ ಹೋರಾಟದ ಭಾಗವಾಗಿ ಶಿವರಾತ್ರಿಯ ನಿಮಿತ್ತ ಅಹೋರಾತ್ರಿ ಸರ್ವಜನಾಂಗದ ಸಾಂಸ್ಕೃತಿಕ ಜಾಗರಣೆ ಆಯೋಜಿಸಿದ್ದು ವಿಶೇಷವಾಗಿತ್ತು.
ಕರ್ನಾಟಕ ವಿದ್ಯಾರ್ಥಿ ಸಂಘಟನೆ, ರಂಗಸಿರಿ ಸಾಂಸ್ಕೃತಿಕ ಕಲಾ ಸಂಸ್ಥೆ, ಕರ್ನಾಟಕ ಜನಶಕ್ತಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆಯಿಂದ ರಾತ್ರಿಯಿಡೀ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಬುಡಕಟ್ಟು ಜನಾಂಗದಿಂದ ಬುರ್ರ ಕಥಾ,ತಪಡಿ, ಕರ್ನಾಟಕ ವಿದ್ಯಾರ್ಥಿ ಸಂಘಟನೆ ಕ್ರಾಂತಿಗೀತೆಗಳು ಹಾಡಲಾಯಿತು.
ಜನದೋಲನಾ ಹೋರಾಟ ಸಮಿತಿಯ ರಾಘವೇಂದ್ರ ಕುಷ್ಟಗಿ, ಜಾನ್ ವೆಸ್ಲಿ, ಹಿರಿಯ ಸಾಹಿತಿ ವಿ.ಎನ್.ಅಕ್ಕಿ,ಖಾಜಾ ಅಸ್ಲಂಪಾಶ,ಕೆ.ಈ ಕುಮಾರ್, ಕರ್ನಾಟಕ ಜನ ಸಂಘದ ಮುಖಂಡ ಕುಮಾರ ಸಮತಳ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.