ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ
*****
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೋ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ,
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ?
ತನುವಿನೊಳಗೆ ಹುಸಿ ತುಂಬಿ, ಮನದೊಳಗೆ ವಿಷಯ ತುಂಬಿ,
ಮನೆಯೊಳಗೆ ಮನೆಯೊಡೆಯನಿಲ್ಲ ಕೂಡಲಸಂಗಮದೇವ!
ಮನೆಯು ಸದಾ ಕಾಲ ಸ್ವಚ್ಛವಾಗಿರಬೇಕಾದರೆ ಮನೆಯಲ್ಲಿ ಒಡೆಯನಿರಬೇಕು. ಬೃಹತ್ತಾದ ಮನೆಯನ್ನು ಕಟ್ಟಿಸಿ ಅದರಲ್ಲಿ ಒಡೆಯನಿರದಿದ್ದರೆ ಅದು ಹಾಳು ಬಂಗಲೆಯಾಗುತ್ತದೆ. ಹೊಸ್ತಿಲಿನ ತುಂಬೆಲ್ಲಾ ಹುಲ್ಲು ಹುಟ್ಟಿ, ಆ ಮನೆಯು ಜೇಡರ ಬಲೆಯಿಂದ ಆವೃತವಾಗಿ, ಕಸದ ರಾಶಿಯಾಗಿ ಮಾರ್ಪಡುತ್ತದೆ. ಮಾನವನ ದೇಹವೆಂಬುದು ಕೂಡ ಮನೆ ಇದ್ದಂತೆಯೇ. ಚೈತನ್ಯದಿಂದ ಕೂಡಿದ ಆತ್ಮ ಇರದಿದ್ದರೆ, ಅದು ಸುಳ್ಳಿನಿಂದ ತುಂಬಿ, ಮನಸ್ಸು ಸದಾಕಾಲ ವಿಷಯವಾಸನೆಗಳಿಂದ ಕೂಡಿರುತ್ತದೆ. ಅದಕ್ಕೆ ಬಸವಣ್ಣನವರು ಬಹಿರಂಗದ ಮನೆಯಂತೆ, ಶರೀರವೆಂಬುದು ಮಾನವನ ಮನೆಯಾಗಿದೆ. ಇಲ್ಲಿ ಅಂತರಂಗ ಬಹಿರಂಗಗಳೆರಡೂ ಮುಖ್ಯವಾಗಿವೆ ಮತ್ತು ಅವು ಶುದ್ಧವಾಗಿರಬೇಕು ಎಂದು ತಿಳಿಸಿದ್ದಾರೆ. ಚೈತನ್ಯಯುಕ್ತವಾದ ಆತ್ಮವು ಮಾನವನನ್ನು ಮಹಾಂತನನ್ನಾಗಿ ಮಾಡುತ್ತದೆ ಎನ್ನುವುದು ಈ ವಚನದ ಸಾರವಾಗಿದೆ. ಇದನ್ನು ನಾವೆಲ್ಲರೂ ಪಾಲಿಸೋಣ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.