ಹಾವಿನ ಬಾಯ ಕಪ್ಪೆ ಹಸಿದು
ಹಾರುವ ನೊಣಕ್ಕೆ ಆಸೆ ಮಾಡುವಂತೆ
ಶೂಲವನೇರುವ ಕಳ್ಳನು ಹಾಲು ತುಪ್ಪವ ಕುಡಿದು
ಮೇಲೇಸುಕಾಲ ಬದುಕುವನೊ?
ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು ಒಡಲ ಹೊರೆವರ
ಕೂಡಲಸಂಗಮದೇವನವರನೊಲ್ಲ ಕಾಣಿರಣ್ಣ!
ಹಾವಿನ ಬಾಯಲ್ಲಿರುವ ಕಪ್ಪೆಯು ಹಸಿವಿನಿಂದಾಗಿ ಹಾರುವ ನೊಣಕ್ಕೆ ಆಸೆ ಪಡುತ್ತದೆ. ಹಾಗೆಯೆ ಗಲ್ಲುಶಿಕ್ಷೆಗೆ ಗುರಿಯಾದ ವ್ಯಕ್ತಿಯು ಹಾಲು ತುಪ್ಪದ ಊಟ ಮಾಡಿದರೂ ಎಷ್ಟು ದಿನ ಬದುಕುವುದಕ್ಕೆ ಸಾಧ್ಯವಿದೆ? ಮನುಷ್ಯನ ಜೀವನವೂ ಹೀಗೆಯೇ. ತನಗೆ ಸಾವು ಖಚಿತ ಎನ್ನುವುದು ತಿಳಿದಿದ್ದರೂ ಸಂಸಾರದ ವ್ಯಾಮೋಹಕ್ಕೆ ಸಿಲುಕಿ ಕೇವಲ ಆಸ್ತಿ–ಅಂತಸ್ತನ್ನು ಗಳಿಸುವುದರಲ್ಲಿಯೇ ಮನುಷ್ಯ ಮಗ್ನನಾಗುತ್ತಾನೆ. ನಶ್ವರವಾದ ಈ ಶರೀರವನ್ನು ನಂಬಿ, ಜೀವನವೆಲ್ಲ ವ್ಯರ್ಥವಾಗಿ ಕಳೆದು ತನ್ನ ಬದುಕನ್ನು ಹಾಳು ಮಾಡಿಕೊಳ್ಳುತ್ತಾನೆ. ಅಂಥವರ ಭಕ್ತಿಯು ಭಗವಂತನಿಗೆ ಅರ್ಪಿತ ಆಗುವುದಿಲ್ಲ. ಅದರ ಬದಲಿಗೆ ಭಗವಂತನಲ್ಲಿ ಶ್ರದ್ಧೆ ಇಟ್ಟು, ಪರೋಪಕಾರ ಮಾಡುತ್ತಾ ಜೀವನ ಸಾಗಿಸಿದರೆ ಭಗವಂತನ ಕೃಪೆಯು ನಮಗೆ ಸಾಧ್ಯವಾಗುತ್ತದೆ. ಜೀವನದಲ್ಲಿ ಎಲ್ಲವೂ ಒಳಿತೇ ಆಗುತ್ತದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.