ADVERTISEMENT

ವಚನಾಮೃತ: ಸದಾ ಕಾಲ ಒಳಿತು ಮಾಡಬೇಕು

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2020, 9:43 IST
Last Updated 28 ಅಕ್ಟೋಬರ್ 2020, 9:43 IST
ಡಾ.ಅಲ್ಲಮಪ್ರಭು ಸ್ವಾಮೀಜಿ
ಡಾ.ಅಲ್ಲಮಪ್ರಭು ಸ್ವಾಮೀಜಿ   

ಮೇರು ಗುಣವನರಸುವುದೆ ಕಾಗೆಯಲ್ಲಿ?

ಪರುಷ ಗುಣವನರುಸುವುದೆ ಕಬ್ಬುನದಲ್ಲಿ?

ಸಾಧು ಗುಣವನರುಸವನೆ ಅವಗುಣಿಯಲ್ಲಿ?

ADVERTISEMENT

ಚಂದನ ಗುಣವನರಸುವುದೆ ತರುಗಳಲ್ಲಿ?

ಸರ್ವ ಗುಣಸಂಪನ್ನ ಲಿಂಗವೆ, ನೀನೆನ್ನಲ್ಲಿ

ಅವಗುಣವನರಸುವುದೆ ಕೂಡಲಸಂಗಮ ದೇವಾ?

ಪ್ರಕೃತಿಯಲ್ಲಿರುವ ಪ್ರತಿಯೊಂದು ವಸ್ತುಗಳೂ ಯಾವುದೇ ರೀತಿಯ ಭೇದ ಭಾವ ಮಾಡದೆ ಎಲ್ಲವಕ್ಕೂ ಅವಕಾಶ ಮಾಡಿಕೊಡುತ್ತವೆ. ಗುಡ್ಡ ಅಥವಾ ಪರ್ವತದ ಮೇಲೆ ಕಾಗೆ ಕುಳಿತರೆ ಆ ಗುಡ್ಡವು ಯಾವುದೆ ಭೇದ ಭಾವ ಮಾಡದೆ ಕಾಗೆಗೆ ಕುಳಿತುಕೊಳ್ಳುವುದಕ್ಕೆ ಅವಕಾಶ ಮಾಡಿಕೊಡುತ್ತದೆ. ಪರುಷಮಣಿಯು ಕಬ್ಬಿಣದಲ್ಲಿ ಯಾವುದೆ ಗುಣವನ್ನು ನೋಡದೆ ಅದನ್ನು ಬಂಗಾರವನ್ನಾಗಿ ಮಾಡುತ್ತದೆ. ದುಷ್ಟ ವ್ಯಕ್ತಿಯು ಸಾಧುವಿನ ಹತ್ತಿರ ಬಂದರೆ ಸಾಧುವು ಅದನ್ನೆಲ್ಲ
ಗಮನಿಸದೆ ಆ ವ್ಯಕ್ತಿಗೆ ಒಳ್ಳೆಯದನ್ನೆ ಬಯಸುತ್ತಾನೆ. ಗಂಧದ ಮರವು ತನ್ನ ಸುತ್ತಮುತ್ತಲಿರುವ ಮರಗಳು ಯಾವುವು ಎಂಬುದನ್ನು ಗಮನಿಸದೆ ಸುವಾಸನೆಯನ್ನು ಎಲ್ಲೆಡೆಯೂ ಬೀರುತ್ತಲೇ ಇರುತ್ತದೆ. ಹಾಗೆಯೇ ಸರ್ವಗುಣ ಸಂಪನ್ನನಾದ ಭಗವಂತನೇ, ಮನುಷ್ಯನ ಗುಣಾವಗುಣಗಳನ್ನು ನೋಡದೆ, ಸದಾ ಕಾಲ ಆತನಿಗೆ ಒಳ್ಳೆಯದನ್ನೆ ಮಾಡಬೇಕು ಎಂಬುದು ಈ ವಚನದ ತಾತ್ಪರ್ಯವಾಗಿದೆ. ಅಂತೆಯೇ ನಾವೆಲ್ಲರೂ ಪರಸ್ಪರ ಒಳಿತನ್ನೇ ಬಯಸಬೇಕು.

-ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.