ADVERTISEMENT

ವಾರ ಭವಿಷ್ಯ: 24-4-2022ರಿಂದ 30-4-2022 ರವರೆಗೆ

ಡಾ. ಎಂ.ಎನ್.ಲಕ್ಷ್ಮೀನರಸಿಂಹ ಸ್ವಾಮಿ
Published 23 ಏಪ್ರಿಲ್ 2022, 19:30 IST
Last Updated 23 ಏಪ್ರಿಲ್ 2022, 19:30 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ,
ಜ್ಯೋತಿಷ್ಯ ವಿಶಾರದ, ಸಂಪರ್ಕಕ್ಕೆ: 8197304680

****

ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)

ADVERTISEMENT

ಬೇಜವಾಬ್ದಾರಿ ಮಾತುಗಳಿಂದ ಇಕ್ಕಟ್ಟಿಗೆ ಸಿಲುಕುವ ಸಾಧ್ಯತೆ ಇದೆ. ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಅನಗತ್ಯ ಸಿಟ್ಟಿನಿಂದ ಆಗುವ ನಷ್ಟ ತಪ್ಪಿಸಲು ಸಮಾಧಾನದಿಂದ ಇರುವುದು ಒಳ್ಳೆಯದು. ನ್ಯಾಯಾಲಯದಲ್ಲಿನ ವ್ಯವಹಾರಗಳನ್ನು ಸ್ವಲ್ಪ ಮುಂದೂಡುವುದು ಒಳ್ಳೆಯದು. ಲೇವಾದೇವಿ ಮಾಡುವವರಿಗೆ ಬಾಕಿ ಹಣಗಳು ಬಂದು ಸಂತಸವಾಗುತ್ತದೆ. ನಿರುದ್ಯೋಗಿಗಳಿಗೆ ಯಾವುದಾದರೊಂದು ಉದ್ಯೋಗ ದೊರೆಯುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಸಂತಸಪಡುವ ಸುದ್ದಿಯೊಂದು ಕೇಳಿಬರುತ್ತದೆ. ಸಂಸಾರದಲ್ಲಿ ಕಿರಿಕಿರಿಗಳು ಆರಂಭವಾಗಬಹುದು. ಹಣಕಾಸು ಹೂಡಿಕೆಯ ಬಗ್ಗೆ ಸರಿಯಾಗಿ ಪರಿಣಿತರ ಹತ್ತಿರ ಸಮಾಲೋಚನೆ ಮಾಡಿ ಹೂಡಿಕೆ ಮಾಡುವುದು ಒಳ್ಳೆಯದು. ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ 1 2)

ಕಚೇರಿ ಕೆಲಸಗಳಲ್ಲಿ ಜಾಗರೂಕರಾಗಿ ವ್ಯವಹರಿಸುವುದು ಒಳ್ಳೆಯದು. ಎದುರಾದ ಸಮಸ್ಯೆಯನ್ನು ಎದುರಿಸಿ ಗೆಲ್ಲುವುದು ಒಳ್ಳೆಯದು. ಇದಕ್ಕೆ ಸಹೋದ್ಯೋಗಿಗಳಿಂದ ಸಕಾಲಿಕ ಸಹಾಯಗಳು ಮತ್ತು ಸಲಹೆಗಳು ದೊರೆಯುತ್ತವೆ. ಕೌಟುಂಬಿಕ ಸಾಮರಸ್ಯದೊಂದಿಗೆ ಸಂತೋಷದ ಬದುಕು ನಿಮ್ಮದಾಗುವುದು. ಕುಟುಂಬದಲ್ಲಿ ಮಹಿಳೆಯರಿಗೆ ಹೆಚ್ಚಿನ ಸ್ವಾತಂತ್ರ‍್ಯ ಮತ್ತು ಸಹಕಾರಗಳು ದೊರೆಯುತ್ತವೆ. ಅನಗತ್ಯ ವೆಚ್ಚಗಳನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಹೊಸ ವಸ್ತುಗಳನ್ನು ಖರೀದಿಯನ್ನು ಮಾಡುವ ಅವಕಾಶವಿರುತ್ತದೆ. ಆರೋಗ್ಯದ ಕಡೆ ಹೆಚ್ಚಿನ ಗಮನ ಇರಲಿ. ಸರ್ಕಾರಿಮಟ್ಟದ ಕೆಲಸಗಳಲ್ಲಿ ಸ್ವಲ್ಪ ಹಿನ್ನಡೆ ಇರುತ್ತದೆ.

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಅಡ್ಡಿ ಆತಂಕಗಳಿಲ್ಲದೆ ನಿಮ್ಮ ಕೆಲವು ಕೆಲಸಗಳು ನೆರವೇರುವ ಸಾಧ್ಯತೆಯಿದೆ. ಮಧ್ಯವರ್ತಿಗಳ ಸಹಾಯದಿಂದ ವಿವಾಹ ಕಾರ್ಯಗಳು ನಡೆಯುವ ಸಾಧ್ಯತೆ ಇದೆ. ಉದ್ಯೋಗದಲ್ಲಿ ಹೆಚ್ಚಿನ ನಿಷ್ಠೆ ಪ್ರಾಮಾಣಿಕತೆಯ ಪ್ರದರ್ಶನ ಅಗತ್ಯ. ಸಹೋದ್ಯೋಗಿಗಳೊಂದಿಗೆ ಬಹಳ ಉತ್ತಮ ಸಹಕಾರ ಏರ್ಪಡುತ್ತದೆ. ಭೂಮಿ ವ್ಯವಹಾರ ಮಾಡುವವರಿಗೆ ಸಮಾಧಾನಕರವಾದ ಫಲಿತಾಂಶ ದೊರೆಯುವ ಸಾಧ್ಯತೆ ಇದೆ. ಆಸ್ತಿ ಖರೀದಿಯನ್ನು ಸ್ವಲ್ಪ ಕಾಲ ಮುಂದೂಡುವುದು ಒಳ್ಳೆಯದು. ನಟರಿಗೆ ಅವರ ಆಕರ್ಷಕ ವ್ಯಕ್ತಿತ್ವದಿಂದಾಗಿ ಹೆಚ್ಚಿನ ಅಭಿಮಾನಿಗಳು ದೊರೆಯುವರು. ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸಗಳನ್ನು ಕಾಣಬಹುದು. ಹಣದ ಒಳಹರಿವು ನಿರೀಕ್ಷೆಯ ಮಟ್ಟದಲ್ಲಿ ಇರುತ್ತದೆ.

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ವ್ಯವಹಾರದಲ್ಲಿ ಮಿತವ್ಯಯವನ್ನು ಸಾಧಿಸುವಿರಿ. ಗಾಳಿಸುದ್ದಿಯ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ನಿರ್ಲಕ್ಷ್ಯ ಮಾಡುವುದು ಒಳಿತು. ಹೆಚ್ಚಿನ ಜವಾಬ್ದಾರಿಗಳನ್ನು ನಿಭಾಯಿಸುವಲ್ಲಿ ಉತ್ತಮ ನೈಪುಣ್ಯತೆಯನ್ನು ಪಡೆಯುವಿರಿ. ವಾಹನ ಚಾಲನೆ ಮಾಡುವಾಗ ಎಚ್ಚರದಿಂದ ಇರುವುದು ಒಳ್ಳೆಯದು. ವಿದೇಶಿ ಪ್ರಯಾಣವನ್ನು ಬಯಸುತ್ತಿದ್ದ ವರಿಗೆ ಈಗ ಅವಕಾಶಗಳು ಒದಗುವ ಸಾಧ್ಯತೆ ಇದೆ. ಅತ್ಯಾಪ್ತರೊಂದಿಗೆ ಮನದಿಂಗಿತವನ್ನು ಹೇಳಿಕೊಳ್ಳುವುದು ಬಹಳ ಒಳ್ಳೆಯದು. ಲೇವಾದೇವಿ ವ್ಯವಹಾರವನ್ನು ಮಾಡುವವರಿಗೆ ಸ್ವಲ್ಪ ಹಿನ್ನಡೆಯನ್ನು ಕಾಣಬಹುದು. ನೌಕರ ವರ್ಗಕ್ಕೆ ಅವರ ಕಠಿಣ ಪರಿಶ್ರಮಕ್ಕೆ ಸೂಕ್ತ ಪ್ರತಿಫಲ ದೊರಕುತ್ತದೆ. ವೃತ್ತಿಯಲ್ಲಿದ್ದ ಒತ್ತಡಗಳು ಕಡಿಮೆಯಾಗಿ ಕೆಲಸ ಮಾಡಲು ಉತ್ಸಾಹ ಬರುತ್ತದೆ.

ಸಿಂಹ ರಾಶಿ( ಮಖ ಪೂರ್ವ ಪಲ್ಗುಣಿ ಉತ್ತರ ಫಲ್ಗುಣಿ 1)

ಸೌಜನ್ಯದ ನಡವಳಿಕೆಯಿಂದ ಜನರ ನಡುವೆ ಗೌರವಾದರಗಳನ್ನು ಪಡೆಯುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಕಳೆದು ಹೋದ ವಸ್ತುಗಳು ಪುನಹ ದೊರೆಯುವ ಸಾಧ್ಯತೆಗಳಿವೆ. ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆಯನ್ನು ಮಾಡಲು ಬೇಕಾದ ಸಹಕಾರಗಳು ಒದಗಿಬರುತ್ತವೆ. ಯಂತ್ರೋಪಕರಣಗಳನ್ನು ದುರಸ್ತಿಯನ್ನು ಮಾಡುವವರಿಗೆ ಹೆಚ್ಚಿನ ಕೆಲಸ ದೊರೆತು ಸಂಪಾದನೆ ಹೆಚ್ಚುತ್ತದೆ. ಕೃಷಿ ವಿಸ್ತರಣೆಯ ಬಗ್ಗೆ ಮನೆಯವರೊಡನೆ ಕುಳಿತು ಮಾತನಾಡುವಿರಿ. ಕೆಲವರಿಗೆ ಅವರ ಹವ್ಯಾಸಗಳು ವೃತ್ತಿಯಾಗಿ ಬದಲಾವಣೆಯಾಗುವ ಯೋಗವಿದೆ. ಹಿರಿಯರಿಂದ ಆಸ್ತಿ ಅಥವಾ ಧನಸಹಾಯ ಸಿಗುವ ಸಾಧ್ಯತೆಗಳಿವೆ. ಮೂಳೆ ತೊಂದರೆ ಇರುವವರು ಹೆಚ್ಚು ಎಚ್ಚರಿಕೆ ವಹಿಸುವುದು ಅಗತ್ಯ.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಮಾತಿನಲ್ಲಿ ಕಠಿಣತೆ ಬೇಡ. ಅದು ನಿಮಗೆ ಮುಳುವಾಗುವ ಸಂದರ್ಭವಿದೆ. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಆಸ್ತಿಪಾಸ್ತಿಗಳ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ಇರಲಿ. ಭೂಮಿಯ ವ್ಯವಹಾರ ಮಾಡುವವರಿಗೆ ಹೆಚ್ಚಿನ ಗಳಿಕೆ ಇರುತ್ತದೆ. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದ ಸಂದರ್ಭವಿದೆ. ಸಾಲಗಾರರು ಬಂದು ವಾಪಸಾತಿಗಾಗಿ ಪೀಡಿಸುವ ಸಂದರ್ಭವಿದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಹಿನ್ನಡೆಯನ್ನು ಕಾಣಬಹುದು. ವಿದೇಶಿ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ವೃತ್ತಿಯಲ್ಲಿ ಹೆಚ್ಚಿನ ಒತ್ತಡಗಳಿರುತ್ತವೆ. ಹಿರಿಯರಿಂದ ನಿಮ್ಮ ಮಕ್ಕಳಿಗೆ ಸಹಾಯಗಳು ಒದಗಿಬರುತ್ತವೆ. ಸರ್ಕಾರಿ ದಾಖಲಾತಿಗಳಿಗಾಗಿ ಹಣ ಕೊಡಬೇಕಾದ ಪರಿಸ್ಥಿತಿ ಬರಬಹುದು. ಚರ್ಮ ರೋಗಗಳು ತಲೆದೋರಬಹುದು.

ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಒಂದು ರೀತಿ ಆಲಸ್ಯ ಆವರಿಸುತ್ತದೆ. ಕಮಿಷನ್ ವ್ಯವಹಾರ ಮಾಡುವವರಿಗೆ ಆದಾಯ ಇರುತ್ತದೆ. ಮಹಿಳೆಯರಿಗೆ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಸಾಕಷ್ಟು ಬಿಡುವಿಲ್ಲದ ಕೆಲಸವಿರುತ್ತದೆ. ಹಣದ ಒಳ ಹರಿವು ಸಾಮಾನ್ಯವಾಗಿರುತ್ತದೆ. ಸ್ವಂತ ವಾಹನಗಳ ವಿಷಯದಲ್ಲಿ ಹೆಚ್ಚು ಜಾಗರೂಕರಾಗಿರುವುದು ಬಹಳ ಉತ್ತಮ. ಆರ್ಥಿಕ ಒತ್ತಡಗಳಿಂದಾಗಿ ಸ್ವಲ್ಪ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ವೆಚ್ಚದ ಮೇಲೆ ಸಾಕಷ್ಟು ಹಿಡಿತ ಸಾಧಿಸುವುದು ಅನಿವಾರ್ಯ. ಸರ್ಕಾರಿ ಮಟ್ಟದ ಕೆಲಸಗಳಿಂದ ಆದಾಯ ಬರುತ್ತದೆ. ಸರ್ಕಾರಿ ಗುತ್ತಿಗೆ ಕೆಲಸಗಳನ್ನು ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾದೀತು. ಆಹಾರದಿಂದ ಆರೋಗ್ಯ ವ್ಯತ್ಯಾಸ ಆಗುವ ಸಾಧ್ಯತೆ ಇದೆ.

ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)

ವಿದ್ಯುತ್ ಸಲಕರಣೆಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಯಾಂತ್ರಿಕ ಸಲಕರಣೆಗಳ ಬಿಡಿಭಾಗಗಳನ್ನು ತಯಾರಿಸಿ ಮಾರಾಟ ಮಾಡುವವರ ವ್ಯವಹಾರ ವೃದ್ಧಿಸಿ ಆದಾಯ ಹೆಚ್ಚುವ ಸಾಧ್ಯತೆ ಇದೆ. ನಿಮ್ಮ ವೈಯಕ್ತಿಕ ವಿಚಾರಗಳನ್ನು ಇತರರೊಡನೆ ಹೇಳಿಕೊಳ್ಳುವುದು ನಿಮಗೆ ತೊಂದರೆಯಾಗಬಹುದು. ಸರ್ಕಾರದಿಂದ ಬರಬೇಕಾಗಿದ್ದ ಸೌಲಭ್ಯಗಳು ನಿಧಾನವಾದರೂ ಬರುತ್ತವೆ. ನಿಮ್ಮ ಸಂಗಾತಿಯು ಕೊಡುವ ಸಲಹೆಗಳು ನಿಮಗೆ ಬಹಳ ಉಪಯುಕ್ತಕರವಾಗಿರುತ್ತದೆ. ನಿಮ್ಮ ಶತ್ರುಗಳನ್ನು ಮಟ್ಟಹಾಕಲು ಅವರದೇ ತಂತ್ರಗಳನ್ನು ಬಳಸುವಿರಿ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಮೂಳೆ ತೊಂದರೆ ಇರುವವರು ಹೆಚ್ಚು ಎಚ್ಚರ ವಹಿಸಿರಿ.

ಧನಸ್ಸು ರಾಶಿ( ಮೂಲ ಪೂರ್ವಾಷಾಢ, ಉತ್ತರಾಷಾಢ 1 )

ಕ್ರೀಡಾಪಟುಗಳಿಗೆ ಹೆಚ್ಚಿನ ಸಾಧನೆ ಮಾಡುವ ಅವಕಾಶ ಒದಗುತ್ತದೆ. ಹಿರಿಯ ಅನುಭವಿ ಆಟಗಾರರಿಂದ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ಉತ್ಪಾದನಾ ಕ್ಷೇತ್ರದಲ್ಲಿರುವವರಿಗೆ ಉತ್ತಮ ವ್ಯವಹಾರವಾಗಿ ಲಾಭ ಬರುತ್ತದೆ. ಉದ್ಯೋಗವನ್ನು ಅರಸುತ್ತಿರುವವರಿಗೆ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ನಿಮ್ಮ ಯೋಜನೆಗಳನ್ನು ಕಾರ್ಯಗತಗೊಳಿಸಲು ಸಾಕಷ್ಟು ಮಾರ್ಗಗಳನ್ನು ಹುಡುಕುವಿರಿ. ಅಪರಿಚಿತರೊಂದಿಗೆ ವ್ಯವಹಾರ ಮಾಡುವಾಗ ಎಚ್ಚರ ವಹಿಸಿರಿ. ಮಹಿಳೆಯರಿಗೆ ಅವರ ಇಷ್ಟಾರ್ಥಗಳು ಈಡೇರುವ ಕಾಲ. ಒಟ್ಟು ಕುಟುಂಬದ ಸದಸ್ಯರಲ್ಲಿ ಅಸಹನೆ ಕಂಡುಬರಬಹುದು. ಇದನ್ನು ಎದುರಿಸಿ ನಡೆಯಿರಿ. ಮಕ್ಕಳ ಪ್ರಗತಿಯ ಬಗ್ಗೆ ಶುಭವಾರ್ತೆ ಕೇಳುವಿರಿ.

ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1, 2)

ಕುಟುಂಬದ ಸದಸ್ಯರೊಡನೆ ಸಂತೋಷವಾಗಿ ಕಾಲಕಳೆಯಲು ಇಚ್ಚಿಸುವಿರಿ. ದ್ವಿದಳ ಧಾನ್ಯಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಲಾಭವಿರುತ್ತದೆ. ಕಲಾವಿದರುಗಳಿಗೆ ಉತ್ತಮಗೌರವದ ಜೊತೆಗೆ ಹೆಚ್ಚಿನ ಸಂಭಾವನೆ ಸಹ ದೊರೆಯುತ್ತದೆ. ಹಿರಿಯ ವೈದ್ಯರಿಗೆ ಆಪಾದನೆ ಬರುವ ಸಂಭವವಿದೆ. ಹಾಗಾಗಿ ಎಚ್ಚರ. ಆತ್ಮೀಯರ ಜೊತೆಗೂಡಿ ದೂರ ಪ್ರಯಾಣ ಮಾಡುವ ಸಾಧ್ಯತೆಗಳಿವೆ. ಹೊಸ ಯೋಜನೆಗಳನ್ನು ಜಾರಿಗೊಳಿಸುವಾಗ ಪೂರ್ವಾಪರ ವಿವೇಚನೆಯನ್ನು ಮಾಡುವುದು ಒಳ್ಳೆಯದು. ವಿದ್ಯಾರ್ಥಿಗಳಿಗೆ ಅವರ ಅಧ್ಯಯನಕ್ಕೆ ಬೇಕಾಗುವ ಎಲ್ಲಾ ರೀತಿಯ ಅನುಕೂಲತೆಗಳು ಒದಗಿಬರುತ್ತವೆ. ಹಣದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮ್ಮ ಸಹೋದ್ಯೋಗಿಗಳಿಗೆ ಕೈಲಾದಷ್ಟು ಸಹಾಯ ಮಾಡುವಿರಿ.

ಕುಂಭ ರಾಶಿ( ಧನಿಷ್ಠ 3, 4 ಶತಭಿಷಾ, ಪೂರ್ವಾಭಾದ್ರ 1 2 3)

ನಿಮ್ಮ ಕಾರ್ಯಯೋಜನೆಯ ಯಶಸ್ಸಿಗಾಗಿ ಸಾಕಷ್ಟು ಸಲಹೆಗಳು ಬಂದರೂ ಅದನ್ನು ಸ್ವಯಂ ತುಲನೆಮಾಡಿ ನಿರ್ಧಾರ ತೆಗೆದುಕೊಳ್ಳುವುದು ಬಹಳ ಉತ್ತಮ. ಯುವಕರಿಗೆ ಉದ್ಯೋಗದಲ್ಲಿ ಅಡೆ ತಡೆಗಳು ಬರುವ ಸಾಧ್ಯತೆಗಳಿವೆ. ಸರ್ಕಾರಿ ನೌಕರಿಯಲ್ಲಿ ಇರುವವರಿಗೆ ಅವರ ಕಾರ್ಯದಕ್ಷತೆಗೆ ತಕ್ಕಂತೆ ಬಡ್ತಿ ದೊರೆಯುವ ಸಾಧ್ಯತೆ ಇದೆ. ಕಂಪ್ಯೂಟರ್ ಮತ್ತು ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವ್ಯಾಪಾರ ಹೆಚ್ಚಾಗಿ ಲಾಭವಿರುತ್ತದೆ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಸ್ವಂತ ಉದ್ದಿಮೆ ನಡೆಸುವವರಿಗೆ ಸ್ಪರ್ಧಿಗಳು ಎದುರಾದರೂ ನಷ್ಟವೇನಿಲ್ಲ. ರಾಯಭಾರ ಕಚೇರಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತದೆ. ನ್ಯಾಯಾಲಯದ ಕೆಲಸಗಳಲ್ಲಿ ಪ್ರಗತಿ ಇರುತ್ತದೆ.

ಮೀನ ರಾಶಿ( ಪೂರ್ವಾಭಾದ್ರ 4 ಉತ್ತರಾಭಾದ್ರ ರೇವತಿ)

ಸ್ವತಂತ್ರ ನಿರ್ಧಾರ ತೆಗೆದುಕೊಳ್ಳುವಾಗ ಬೇರೆಯವರ ಮೇಲೆ ಅದರ ಪರಿಣಾಮ ಏನಾಗುವುದೆಂದು ಯೋಚಿಸಿ ತೆಗೆದುಕೊಳ್ಳಿರಿ. ಇಲ್ಲವಾದಲ್ಲಿ ಆ ಪರಿಣಾಮದ ಬಿಸಿ ನಿಮಗೂ ತಟ್ಟುವುದು. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯಂತೆ ಇರುತ್ತದೆ. ದಿನಸಿ ವ್ಯಾಪಾರಿಗಳಿಗೆ ಹೆಚ್ಚಿನ ವ್ಯಾಪಾರವಾಗುವ ಲಕ್ಷಣಗಳಿವೆ. ಸ್ವಂತ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಬೇಡ. ಬೇರೆಯವರ ವಾದವಿವಾದಗಳಿಗೆ ತಲೆ ಹಾಕುವುದು ಬೇಡ. ಸರ್ಕಾರಿಮಟ್ಟದ ಕೆಲಸಗಳಲ್ಲಿ ಯಶಸ್ಸು ಇರುತ್ತದೆ. ಯಾವುದೇ ರೀತಿಯ ಸಹಾಯಧನಗಳು ನಿಂತಿದ್ದರೆ ಅದು ಈಗ ಬರುವ ಸಾಧ್ಯತೆ ಇದೆ. ಸಂಗಾತಿಯೊಂದಿಗೆ ಕಾವೇರಿದ ಮಾತುಗಳು ಆಗಬಹುದು. ಕಬ್ಬಿಣ ಮತ್ತು ಉಕ್ಕನ್ನು ತಯಾರಿಸಿ ಮಾರುವವರಿಗೆ ವ್ಯಾಪಾರ ವಿಸ್ತರಿಸುತ್ತದೆ. ಹಣದ ಹರಿವು ಸಾಮಾನ್ಯವಾಗಿರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.