ADVERTISEMENT

ಬುದ್ಧನ ನೈರಾತ್ಮ್ಯವಾದ

ಪಶ್ಚಿಮದ ಅರಿವು /ಹಾರಿತಾನಂದ
Published 3 ಆಗಸ್ಟ್ 2018, 19:30 IST
Last Updated 3 ಆಗಸ್ಟ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಭಾರತೀಯ ದರ್ಶನಗಳಲ್ಲಿ ಯಾವ ದರ್ಶನವನ್ನು ತಿಳಿದುಕೊಳ್ಳಬೇಕೆಂದರೂ ಉಳಿದ ಎಲ್ಲ ದರ್ಶನಗಳ ಪರಿಚಯವೂ ಬೇಕಾಗುತ್ತದೆ. ಹೀಗಾಗಿ ಬೌದ್ಧದರ್ಶನವನ್ನು ನಾವು ತಿಳಿದುಕೊಳ್ಳಬೇಕೆಂದರೂ ವೇದ–ಉಪನಿಷತ್ತುಗಳನ್ನೂ ತಿಳಿದು
ಕೊಳ್ಳಬೇಕು; ಷಡ್ದರ್ಶನಗಳನ್ನೂ ತಿಳಿದುಕೊಳ್ಳಬೇಕು; ದ್ವೈತಾದ್ವೈತಗಳನ್ನೂ ತಿಳಿದುಕೊಳ್ಳಬೇಕು. ಆದುದರಿಂದಾಗಿ ಒಟ್ಟು ಭಾರತೀಯ ತತ್ತ್ವಶಾಸ್ತ್ರ ಪರಂಪರೆಯ ಸಣ್ಣ ಪರಿಚಯವಾದರೂ ಇಲ್ಲದ ವಿನಾ ಬೌದ್ಧದರ್ಶನದ ಪ್ರಮೇಯಗಳೂ ಸಿದ್ಧಾಂತಗಳೂ ಸುಲಭವಾಗಿ ಅರ್ಥವಾಗದು. ಭಾರತೀಯ ತತ್ತ್ವಶಾಸ್ತ್ರ ಇತಿಹಾಸದ ಪ್ರಮುಖ ಘಟ್ಟಗಳನ್ನು ಪರಿಚಯಿಸುವ ಕೆಲವು ಗ್ರಂಥಗಳು ಕನ್ನಡದಲ್ಲಿ ಪ್ರಕಟವಾಗಿವೆ. ಅವುಗಳಲ್ಲಿ ಒಂದು: ‘ಭಾರತೀಯ ತತ್ತ್ವಶಾಸ್ತ್ರ ಪ್ರವೇಶ’. 2008ರಲ್ಲಿ ಪ್ರಕಟವಾಗಿರುವ ಈ ಕೃತಿಯ ಲೇಖಕರು ಎಂ. ಪ್ರಭಾಕರ ಜೋಷಿ ಮತ್ತು ಎಂ. ಎ. ಹೆಗಡೆ. ಇದರಲ್ಲಿ ಬೌದ್ಧದರ್ಶನದ ಬಗ್ಗೆಯೂ ಒಂದು ಅಧ್ಯಾಯವಿದೆ.

ಬುದ್ಧನ ದರ್ಶನವನ್ನು ‘ನೈರಾತ್ಮ್ಯವಾದ’ ಎಂದೂ ಹೇಳುವುದುಂಟು. ‘ಆತ್ಮದ ನಿರಾಕರಣೆ’ ಎಂದು ಇದನ್ನು ಸರಳವಾಗಿ ಹೇಳಬಹುದು. ಭಾರತೀಯ ದರ್ಶನಗಳ ಮುಖ್ಯವಾದ ಪ್ರತಿಪಾದನೆಯೇ ಆತ್ಮ ಅಥವಾ ಬ್ರಹ್ಮ ಎಂಬ ಶಾಶ್ವತ ತತ್ತ್ವದ ಸ್ವೀಕಾರ. ಆದರೆ ಬುದ್ಧ ಅಂಥ ಆತ್ಮವನ್ನು ನಿರಾಕರಿಸಿದ ಎನ್ನುವುದು ಈ ವಾದದ ನಿಲುವು. ಇದು ಹೇಗೆ – ಎನ್ನುವುದನ್ನು ರಥದ ರೂಪಕದ ಸಹಾಯದೊಂದಿಗೆ ನಿರೂಪಿಸಲಾಗಿದೆ. ‘ಮಿಲಿಂದಪ್ರಶ್ನ’ದಲ್ಲಿ ಬರುವ ಈ ಸಂದರ್ಭವನ್ನು ‘ಭಾರತೀಯ ತತ್ತ್ವಶಾಸ್ತ್ರ ಪ್ರವೇಶ’ – ಈ ಕೃತಿಯಲ್ಲಿ ಹೀಗೆ ನಿರೂಪಿಸಲಾಗಿದೆ:

‘ನಾವು ರಥವೆಂದು ನಿರ್ದೇಶಿಸುವ ವಸ್ತುವಿನಲ್ಲಿ ರಥ ಯಾವುದು? ಎಲ್ಲಿದೆ? ದಂಡ, ಚಕ್ರ, ಅಕ್ಷ, ಹಲ್ಲು, ಲಗಾಮು – ಮುಂತಾದವುಗಳಲ್ಲಿ ‘ರಥ’ವೆಂಬ ಪದ ಯಾವುದಕ್ಕೂ ಅನ್ವಯಿಸುವುದಿಲ್ಲ. ಅವೆಲ್ಲ ಅವಯವಗಳು,ಅವು ಅವೆ. ಆದರೆ ಅವಯವಿಯೆನಿಸಿದ ‘ರಥ’ ಇಲ್ಲ. ಅದು ಇರುವುದು ವ್ಯಾವಹಾರಿಕ ಅನುಕೂಲಕ್ಕಾಗಿ ಮಾತ್ರ. ಆತ್ಮವೆಂಬುದಾದರೂ ಅಷ್ಟೇ. ನಾಮ–ರೂಪಗಳನ್ನು ಅಥವಾ ಪಂಚಸ್ಕಂಧಗಳನ್ನು ಬಿಟ್ಟು ‘ಆತ್ಮ’ವೆಂಬ ವಸ್ತು ಇಲ್ಲ, ಇವೆಲ್ಲವುಗಳನ್ನು ನಿರ್ದೇಶಿಸುವ ಸಲುವಾಗಿ ಹುಟ್ಟಿಕೊಂಡ ಪದ ಅದು. ಅದು ನಿಜವಾಗಿಯೂ ಅಸ್ತಿತ್ವದಲ್ಲಿದೆಯೆಂಬುದು ಭ್ರಾಂತಿ. ಈ ಭ್ರಾಂತಿಯೇ ಅನೇಕ ಅನರ್ಥ ಪರಂಪರೆಗೆ ಕಾರಣ. ಅವಯವಗಳು ಸತ್ಯ; ಅವಯವಿಯೆಂಬುದು ಮಿಥ್ಯ. ಇದೇ ಪ್ರಸಿದ್ಧವಾದ ನೈರಾತ್ಮ್ಯವಾದ ಅಥವಾ ಸಂಘಾತವಾದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.