ಸಿದ್ದಾಪುರ: ಸ್ಥಳೀಯರ ಬಹು ದಿನಗಳ ಬೇಡಿಕೆಗೆ ಸ್ಪಂದಿಸಿದ ಇಲ್ಲಿಯ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಇ-ಸ್ಟಾಂಪಿಂಗ್ವಿತರಣಾ ಕೇಂದ್ರವನ್ನು ಬುಧವಾರ ಆರಂಭಿಸಿದೆ.
ಇ-ಸ್ಟಾಂಪಿಂಗ್ ವಹಿವಾಟನ್ನು ವಿರಾಜಪೇಟೆ ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ಬಿ.ಸುಬ್ಬಯ್ಯ ಉದ್ಘಾಟಿಸಿದರು. ಈಗಾಗಲೇ ಪೆಟ್ರೋಲ್ ಬಂಕ್, ರಸಗೊಬ್ಬರ ಸೇರಿದಂತೆ ಕೃಷಿ ಪರಿಕರಗಳ ಮಾರಾಟ ಕೇಂದ್ರ, ಸಹಕಾರ ಬ್ಯಾಂಕ್ ಹಾಗೂ ನ್ಯಾಯ ಬೆಲೆ ಅಂಗಡಿಗಳನ್ನು ಯಶಸ್ವಿಯಾಗಿ ನಡೆಸಿ ಲಾಭದಲ್ಲಿ ಮುಂದುವರಿಯುತ್ತಿರುವ ಸಹಕಾರ ಸಂಘ ಹಂತ ಹಂತವಾಗಿ ವಿವಿಧ ವ್ಯವಹಾರಿಕ ಕ್ಷೇತ್ರಗಳಿಗೆ ಸೇವೆಯನ್ನು ವಿಸ್ತರಿಸುತ್ತಿರುವುದು ಪ್ರಶಂಸನೀಯ ಎಂದು ಅವರು ಹೇಳಿದರು.
ಸಹಕಾರಿ ಕ್ಷೇತ್ರದಲ್ಲಿ ಅತ್ಯುತ್ತಮ ಸಾಧನೆಗಾಗಿ ವಿವಿಧ ಪ್ರಶಸ್ತಿಗಳಿಗೆ ಪಾತ್ರವಾಗಿರುವ ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಪಾಲುದಾರರು ಹಾಗೂ ಠೇವಣಿದಾರರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದು ಹಾಗೂ ಸಾಲ ಮರುಪಾವತಿಯಲ್ಲಿಯೂ ಉತ್ತಮ ಸಾಧನೆ ತೋರಿದೆ ಎಂದು ಸಿದ್ದಾಪುರ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರಾದ ಪಿ.ಎಂ.ಪುಟ್ಟುಸ್ವಾಮಿ ಹೇಳಿದರು.
ಸಹಕಾರ ಸಂಘದ ಅಧ್ಯಕ್ಷ ಎಂ.ಎಸ್.ವೆಂಕಟೇಶ್, ನಿರ್ದೇಶಕರಾದ ಕುಕ್ಕನೂರು ಚಂದ್ರಕುಮಾರ್ ಎಂ.ಬಿ. ಜೋಯ್, ಬ್ಯಾಂಕ್ ವ್ಯವಸ್ಥಾಪಕರಾದ ಈರಪ್ಪ ಹಾಗೂ ಸಿಬ್ಬಂದಿ ವರ್ಗದವರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.