ಗುಲ್ಬರ್ಗ: ಶತಮಾನಗಳಿಂದ ಅನ್ಯಾಯಕ್ಕೆ ಒಳಗಾದ ಸಮಾಜದ ಜನರಿಗೆ ಧೈರ್ಯ ತುಂಬುವ ಕೆಲಸವನ್ನು ಎಲ್ಲರೂ ಮಾಡಬೇಕು ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಭಾನುವಾರ ಇಲ್ಲಿ ಹೇಳಿದರು.
ವರಕವಿ ಜಂಬಗಿ ಶರಣರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಜಂಬಗಿ ಶರಣರ ಕುರಿತಾದ ಗ್ರಂಥ ಬಿಡುಗಡೆಗೊಳಿಸಿ ಮಾತನಾಡಿದರು. `ಬಂಡಾಯ ಸಾಹಿತ್ಯ, ಶರಣರ ವಚನಗಳ ಮೂಲಕ ಸಮಾಜದಲ್ಲಿನ ಅಂಧಶ್ರದ್ಧೆಯನ್ನು ಹೊಗಲಾಡಿ ಸುತ್ತಿರುವುದು ಒಳ್ಳೆಯ ವಿಚಾರ. ಮಾನವ ಜನಾಂಗ ಉದ್ಧಾರದ ಎಲ್ಲ ವಿಚಾರಗಳನ್ನು ನಾನು ಬೆಂಬಲಿ ಸುತ್ತೇನೆ. ಹೃದಯಕ್ಕೆ ಯಾವುದು ಒಳ್ಳೆಯದು ಎಂದು ತೋಚುತ್ತದೆಯೋ ಅದನ್ನು ಮಾಡುತ್ತಾ ಮುನ್ನಡೆ ಯಬೇಕು ಎಂದು ಹೇಳಿರುವ ಬುದ್ಧನ ವಿಚಾರ ಬಹಳ ಸರಳ, ಸ್ಪಷ್ಟವಾಗಿದೆ~ ಎಂದರು.
ಸುಲಫಲ ಮಠದ ಮಹಾಂತ ಶಿವಾಚಾರ್ಯ ಮಾತನಾಡಿ, ಗುಡಿ-ಗುಂಡಾರ, ಮಠಗಳು ಬಿದ್ದು ಹೋಗುತ್ತವೆ. ಆದರೆ ಜಂಗಮಕ್ಕೆ ಅಳಿವಿಲ್ಲ. ಜಂಬಗಿ ಶರಣರು ಇಲ್ಲದಿರಬಹುದು. ಅವರ ಸಾಹಿತ್ಯ ನಮ್ಮೆಲ್ಲರ ಹೃದಯದಲ್ಲಿದೆ. ಸಾಹಿತ್ಯದ ಮೂಲಕವೆ ಪೀಳಿಗೆಯಿಂದ ಪೀಳಿಗೆಗೆ ಶರಣರ, ಮಹಾತ್ಮರ ವಿಚಾರಗಳು ಸಾಗುತ್ತವೆ ಎಂದರು.
ಅಂಬಾರಾಯ ಅಷ್ಟಗಿ, ಪ್ರೊ. ವೀರಣ್ಣಾ ದಂಡೆ, ರೇವಣಸಿದ್ಧ ಶಿವಾಚಾರ್ಯ, ರತ್ನಮ್ಮಾ ಗುರುತಾಯಿ, ಬೆಲ್ದಾಳ ಸಿದ್ಧರಾಮ ಶರಣರು, ಜಿ. ರಾಮಕೃಷ್ಣ, ವಿಠಲ ಹೇರೂರ, ಡಾ. ಶರಣಪ್ರಕಾಶ ಪಾಟೀಲ, ಅರುಣಾ ಸಿ. ಪಾಟೀಲ ರೇವೂರ, ರವೀಂದ್ರ ಎಂ. ಲಠ್ಠೆ, ದೇವಿಂದ್ರಪ್ಪಾ ಮರತೂರ, ಮಾರುತಿ ಕಣ್ಣಿ ಮತ್ತಿತರರು ವೇದಿಕೆಯಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.