ಸಾಗರ : ಇಲ್ಲಿಗೆ ಸಮೀಪದ ಆಡುಕಟ್ಟಾ ಕ್ರಾಸ್ ಬಳಿ ಬೊಲೆರೊ ವಾಹನವು ಲಾರಿಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೊಲೆರೊದಲ್ಲಿದ್ದ ಕೇರಳದ ಕೊಲ್ಲಂನ ನಾಲ್ವರು ಸ್ಥಳದಲ್ಲೇ ಮೃತಪಟ್ಟು ಒಬ್ಬ ತೀವ್ರವಾಗಿ ಗಾಯಗೊಂಡ ಘಟನೆ ಶುಕ್ರವಾರ ಸಂಜೆ ನಡೆದಿದೆ.
ಎದುರಿನಿಂದ ಬಂದ ಕ್ರೂಸರ್ ವಾಹನವನ್ನು ತಪ್ಪಿಸಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಮೃತರನ್ನು ರಾಜು, ಸಜಿ, ಶಿವನ್, ಶ್ರೀನಾಥ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ವಿದೇಶದಲ್ಲಿ ಕೆಲಸದಲ್ಲಿದ್ದು, ರಜೆ ಪಡೆದು ಇಲ್ಲಿಗೆ ಬಂದಿದ್ದರು ಎನ್ನಲಾಗಿದೆ. ಮೃತಪಟ್ಟವರು 27ರಿಂದ 30 ವರ್ಷದ ಒಳಗಿನ ವಯೋಮಾನದವರು.
ಗಾಯಗೊಂಡ ಸಾಜಿದ್ ಅವರನ್ನು ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾಜಿದ್ ಮತ್ತು ಅವರ ಸಂಗಡಿಗರು ಕೇರಳದಿಂದ ಗೋವಾ ಪ್ರವಾಸ ಮುಗಿಸಿಕೊಂಡು ಜೋಗ್ಫಾಲ್ಸ್ ನೋಡಲು ಆಗಮಿಸಿದ್ದರು. ಜೋಗ ನೋಡಿಕೊಂಡು ಬೆಂಗಳೂರಿಗೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಅಪಘಾತವಾದ ಸ್ಥಳ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಠಾಣೆಯ ವ್ಯಾಪ್ತಿಗೆ ಸೇರಿದ್ದು, ಅಲ್ಲಿನ ಪೊಲೀಸರು ಸ್ಥಳಕ್ಕೆ ಧಾವಿಸಿ ಮಹಜರ್ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.