ADVERTISEMENT

ಅಭಿವೃದ್ಧಿಗೆ ವಿಪಕ್ಷಗಳ ಸಹಕಾರ ಅಗತ್ಯ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 6:55 IST
Last Updated 18 ಜನವರಿ 2011, 6:55 IST

ಹರಿಹರ: ತಾಲ್ಲೂಕಿನ ಅಭಿವೃದ್ಧಿಗಾಗಿ ಜೆಡಿಎಸ್ ಹಾಗೂ ಕಾಂಗ್ರೆಸ್ ಬಿಜೆಪಿಯನ್ನು ಬೆಂಬಲಿಸಬೇಕು’ ಎಂದು ಶಾಸಕ ಬಿ.ಪಿ. ಹರೀಶ್ ಮನವಿ ಮಾಡಿದರು.
ತಾಲ್ಲೂಕು ಪಂಚಾಯ್ತಿ ಸಭಾಂಗಣದಲ್ಲಿ ಸೋಮವಾರ ನಡೆದ ಜಮಾಬಂದಿ ಹಾಗೂ ನಿರ್ಗಮಿಸುತ್ತಿರುವ ತಾ.ಪಂ. ಸದಸ್ಯರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

ತಾ.ಪಂ. ಬಿಜೆಪಿ 8, ಕಾಂಗ್ರೆಸ್ 7, ಜೆಡಿಎಸ್ 2 ಹಾಗೂ ಪಕ್ಷೇತರ 1 ಸದಸ್ಯರಿದ್ದಾರೆ. ಪಕ್ಷೇತರ ಸದಸ್ಯೆ ಬಿಜೆಪಿ ಬೆಂಬಲಿಸಿದ್ದಾರೆ. ಪ್ರಸ್ತುತ ವರ್ಷದಿಂದ ಪ್ರತಿ ತಾ.ಪಂ.ಗೆ ್ಙ  10 ಕೋಟಿ ಅನುದಾನ ದೊರೆಯಲಿದೆ. ತಾಲ್ಲೂಕಿನ ಸಮಗ್ರ ಅಭಿವೃದ್ಧಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಮಾಜಿ ತಾ.ಪಂ. ಚುನಾಯಿತ ಸದಸ್ಯರಿಗೆ ಮನವಿ ಮಾಡಿದ ಅವರು, ತಾಲ್ಲೂಕಿ ಅಭಿವೃದ್ಧಿ ದೃಷ್ಟಿಯಿಂದ ಮಾಜಿ ತಾ.ಪಂ. ಸದಸ್ಯರು ನೀಡುವ ಎಲ್ಲಾ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಕಳೆದ 5 ವರ್ಷಗಳಲ್ಲಿ ಆಡಳಿತ ನಡೆಸಿದ ಎಲ್ಲಾ ಚುನಾಯಿತ ತಾ.ಪಂ. ಸದಸ್ಯರು ಒಳ್ಳೆಯ ಹೊಂದಾಣಿಕೆಯಿಂದ ಆಡಳಿತ ನಡೆಸಿದ್ದಾರೆ. ತಾಲ್ಲೂಕು ಅಭಿವೃದ್ಧಿಯ ಮೂಲಮಂತ್ರದಿಂದ ಸೇವೆ ಸಲ್ಲಿಸಿದ್ದಾರೆ ಎಂದು ತಾ.ಪಂ. ಮಾಜಿ ಸದಸ್ಯರಾದ ಟಿ.ಜೆ. ಮುರುಗೇಶಪ್ಪ, ಹಾಲೇಶಗೌಡ, ಮಹಮದ್ ರೋಷನ್ ತಿಳಿಸಿದರು.
1995ರಲ್ಲಿ ತಾ.ಪಂ. ಸಭೆಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಯುತ್ತಿದ್ದವು. ಕಳೆದ ಐದು ವರ್ಷದಲ್ಲಿ 18 ತಾ.ಪಂ. ಸದಸ್ಯರಲ್ಲಿ ಎಂದಿಗೂ ಜಾತಿ ಹಾಗೂ ಪಕ್ಷಬೇಧಗಳು ಬರಲಿಲ್ಲ. ತಾಲ್ಲೂಕಿನ ಅಭಿವೃದ್ಧಿಯನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸಿದೆವು. ನಮ್ಮ ಕಾಲದ ನಡೆದ ಅಭಿವೃದ್ಧಿ ಕಾರ್ಯಗಳ ಕುರಿತು ತೃಪ್ತಿ ಇದೆ ಎಂದು ಎಸ್. ಮಂಜುಳಮ್ಮ ಅಭಿಪ್ರಾಯಪಟ್ಟರು.

ದಾವಣಗೆರೆ ಜಿಲ್ಲಾ ಯೋಜನಾ ನಿರ್ದೇಶಕ ಶಿವಲಿಂಗಪ್ಪ ಅವರ ಸಮ್ಮುಖದಲ್ಲಿ ಜಮಾಬಂದಿ ಕಾರ್ಯಕ್ರಮ ನಡೆಯಿತು. ತಾ.ಪಂ. ಮಾಜಿ ಅಧ್ಯಕ್ಷೆ ಎ.ಕೆ. ಸುಮಿತ್ರಮ್ಮ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಉಪಾಧ್ಯಕ್ಷೆ ಚನ್ನಬಸಮ್ಮ ಬಲ್ಲೂರು, ಇಒ ಎಚ್.ಎನ್. ರಾಜ್, ತಹಶೀಲ್ದಾರ್ ಬಿ. ನಜ್ಮಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.