ADVERTISEMENT

ಅಭಿವೃದ್ಧಿ ಪಥಕ್ಕೆ ಅಂಕಿ-ಅಂಶವೇ ಮೆಟ್ಟಿಲು

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 19:30 IST
Last Updated 29 ಜೂನ್ 2012, 19:30 IST
ಅಭಿವೃದ್ಧಿ ಪಥಕ್ಕೆ ಅಂಕಿ-ಅಂಶವೇ ಮೆಟ್ಟಿಲು
ಅಭಿವೃದ್ಧಿ ಪಥಕ್ಕೆ ಅಂಕಿ-ಅಂಶವೇ ಮೆಟ್ಟಿಲು   

ದಾವಣಗೆರೆ: ಜನಜೀವನ ಮಟ್ಟ ತಿಳಿಯಲು, ಅಭಿವೃದ್ಧಿ ಕಡೆ ಸಾಗಲು ಅಂಕಿ-ಅಂಶ ಬಹು ಮುಖ್ಯ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಜಿ.ಆರ್. ಓಂಕಾರಪ್ಪ ತಿಳಿಸಿದರು.

ಶುಕ್ರವಾರ ಜಿಲ್ಲಾ ಸಾಂಖ್ಯಿಕ ಅಧಿಕಾರಿಗಳ ಕಚೇರಿ, ಎ.ವಿ. ಕಮಲಮ್ಮ ಕಾಲೇಜು ಆಶ್ರಯದಲ್ಲಿ ಪ್ರೊ.ಪಿ.ಸಿ. ಮಹಾಲನೋಬಿಸ್ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡ ಸಾಂಖ್ಯಿಕ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಸನ್ನಚಂದ್ರ ಮಹಾಲನೋಮಿಸ್ ದೇಶ ಕಂಡ ಅತ್ಯುತ್ತಮ ಸಾಂಖ್ಯಿಕ ತಜ್ಞ. ಎರಡು ಪಂಚವಾರ್ಷಿಕ ಯೋಜನೆಯಲ್ಲಿ ಕೆಲಸ ಮಾಡಿ ಕೈಗಾರೀಕರಣಕ್ಕೆ ಒತ್ತು ನೀಡಿದವರು ಎಂದು ಸ್ಮರಿಸಿದರು.

ADVERTISEMENT

1950ರಲ್ಲಿ ರಾಷ್ಟ್ರೀಯ ನಮೂನೆ ಸಮೀಕ್ಷೆ ಸಂಘಟನೆಯನ್ನು ಮತ್ತು ಪ್ರಾಯೋಗಿಕ ಸಮೀಕ್ಷೆಯನ್ನು ಹುಟ್ಟು ಹಾಕಿದ್ದಾರೆ. ವರ್ತಮಾನಕಾಲಕ್ಕೆ ಬೇಕಾದ ಯೋಜನೆಗಳನ್ನು ಪ್ರಾರಂಭಿಸಲು ಅಂಕಿ-ಅಂಶ ಬಹು ಮುಖ್ಯ ಎಂದು ತಿಳಿಸಿದರು.

ಜಿಲ್ಲಾ ಸಾಂಖ್ಯಿಕ ಅಧಿಕಾರಿ ಪಿ.ಎಂ. ವಿಶ್ವನಾಥ್ ಮಾತನಾಡಿ, 2006ರಿಂದ ಕೇಂದ್ರ ಸರ್ಕಾರ ಮಹಾಲನೋಮಿಸ್ ಜನ್ಮದಿನವನ್ನು ಸಾಂಖ್ಯಿಕ ದಿನಚರಣೆಯಾಗಿ ಆಚರಿಸುವಂತೆ ಹೇಳಿದೆ. ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ಕಚೇರಿಯು ಜಿಲ್ಲಾಮಟ್ಟದಲ್ಲಿ ಕೃಷಿ ಮತ್ತು ಜನನ, ಮರಣದ ಅಂಕಿ-ಅಂಶಗಳನ್ನು ಸಂಗ್ರಹಿಸುತ್ತದೆ. ಜತೆಗೆ, ಅಂಕಿ-ಅಂಶಗಳ ನೋಟ ಪುಸ್ತಕವನ್ನು ಹೊರತರುತ್ತೇವೆ. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಎವಿಕೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎಸ್. ಹನುಮಂತಪ್ಪ, ಮುಖ್ಯ ಲೆಕ್ಕಾಧಿಕಾರಿ ಜಯರಾಂ, ಎಸ್‌ಬಿಸಿ ಕಾಲೇಜಿನ ಪ್ರಾಂಶುಪಾಲ ಡಾ.ಷಣ್ಮುಖ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.