ADVERTISEMENT

ಆಚರಣೆ ಹೆಸರಿನಲ್ಲಿ ಜಿಜ್ಞಾಸೆ ಆರಂಭ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 19:30 IST
Last Updated 11 ಫೆಬ್ರುವರಿ 2012, 19:30 IST

ದಾವಣಗೆರೆ: ಬಸವ ಜಯಂತಿಯ ಶತಮಾನೋತ್ಸವ ವರ್ಷ ಆಚರಣೆಗೆ ಸಂಬಂಧಿಸಿದಂತೆ ಚಿತ್ರದುರ್ಗ ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಸಭೆ (ಫೆ. 9ರಂದು) ನಡೆಸ್ದ್ದಿದಕ್ಕೆ ಶನಿವಾರ ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮತ್ತೊಂದು ಸಭೆಯಲ್ಲಿ ಟೀಕೆ ವ್ಯಕ್ತವಾಯಿತು.
 
ಜತೆಗೆ, ಪ್ರಥಮ ಬಾರಿಗೆ ಬಸವ ಜಯಂತಿಯನ್ನು ಆಚರಿಸಿದ್ದು ಎಲ್ಲಿ ಎಂಬ ಸಂಗತಿ ಜಿಜ್ಞಾಸೆಗೂ ಕಾರಣವಾಯಿತು. ಏನೇ ಗೊಂದಲಗಳಿದ್ದರೂ `ಎಲ್ಲರೂ ಒಂದಾಗಿ~ ಕಾರ್ಯಕ್ರಮ ಆಯೋಜಿಸಿದರೆ ಮಾತ್ರ ಸಂಪೂರ್ಣ ಯಶಸ್ಸು ಸಾಧ್ಯ ಆಗುತ್ತದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

`ವಿಶ್ವ ಶರಣ ಸಂಕುಲ~ದ ವತಿಯಿಂದ ಸಂಚಾಲಕ ಅರವಿಂದ ಜತ್ತಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ, ಮುರುಘಾ ಶರಣರು ನಡೆಸಿದ ಸಭೆಯ ಬಗ್ಗೆ `ಅಸಮಾಧಾನ~ ಕೇಳಿಬಂದಿತು.
ಸಭೆಯಲ್ಲಿ ಪಾಲ್ಗೊಂಡಿದ್ದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ ಮಾತನಾಡಿ, ಮೊದಲಿಗೆ ಬಸವ ಜಯಂತಿ ಆಚರಣೆಯನ್ನು ವಿರಕ್ತಮಠದಲ್ಲಿ ಆರಂಭಿಸಲಾಯಿತು.
 
ಇದನ್ನು ವಿದ್ವಾಂಸರಾದ ಡಾ.ಎಂ.ಎಂ. ಕಲಬುರ್ಗಿ, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಮೊದಲಾದವರೇ ದೃಢಪಡಿಸಿದ್ದಾರೆ. ಹೀಗಾಗಿ ನಾವೆಲ್ಲರೂ ಒಂದು ತೀರ್ಮಾನಕ್ಕೆ ಬರಬೇಕು. ಬಸವ ಜಯಂತಿಯ `ಗಂಗೋತ್ರಿ~ ವಿರಕ್ತಮಠ ಎಂಬುದನ್ನು ಯಾರೂ ಮರೆಯಬಾರದು. ಇದರಲ್ಲಿ ಭಿನ್ನಾಭಿಪ್ರಾಯ ಬೇಡವೇ ಬೇಡ. ಎಲ್ಲರೂ ಸೇರಿ ಜಯಂತಿ ಆಚರಿಸಬೇಕು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನ ಮಾದರಿಯಲ್ಲಿ ಜಯಂತಿ ಆಯೋಜಿಸಬೇಕು ಎಂದು ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ದಾವಣಗೆರೆಯ ಬಸವ ಬಳಗದ ಅಧ್ಯಕ್ಷ ಎಚ್.ಎಂ. ಸ್ವಾಮಿ, ಬಸವಪ್ರಭು ಸ್ವಾಮೀಜಿ ಎಲ್ಲರೂ ಸೇರಿ ಜಯಂತಿ ಆಚರಿಸಬೇಕು ಎನ್ನುತ್ತಾರೆ. ಆದರೆ, ವಿರಕ್ತಮಠದ ಅವರ ಸ್ವಾಮೀಜಿ (ಮುರುಘಾ ಶರಣರು) ಬೇರೆ ಸಭೆ ಏಕೆ ನಡೆಸಿದರು? ಯಾರು ಯಾರನ್ನು ಎತ್ತಿಕೊಂಡು (ಹೈಜಾಕ್) ಹೋಗುತ್ತಿದ್ದಾರೆ. ಎಲ್ಲ ಮಠಾಧೀಶರು ಬಸವ ಭಕ್ತರಾಗಿ ಬರಲಿ. ಸಭೆ ಫೆ. 11ಕ್ಕೆ ನಿಗದಿಯಾಗಿದ್ದರೂ ಮುಂಚಿತವಾಗಿ 9ಕ್ಕೇ ನಡೆಸಿದ್ದು ಏಕೆ ಎಂದು ಖಾರವಾಗಿ ಪ್ರಶ್ನಿಸಿದರು.

ಇದರಿಂದ ಮುಜುಗರ ಅನುಭವಿಸಿದ ವಿರಕ್ತಮಠದ ಬಸವಪ್ರಭು ಸ್ವಾಮೀಜಿ, ಸ್ಪಷ್ಟನೆ ನೀಡಲು ಮುಂದಾದರು. ಆದರೆ, ಆಯೋಜಕರು ಇದಕ್ಕೆ ಅವಕಾಶ ಮಾಡಿಕೊಡಲಿಲ್ಲ. ವೇದಿಕೆಯಲ್ಲಿದ್ದ ಮೈಕ್ ಬಳಿ ಹೋದರೂ ಸಹ ಅವರಿಗೆ ಅವಕಾಶ ನಿರಾಕರಿಸಲಾಯಿತು. ಇದರಿಂದ ಅವರು ಮತ್ತಷ್ಟು ಮುಜುಗರಕ್ಕೆ ಒಳಗಾದರು.
ಸಭೆಗೆ, ವಿವಿಧ ಜಿಲ್ಲೆಗಳಿಂದ ವೀರಶೈವ ಮಹಾಸಭಾದ ಮುಖಂಡರನ್ನು ಆಹ್ವಾನಿಸಲಾಗಿತ್ತು. ಎಲ್ಲರೂ ಅಭಿಪ್ರಾಯ ಹಂಚಿಕೊಳ್ಳಲು ಮುಂದಾಗಿದ್ದರಿಂದ ಕೆಲ ಕಾಲ ಗೊಂದಲ ಉಂಟಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.