ADVERTISEMENT

ಆನಂದ್‌ಸಿಂಗ್‌ಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 15 ಜುಲೈ 2012, 19:30 IST
Last Updated 15 ಜುಲೈ 2012, 19:30 IST
ಆನಂದ್‌ಸಿಂಗ್‌ಗೆ ಅದ್ದೂರಿ ಸ್ವಾಗತ
ಆನಂದ್‌ಸಿಂಗ್‌ಗೆ ಅದ್ದೂರಿ ಸ್ವಾಗತ   

ಹೊಸಪೇಟೆ: ರಾಜ್ಯ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಪಡೆದ ವಿಜಯನಗರ ಕ್ಷೇತ್ರದ ಶಾಸಕ ಆನಂದಸಿಂಗ್ ಭಾನುವಾರ ನಗರಕ್ಕೆ ಆಗಮಿಸಿದಾಗ ಅದ್ದೂರಿ ಸ್ವಾಗತ ನೀಡಲಾಯಿತು.

`ವಿಜಯನಗರದ ವೀರಪುತ್ರನಿಗೆ ಜಯವಾಗಲಿ~ ಎಂಬ ಘೋಷಣೆಯೊಂದಿಗೆ ತಿಲಕವಿಟ್ಟು ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು. ಡ್ಯಾಂ ವೃತ್ತದಿಂದ ಸಾಯಿಬಾಬಾ ವೃತ್ತದವರೆಗೂ ಸೇರಿದ್ದ ಡ್ಯಾಂ ನಿವಾಸಿಗಳು ರಸ್ತೆಯುದ್ದಕ್ಕೂ ನಿಂತು ಕೈಬಿಸುತ್ತಾ ಸಾಗಿಬಂದರು. ಹರ್ಷ ಮೊಗದಲ್ಲಿ ಎದ್ದುಕಾಣುತ್ತಿತು. 

ಹೊಸಪೇಟೆ ನಗರಸಭೆ ಅಧ್ಯಕ್ಷ ಎಂ.ಅಮ್ಜದ್ ಮತ್ತು ಸದಸ್ಯರು ಪುಪ್ಪಮಾಲಿಕೆ ಸಲ್ಲಿಸುವ ಮೂಲಕ ನೂತನ ಸಚಿವರನ್ನು ಸಾಂಪ್ರದಾಯಿಕ ಸ್ವಾಗತ ಬಯಸಿದರು. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ತಾಲ್ಲೂಕಿನ ಬೇರೆ ಬೇರೆ ಗ್ರಾಮಗಳ ಗ್ರಾಮ ಪಂಚಾಯ್ತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರು, ವಿವಿಧ ನಿಗಮ ಮಂಡಳಿಗಳ ಪದಾಧಿಕಾರಿಗಳು ಸೇರಿದಂತೆ ಚುನಾಯಿತ ಪ್ರತಿನಿಧಿಗಳು ಸಚಿವರನ್ನು ಆತ್ಮೀಯವಾಗಿ ಬರಮಾಡಿಕೊಂಡರು. ನಗರದ ಹೃದಯ ಭಾಗವಾದ ವಾಲ್ಮೀಕಿ ವೃತ್ತವನ್ನು ಮೆರವಣಿಗೆ ಪ್ರವೇಶಿಸುತ್ತಿದ್ದಂತೆಯೇ ಆರಂಭವಾದ ಮಳೆ ನಿರಂತರವಾಗಿ ಸುರಿದರೂ ಲೆಕ್ಕಿಸದೇ ಸಂಭ್ರಮಿಸಿದರು.  

ADVERTISEMENT

ಸಾಂಪ್ರದಾಯಿಕ ಡೊಳ್ಳು, ನಂದಿಕೋಲು, ಮರಗಾಲು ಕುಣಿತ, ಹಲಗೆ, ಹಗಲು ವೇಷ, ಗುಜರಾತಿ ಸಾಂಪ್ರದಾಯಿಕ ಮೇಳಗಳು ಮೆರವಣಿಗೆ ಉದ್ದಕ್ಕೂ ಗಮನ ಸೆಳೆಯಿತು. ಕೇರಳದ ವಾದ್ಯದೊಂದಿಗೆ ಪಾಲ್ಗೊಂಡ ಕಲಾತಂಡ ಹಾಗೂ ಸಚಿವರ ತಂದೆ ಪೃಥ್ವಿರಾಜ್ ಸಿಂಗ್ ಸಹ  ನೃತ್ಯಮಾಡುವ ಮೂಲಕ ಗಮನ ಸೆಳೆದರು.   ನಗರದ ಪ್ರಮುಖ ರಸ್ತೆಯಲ್ಲಿ ಸಾಗಿಬಂದ ಮೇರವಣಿಗೆ  ಸಂಜೆ 6-00ಕ್ಕೆ ಬಿಜೆಪಿ ಕಚೇರಿ ಸೇರಿತು. ರಸ್ತೆ ಉದ್ದಕ್ಕೂ ಪಟಾಕಿ ಸಿಡಿಸಿ, ಸಿಹಿ ಹಂಚಿ ಸಿಂಗ್ ಅವರ ಅಭಿಮಾನಿಗಳು ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.