ADVERTISEMENT

ಆಸ್ಪತ್ರೆಗೂ ನಾಗರಿಕ ಸನ್ನದು ಜಾರಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 19:30 IST
Last Updated 13 ಫೆಬ್ರುವರಿ 2011, 19:30 IST

ಗುಲ್ಬರ್ಗ: ಗುಲ್ಬರ್ಗದ ಬಸವೇಶ್ವರ ಆಸ್ಪತ್ರೆಯು ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ-2007ರ ಅನ್ವಯ ನಾಗರಿಕ ಸನ್ನದು ಅನುಸರಿಸಲಿರುವ ರಾಜ್ಯದ ಪ್ರಥಮ ಆಸ್ಪತ್ರೆ ಆಗಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಎಸ್.ಎ.ರಾಮದಾಸ್ ಭಾನುವಾರ ಹೇಳಿದರು.ಆಸ್ಪತ್ರೆಯಲ್ಲಿ ಬಸವೇಶ್ವರ ಬೋಧನಾ ಮತ್ತು ಸಾರ್ವಜನಿಕ ಆಸ್ಪತ್ರೆ ಸಭಾಂಗಣ ಉದ್ಘಾಟಿಸಿ ಅವರು ಮಾತನಾಡಿದರು.

ನಾಗರಿಕ ಸನ್ನದು ಅನ್ವಯ ಆಸ್ಪತ್ರೆಯಲ್ಲಿ ಮಾರ್ಚ್1ರಿಂದ ಚಿಕಿತ್ಸೆ, ವೈದ್ಯರು, ವೆಚ್ಚಗಳ ಮಾಹಿತಿಯನ್ನು ಪ್ರದರ್ಶಿಸಬೇಕು. ರೋಗಿಗಳು ಇಚ್ಛಿಸಿದಲ್ಲಿ ದೈನಂದಿನ ಪರೀಕ್ಷಾ ವರದಿ, ಸೇವೆಗಳ ವಿವರ, ಮಾಹಿತಿಗಳ ಕೈಪಿಡಿಯನ್ನು ನೀಡಬೇಕು ಎಂದರು.ಬಸವೇಶ್ವರ ಆಸ್ಪತ್ರೆಗೆ ಪ್ರಾದೇಶಿಕ ಕ್ಯಾನ್ಸರ್ ಆಸ್ಪತ್ರೆ ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದರು.

ಮೈಸೂರಿನ ಕೆ.ಆರ್.ಆಸ್ಪತ್ರೆಯನ್ನು ಭ್ರಷ್ಟಾಚಾರ ಮುಕ್ತ ಆಸ್ಪತ್ರೆ ಎಂದು ಶೀಘ್ರದಲ್ಲೇ ಘೋಷಿಸಲಾಗುವುದು.ರಾಜ್ಯದಲ್ಲೇ ಭ್ರಷ್ಟಾಚಾರ ನಿರ್ಮೂಲನೆಗೆ ಆದ್ಯತೆ ನೀಡಿದ್ದು,  ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಇದಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ, ಗ್ರಂಥಾಲಯ ಸಚಿವ ರೇವೂನಾಯಕ ಬೆಳಮಗಿ, ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಡಾ.ಸೂರ್ಯಕಾಂತ ಜಿ. ಪಾಟೀಲ, ಡಾ.ಎ.ವಿ. ದೇಶಮುಖ, ಡಾ.ಬಿ.ಮಲ್ಲಿಕಾರ್ಜುನ, ಡಾ.ಬಸವರಾಜ ಜಿ. ಪಾಟೀಲ, ಡಾ.ವೀಣಾ ಎ.ಪಾಟೀಲ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.