ADVERTISEMENT

ಉಡುಪಿ: ಸೋದೆ ಶ್ರೀ ಪುರಪ್ರವೇಶ

​ಪ್ರಜಾವಾಣಿ ವಾರ್ತೆ
Published 2 ಜನವರಿ 2012, 19:30 IST
Last Updated 2 ಜನವರಿ 2012, 19:30 IST
ಉಡುಪಿ: ಸೋದೆ ಶ್ರೀ ಪುರಪ್ರವೇಶ
ಉಡುಪಿ: ಸೋದೆ ಶ್ರೀ ಪುರಪ್ರವೇಶ   

ಉಡುಪಿ: ಭಾವಿ ಪರ್ಯಾಯ ಪೀಠಾಧೀಶ ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಸೋಮವಾರ ಸಂಜೆ ನಗರದ ಜೋಡುಕಟ್ಟೆ ಬಳಿ ಪುರ ಪ್ರವೇಶ ಮಾಡಿದರು. ಜಿಲ್ಲಾ ಉಸ್ತುವಾರಿ ಸಚಿವ, ಸ್ವಾಗತ ಸಮಿತಿ ಕಾರ್ಯಾಧ್ಯಕ್ಷ ಡಾ. ವಿ.ಎಸ್.ಆಚಾರ್ಯ ಅವರ ನೇತೃತ್ವದಲ್ಲಿ ಊರ ಗಣ್ಯರು ಸ್ವಾಮೀಜಿಯವರನ್ನು ಬರಮಾಡಿಕೊಂಡರು. ವೈಭವದ ಮೆರವಣಿಗೆ ಮೂಲಕ ಅವರನ್ನು ರಥಬೀದಿಗೆ ಕರೆದೊಯ್ಯಲಾಯಿತು.

ಗೋದೂಳಿ ಸಮಯದಲ್ಲಿ ಕೃಷ್ಣ ಮಠದ ಕನಕನ ಕಿಂಡಿಯಲ್ಲಿ ಸ್ವಾಮೀಜಿ ಶ್ರೀಕೃಷ್ಣನ ದರ್ಶನ ಪಡೆದರು. ಬಳಿಕ ಚಂದ್ರಮೌಳೀಶ್ವರ, ಅನಂತೇಶ್ವರ ದೇವರ ದರ್ಶನ ಮಾಡಿ ಕೃಷ್ಣಮಠ ಪ್ರವೇಶಿಸಿದರು. ಸೋದೆ ಮಠದ ಹೆಬ್ಬಾಗಿಲಿನಲ್ಲಿ ನವಗ್ರಹ ದಾನ ಕಾರ್ಯ ನಡೆಯಿತು. ನಂತರ ಸ್ವಾಮೀಜಿ ಸೋದೆ ಮಠ ಪ್ರವೇಶಿಸಿದರು.

ಆರಂಭದಲ್ಲೇ ವಿವಾದ: ಪ್ರತಿ ಪರ್ಯಾಯ ಅವಧಿಯಲ್ಲೂ ಅಷ್ಠ ಮಠಗಳ ನಡುವೆ ಒಂದಿಲ್ಲೊಂದು ಭಿನ್ನಾಭಿಪ್ರಾಯ ತಲೆದೋರುತ್ತಲೇ ಇದ್ದು, ಈ ಬಾರಿಯ ಪರ್ಯಾಯದಲ್ಲೂ ಹೊಸ ವಿವಾದದ ಕಿಡಿ ಹೊತ್ತಿದೆ.

ಪರ್ಯಾಯ ಮಹೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆಯಾಗಿದ್ದು, ರಾಜಾಂಗಣದಲ್ಲಿನ ಪರ್ಯಾಯ ದರ್ಬಾರಿನಲ್ಲಿ ಪಾಲ್ಗೊಳ್ಳುವ ಅಷ್ಠ ಮಠಾಧೀಶರ ಪಟ್ಟಿಯಲ್ಲಿ ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರ ಹೆಸರು ಕೈಬಿಡಲಾಗಿದೆ.

ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಶ್ರೀಕೃಷ್ಣ ಮುಖ್ಯಪ್ರಾಣ ಭಕ್ತವೃಂದ ಹಾಗೂ ಹಿಂದೂ ಸಮಾಜದ ನಾಗರಿಕ ಸಮಿತಿ, ಪುತ್ತಿಗೆ ಮಠದ ಸುಗುಣೇಂದ್ರ ತೀರ್ಥರನ್ನೂ ಸೇರಿಸಿಕೊಂಡು ಒಗ್ಗಟ್ಟಿನಿಂದ ಪರ್ಯಾಯ ಮಹೋತ್ಸವ ಆಚರಿಸಬೇಕು ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.