ADVERTISEMENT

ಉತ್ತಮ ಹಾಲು ಉತ್ಪಾದನೆಗೆ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2012, 19:30 IST
Last Updated 10 ಜನವರಿ 2012, 19:30 IST

ಆನೇಕಲ್: ರೈತರು ಗುಣಮಟ್ಟದ ಹಾಲು ಉತ್ಪಾದನೆಗೆ ವೈಜ್ಞಾನಿಕ ವಿಧಾನಗಳನ್ನು ಅಳವಡಿಸಿಕೊಳ್ಳಲು ಮಾರ್ಗದರ್ಶನ ನೀಡಬೇಕು ಎಂದು ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ನುಡಿದರು.

ಅವರು ತಾಲ್ಲೂಕಿನ ಆದಿಗೊಂಡಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳಿಗೆ ಏರ್ಪಡಿಸಿದ್ದ ಮಾರ್ಗದರ್ಶನ ಸಭೆ ಉದ್ಘಾಟಿಸಿ ಮಾತನಾಡಿದರು.

ತಾಲ್ಲೂಕಿನ ಶೇ.75ರಷ್ಟು ಸಂಘಗಳು ಗುಣಮಟ್ಟದ ಹಾಲನ್ನು ಸರಬರಾಜು ಮಾಡುತ್ತಿವೆ. ಶೇ.25ರಷ್ಟು ಸಹಕಾರ ಸಂಘಗಳು ಸುಧಾರಣೆಯಾಗಬೇಕಾಗಿದೆ. ಗುಣಮಟ್ಟ ಕಡಿಮೆಯಿರುವ ಗ್ರಾಮಗಳಲ್ಲಿ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಒಕ್ಕೂಟದ ಅಧಿಕಾರಿಗಳ ಸಹಕಾರದಿಂದ ತರಬೇತಿ ಕಾರ್ಯಕ್ರಮಗಳನ್ನು ರೂಪಿಸಿ ರೈತರಿಗೆ ಅರಿವು ಮೂಡಿಸುವ ಕಾರ್ಯ ಮಾಡಬೇಕು ಎಂದರು.

 ರಾಜ್ಯ ಸರ್ಕಾರ ಹಾಲಿನ ದರ ಏರಿಕೆ ಮಾಡುವ ಮೂಲಕ ರೈತರಿಗೆ ಬೆಂಬಲ ನೀಡಿದೆ. ಹೆಚ್ಚಳ ಮಾಡಿದ ದರದಲ್ಲಿ 2.50ರೂ.ವನ್ನು ರೈತರಿಗೆ ನೀಡಲಾಗುತ್ತಿದೆ. ಉತ್ಪಾದನಾ ವೆಚ್ಚ ಹೆಚ್ಚಾದ ಹಿನ್ನೆಲೆಯಲ್ಲಿ ರೈತರಿಗೆ ಅನೂಕೂಲವಾಗಿದೆ ಎಂದರು.

ಒಕ್ಕೂಟದ ವತಿಯಿಂದ ರಿಯಾಯತಿ ದರದಲ್ಲಿ ನೀಡಲಾಗುತ್ತಿರುವ ಗೋದಾ ಶಕ್ತಿ ಪಶು ಆಹಾರ, ಖನಿಜ ಮಿಶ್ರಣ ಬಳಕೆ ಮಾಡಬೇಕು, ಅಜೋಲ ಬೆಳೆಸಬೇಕು ಎಂದರು.  ಆದಿಗೊಂಡನಹಳ್ಳಿ ಹಾಲು ಸಂಘದ ಅಧ್ಯಕ್ಷ ಎಂ.ತಿಮ್ಮರಾಯರೆಡ್ಡಿ, ಆನೇಕಲ್ ಶೀಥಲ ಕೇಂದ್ರದ ವ್ಯವಸ್ಥಾಪಕರಾದ ಡಾ.ರಾಘವನ್, ಚಂದ್ರಾರೆಡ್ಡಿ, ವಿಸ್ತರಣಾಧಿಕಾರಿಗಳಾದ ಎಸ್.ಕೆ.ನಿಂಗಪ್ಪ, ನಾರಾಯಣರೆಡ್ಡಿ, ಸಹಾಯಕ ವ್ಯವಸ್ಥಾಪಕ ರೇವಣ್ಣ, ನಿವೃತ್ತ ಮುಖ್ಯಶಿಕ್ಷಕ ಮುನಿಯಪ್ಪ, ಕಾರ್ಯದರ್ಶಿ ಆರ್.ವೆಂಕಟಸ್ವಾಮಿರೆಡ್ಡಿ ಮತ್ತಿತರರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.