ADVERTISEMENT

ಉಮಾಮಹೇಶ್ವರಿ ದೇಗುಲ ಪುನರ್ ಪ್ರತಿಷ್ಠಾಪನೆ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2011, 8:20 IST
Last Updated 14 ಫೆಬ್ರುವರಿ 2011, 8:20 IST

ಕುಶಾಲನಗರ: ‘ಧಾರ್ಮಿಕತೆ- ಆಧ್ಯಾತ್ಮಿಕತೆ ಆಚರಣೆಗಳಿಂದ ಸಮಾಜದಲ್ಲಿ ಶಾಂತಿ, ನೆಮ್ಮದಿ ನೆಲೆಸಲು ಸಾಧ್ಯ’ ಎಂದು ಸೋಮವಾರಪೇಟೆ ವಿರಕ್ತ ಮಠದ ವಿಶ್ವೇಶ್ವರ ಸ್ವಾಮೀಜಿ ಭಾನುವಾರ ಶಿರಂಗಾಲದಲ್ಲಿ ಹೇಳಿದರು. ಉತ್ತರ ಕೊಡಗಿನ ಶಿರಂಗಾಲ ಗ್ರಾಮದಲ್ಲಿ ಗ್ರಾಮ ದೇವತಾ ಸಮಿತಿ, ಉಮಾಮಹೇಶ್ವರಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ವತಿಯಿಂದ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್, ಪ್ರಾಚ್ಯ ವಸ್ತು ಸಂಗ್ರಹಾಲಯ ಇಲಾಖೆ ಮತ್ತು ಸಂಯುಕ್ತಾಶ್ರಯದಲ್ಲಿ ರೂ. 9.25 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡ ಉಮಾಮಹೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನಾ ಮಹೋತ್ಸವ ಸಮಾರಂಭದ ಅಂಗವಾಗಿ ಏರ್ಪಡಿಸಿದ್ದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ವಚನಕಾರರು ಹಾಕಿಕೊಟ್ಟ ಮಾರ್ಗದರ್ಶನ ಮತ್ತು ಧಾರ್ಮಿಕ ವಿಚಾರಧಾರೆಗಳನ್ನು ಮೈಗೂಡಿಸಿಕೊಳ್ಳುವ ಮೂಲಕ ಸಮಾಜದ ಉನ್ನತಿಗೆ ಪ್ರಯತ್ನಿಸಬೇಕು ಎಂದರು. ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ಗ್ರಾಮಗಳಲ್ಲಿ ಪ್ರತಿಯೊಬ್ಬರೂ ಪರಸ್ಪರ ಪ್ರೀತಿ- ವಿಶ್ವಾಸ, ಸೌಹಾರ್ದದ ಬದುಕು ನಡೆಸಲು ಧಾರ್ಮಿಕ ಆಚರಣೆಗಳು ಸಹಕಾರಿಯಾಗಿವೆ ಎಂದರು.

ಪ್ರತಿಯೊಬ್ಬರೂ ಧನ, ವಿದ್ಯೆ, ರೂಪ, ಕುಲ ಎಂಬ ಅಹಂ ಬಿಟ್ಟು ಧಾರ್ಮಿಕತೆ ಅನುಸರಿಸುವ ಮೂಲಕ ಸಾಮರಸ್ಯದ ಬದುಕು ಕಂಡುಕೊಳ್ಳಬೇಕು ಎಂದರು.ದೇವಾಲಯ ಸಮಿತಿ ಕಾರ್ಯದರ್ಶಿ ಎಸ್.ವಿ.ಶಿವಾನಂದ ಪ್ರಾಸ್ತಾವಿಕವಾಗಿ ಮಾತನಾಡಿದರು. ದೇವಾಲಯ ಸಮಿತಿ ಅಧ್ಯಕ್ಷ ಎಸ್.ಎನ್.ಜಯಪ್ರಕಾಶ್, ಗ್ರಾ.ಪಂ.ಅಧ್ಯಕ್ಷ ಶ್ರೀಕಾಂತ್, ಉಪಾಧ್ಯಕ್ಷೆ ಮಂಜುಳ, ಮಾಜಿ ಅಧ್ಯಕ್ಷ ಎಸ್.ವಿ.ನಂಜುಂಡಪ್ಪ, ಮುಖಂಡರಾದ ಎಸ್.ಎನ್.ವೀರಪ್ಪಶಾಸ್ತ್ರಿ, ಎಸ್.ಆರ್.ಕಾಳಿಂಗಪ್ಪ, ಎಸ್.ಎ.ನಾಗಪ್ಪ, ಎಸ್.ಆರ್.ರಾಜಪ್ಪ, ಎಸ್.ಟಿ.ಅಶ್ವತ್, ಎಸ್.ಎಸ್.ಚಂದ್ರಶೇಖರ್, ಸಿ.ಎನ್.ಲೋಕೇಶ್ ಇತರರು ಇದ್ದರು. ಎಸ್.ಪಿ.ರಾಜು ಸ್ವಾಗತಿಸಿದರು. ಶಿವಕುಮಾರ್ ನಿರ್ವಹಿಸಿದರು. ದಾಕ್ಷಾಯಿಣಿ ಪ್ರಾರ್ಥಿಸಿದರು. ದೇವಾಲಯದ ಶಿಲ್ಪಿ ಎ.ಶೇಖರ್ ಸಬದಿ, ದೇವಾಲಯ ಸಮಿತಿಗೆ ಶ್ರಮಿಸಿದವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.