ADVERTISEMENT

ಎಚ್‌ಎಂಟಿ ವಿಆರ್‌ಎಸ್ ನೌಕರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST
ಎಚ್‌ಎಂಟಿ ವಿಆರ್‌ಎಸ್ ನೌಕರರ ಪ್ರತಿಭಟನೆ
ಎಚ್‌ಎಂಟಿ ವಿಆರ್‌ಎಸ್ ನೌಕರರ ಪ್ರತಿಭಟನೆ   

ತುಮಕೂರು: ಬಾಕಿ ವೇತನ, ಗ್ರಾಚ್ಯುಟಿ, ಸ್ವಯಂ ನಿವೃತ್ತಿ (ವಿಆರ್‌ಎಸ್) ನಂತರ ನೀಡುವ ಸೌಲಭ್ಯಗಳನ್ನು ಕೊಡುವಂತೆ ಒತ್ತಾಯಿಸಿ ಎಚ್‌ಎಂಟಿ ಕಾರ್ಖಾನೆಯ ಸ್ವಯಂ ನಿವೃತ್ತಿ ಪಡೆದ ನೌಕರರು ಕಾರ್ಖಾನೆ ಮುಂಭಾಗ ಸೋಮವಾರ ಧರಣಿ ನಡೆಸಿದರು. ಧರಣಿ ತಡ ರಾತ್ರಿಯಾದರೂ ಮುಂದುವರಿದಿತ್ತು.

ಕೇಂದ್ರ ಸರ್ಕಾರ ಮತ್ತು ಕಾರ್ಖಾನೆಯ ಆಡಳಿತ ಮಂಡಳಿಯೊಂದಿಗೆ ನಡೆದ ಒಪ್ಪಂದದಂತೆ ಕಾರ್ಮಿಕರಿಗೆ ವಿಆರ್‌ಎಸ್ ಸೌಲಭ್ಯ ಜಾರಿಗೊಳಿಸಲಾಗಿತ್ತು. ಅದರಂತೆ ಕಾರ್ಖಾನೆಯ 106 ಕಾರ್ಮಿಕರು ವಿಆರ್‌ಎಸ್ ಪಡೆದಿದ್ದರು. ಜುಲೈ ತಿಂಗಳಲ್ಲಿ ವಿಆರ್‌ಎಸ್ ಪಡೆದಿದ್ದರೂ ಬರಬೇಕಾಗಿದ್ದ ಬಾಕಿ ಹಣ, ಸೌಲಭ್ಯ ನೀಡಿರಲಿಲ್ಲ. ಸಾಮಾನ್ಯವಾಗಿ 15ರಿಂದ 20 ದಿನದ ಒಳಗೆ ಎಲ್ಲ ಬಾಕಿಯನ್ನು ನೀಡಬೇಕಿತ್ತು ಎಂದು ಧರಣಿ ನಿರತ ಕಾರ್ಮಿಕರು ದೂರಿದರು.

ಸಂಜೆವರೆಗೆ ಧರಣಿ ನಡೆಸಿದರೂ ಕಾರ್ಖಾನೆ ಅಧಿಕಾರಿಗಳಿಂದ ಬಾಕಿ ಹಣದ ಕುರಿತು ಸ್ಪಷ್ಟ ಭರವಸೆ ದೊರೆಯಲಿಲ್ಲ. ಬೆಂಗಳೂರಿನಿಂದ ಡಿ.ಡಿ  ಬರಬೇಕಾಗಿದ್ದು, 25 ಕಾರ್ಮಿಕರಿಗೆ ಮೊದಲ ಹಂತದಲ್ಲಿ ಬಾಕಿ ಹಣ ನೀಡುವುದಾಗಿ ಅಧಿಕಾರಿಗಳ ಮಾತನ್ನು ಕಾರ್ಮಿಕರು ತಿರಸ್ಕರಿಸಿದರು.

ಎಲ್ಲರಿಗೂ ಬಾಕಿ ವೇತನ, ಸೌಲಭ್ಯ ನೀಡದೆ ಧರಣಿ ವಾಪಸ್ ಪಡೆಯುವುದಿಲ್ಲ ಎಂದು ಧರಣಿ ಮುಂದುವರಿಸಿದ್ದರು.ಧರಣಿ ನೇತೃತ್ವವನ್ನು ರಾಮಣ್ಣ, ಜಯಣ್ಣ, ನಾರಾಯಣಪ್ಪ, ಕುಮಾರಸ್ವಾಮಿ, ಮಂಜುನಾಥ್ ವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.