ADVERTISEMENT

ಏತ ನೀರಾವರಿ: ಅಚ್ಚುಕಟ್ಟು ಪ್ರದೇಶದ ಸರ್ವೆ ಶೀಘ್ರ

ಕುಷ್ಟಗಿ: ಕೃಷ್ಣಾ ಭಾಗ್ಯ ಜಲನಿಗಮದ ಕಚೇರಿ ಆರಂಭ

​ಪ್ರಜಾವಾಣಿ ವಾರ್ತೆ
Published 6 ಮಾರ್ಚ್ 2014, 10:02 IST
Last Updated 6 ಮಾರ್ಚ್ 2014, 10:02 IST

ಕುಷ್ಟಗಿ: ಕೊಪ್ಪಳ ಏತ ನೀರಾವರಿ ಯೋಜನೆ ವ್ಯಾಪ್ತಿಗೆ ಒಳಪಡುವ ಅಚ್ಚು­ಕಟ್ಟು ಪ್ರದೇಶವನ್ನು ಗುರುತಿಸುವ ಸರ್ವೆ ಕೆಲಸಕ್ಕೆ ಚಾಲನೆ ನೀಡಲಾಗಿದೆ ಎಂದು ಕೃಷ್ಣಾ ಭಾಗ್ಯ ಜಲನಿಗಮದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಡಿ.ಎಸ್‌.ಹರೀಶ್‌ ಹೇಳಿದರು.

ಪಟ್ಟಣದ ಸಣ್ಣ ನೀರಾವರಿ ಇಲಾಖೆ ಕಚೇರಿಯಲ್ಲಿ ಬುಧವಾರ ತೆರೆಯಲಾಗಿ­ರುವ ಕೃಷ್ಣಾ ಭಾಗ್ಯ ಜಲ ನಿಗಮದ ಉಪ ವಿಭಾಗದ ಕಚೇರಿ ಆರಂಭೋತ್ಸ­ವದ ಸಂದರ್ಭದಲ್ಲಿ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿ ವಿವರ ನೀಡಿದರು.

ಸುಮಾರು 50,000 ಹೆಕ್ಟೇರ್‌ ಪ್ರದೇಶ ನೀರಾವರಿ ವ್ಯಾಪ್ತಿಗೆ ಒಳಪಡಲಿ­ರುವ ಅಚ್ಚುಕಟ್ಟು ಪ್ರದೇಶದ ಸರ್ವೆ ನಡೆಸಿ ಮುಖ್ಯಕಾಲುವೆಯಿಂದ ಹಿಡಿದು ಹನಿ ನೀರಾವರಿ ಲ್ಯಾಟರಲ್‌ ಪೈಪ್‌­ಗಳನ್ನು ಅಳವಡಿಸುವವರೆಗಿನ ತಾಂತ್ರಿಕ ಮಾಹಿತಿ ಒದಗಿಸುವ ಕೆಲಸವನ್ನು ಇ.ಐ ಟೆಕ್ನಾಲಜಿ ಎಂಬ ಸಂಸ್ಥೆಗೆ ವಹಿಸಲಾ­ಗಿದೆ. ಇದಕ್ಕಾಗಿ ₨10.5 ಕೋಟಿ ಹಣ ಒದಗಿಸಲಾಗಿದೆ ಎಂದರು.

ಸರ್ವೆ ನಡೆಸಿ ನೀಡುವ ತಾಂತ್ರಿಕ ವರ­ದಿ­ಯನ್ನು ಇಲಾಖೆಯ ರಾಜ್ಯ ಮಟ್ಟದ ತಾಂತ್ರಿಕ ಸಮಿತಿಗೆ ಸಲ್ಲಿಸಲಾಗುತ್ತದೆ. ಸಮಿತಿ ಒಪ್ಪಿಗೆ ನಂತರ ಕೆಲಸ ಕಾಮಗಾರಿಗಳ ಟೆಂಡರ್‌ ಪ್ರಕ್ರಿಯೆಗೆ ಚಾಲನೆ ದೊರೆಯಲಿದೆ ಎಂದರು.

ಈ ಯೋಜನೆ ಸೂಕ್ಷ್ಮ ನೀರಾವರಿ ವ್ಯವಸ್ಥೆಗೆ ಒಳಪಡುವುದರಿಂದ ಸುಮಾರು 75 ಮೆ.ವ್ಯಾ ವಿದ್ಯುತ್‌ ಪೂರೈಕೆಗೆ ಅಗತ್ಯ ವ್ಯವಸ್ಥೆಗೆ ಯೋಜನೆ ರೂಪಿಸಲಾಗಿದೆ. ಯೋಜನೆಗಾಗಿಯೇ 220 ಕೆ.ವಿ ವಿದ್ಯುತ್‌ ವಿತರಣಾ ಕೇಂದ್ರವನ್ನು ಸ್ಥಾಪಿಸಲಾಗುತ್ತದೆ. ಅಲ್ಲದೇ ಮುಂದಿನ ಐದು ವರ್ಷಗಳ ವರೆಗೆ ಬೇಕಾದ ವಿದ್ಯುತ್‌ ಪೂರೈಕೆಗೆ ಸಂಬಂಧಿಸಿದಂತೆ ಕೆಪಿಟಿಸಿಎಲ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.

ಈ ನಿಟ್ಟಿನಲ್ಲಿ ಕೆಪಿಟಿಸಿಎಲ್‌ ಸಹ ಕಾರ್ಯಪ್ರವೃತ್ತವಾಗಿದೆ ಎಂದು ಹರೀಶ್‌ ವಿವರಿಸಿದರು. ಅಲ್ಲದೇ ದಕ್ಷಿಣ ಭಾರತದಲ್ಲೇ ಪ್ರಥಮ ಎನ್ನಲಾದ 750 ಮೆ.ವ್ಯಾ ಸಾಮರ್ಥ್ಯದ ಪವರ್‌ ಗ್ರಿಡ್‌ ರಾಯಚೂರಿನ ಬಳಿ ನಿರ್ಮಾಣಗೊಳ್ಳುತ್ತಿದ್ದು ದೇಶದ ಯಾವುದೇ ಮೂಲೆಯಿಂದಲಾದರೂ ಹೆಚ್ಚುವರಿ ವಿದ್ಯುತ್‌ ಪಡೆದು­ಕೊಳ್ಳು­ವುದಕ್ಕೆ ಸಾಧ್ಯವಾಗಲಿದೆ. ಹಾಗಾಗಿ ಕೊಪ್ಪಳ ಮತ್ತಿತರೆ ಏತ ನೀರಾವರಿ ಯೋಜನೆಗಳಿಗೆ ಅನುಕೂಲವಾಗಲಿದೆ ಎಂದು ಹೇಳಿದರು.

ಕಚೇರಿಗೆ ಚಾಲನೆ: ನಂತರ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ದೊಡ್ಡನಗೌಡ ಪಾಟೀಲರು ಸಣ್ಣ ನೀರಾವರಿ ಇಲಾಖೆ ಕಚೇರಿ ಬಳಿ ತೆರೆಯಲಾಗಿರುವ ಕೃಷ್ಣಾ ಭಾಗ್ಯ ಜಲನಿಗಮ ಉಪವಿಭಾಗದ ಕಚೇರಿಯ ಆರಂಭೋತ್ಸವವನ್ನು ನೆರವೇರಿಸಿದರು.

ನಂತರ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ನಡೆಯುತ್ತಿರುವ ಕಾಲುವೆ ಕಾಮಗಾರಿ ಮತ್ತಿತರೆ ಕೆಲಸ­ಕಾರ್ಯಗಳ ಸಲುವಾಗಿ ಬಳಕೆಯಾ­ಗುವ ಭೂಮಿಯನ್ನು ಸ್ವಾಧೀನಪಡಿಸಿ­ಕೊಳ್ಳುವ ಪ್ರಕ್ರಿಯೆ ನಡೆದಿದೆ. ಈಗಾಗಲೇ 4–1 ಅಧೀಸೂಚನೆ ಹೊರಡಿಸಲಾಗಿದ್ದು ಇಷ್ಟರಲ್ಲೇ 6–1 ಅಧಿಸೂಚನೆ ಹೊರಡಿಸಿ ರೈತರಿಗೆ ಪರಿಹಾರ ಒದಗಿಸಲಾಗುತ್ತದೆ ಎಂದು ತಿಳಿಸಿದರು.

ಕೃಷ್ಣಾ ಭಾಗ್ಯ ಜಲ ನಿಗಮದ ಕಾರ್ಯಪಾಲಕ ಎಂಜಿನಿಯರ್‌ ಮೃತ್ಯುಂ­ಜಯ, ಕೊಪ್ಪಳ ಏತ ನೀರಾವರಿಯಲ್ಲಿ ಕುಷ್ಟಗಿ ತಾಲ್ಲೂಕು ಮತ್ತು ಕನಕಗಿರಿ ಭಾಗದ ಕೆಲಸ ಕಾಮಗಾರಿಗಳನ್ನು ಈ ಉಪ ವಿಭಾಗ ನಿರ್ವಹಿಸಲಿದೆ. 1 ಎ.ಇ.ಇ, 4 ಜನ ಸಹಾಯಕ ಎಂಜಿನಿಯರ್‌ ಮತ್ತು ಇಬ್ಬರು ಕಿರಿಯ ಎಂಜಿನಿಯರ್‌ ಈ ಕಚೇರಿಯಲ್ಲಿರುತ್ತಾರೆ ಎಂದು ಹೇಳಿದರು.

ಮಾಜಿ ಶಾಸಕ ಕೆ.ಶರಣಪ್ಪ ಏತ ನೀರಾವರಿ ಕೆಲಸ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮತ್ತು ಕಾಲಮಿತಿ­-ಯೊಳಗೆ ಪೂರ್ಣ­ಗೊಳಿಸುವಂತೆ ಎಂಜಿನಿಯರ್‌ಗಳಿಗೆ ಸಲಹೆ ನೀಡಿದರು.

ಜಲನಿಗಮದ ಸಂಜೀವಕುಮಾರ್‌, ಬಂಡೆಪ್ಪನವರ್‌, ನಿಂಗಣ್ಣ. ಸಣ್ಣ ನೀರಾವರಿ ಇಲಾಖೆಯ ಎ.ಇ.ಇ ಪ್ರಕಾಶ್‌, ಪ್ರಮುಖರಾದ ಸಿ.ಎಂ.ಹಿರೇಮಠ, ಮಲ್ಲಿಕಾರ್ಜುನ ಮೇಟಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.