ADVERTISEMENT

ಕಪ್ಪೆ ಅರಭಟ್ಟನ ಶಾಸನ ಪತ್ತೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2011, 16:55 IST
Last Updated 3 ಫೆಬ್ರುವರಿ 2011, 16:55 IST


ಬೆಂಗಳೂರು: ಬಾದಾಮಿ ಸಮೀಪದ ಸಿಡಿಲಫಡಿಯಲ್ಲಿ ಕಪ್ಪೆ ಅರಭಟ್ಟನ ಶಾಸನವೊಂದು ಪತ್ತೆಯಾಗಿದೆ ಎಂದು ಇತಿಹಾಸ ತಜ್ಞ ಡಾ.ಎಚ್.ಎಸ್. ಗೋಪಾಲರಾವ್ ಅವರು ತಿಳಿಸಿದ್ದಾರೆ.

ಬಾದಾಮಿಯ ಡಾ.ಶಿಲಕಾಂತ ಪತ್ತಾರ್ ಅವರು ಸಿಡಿಲಫಡಿಯ ದಕ್ಷಿಣ ಬಂಡೆ ಗೋಡೆಯ ಮೇಲೆ ಎರಡು ಸಾಲಿನ ಶಾಸನವನ್ನು ಪತ್ತೆ ಮಾಡಿದ್ದರು. ಅಲ್ಲಿ ಕಪ್ಪೆ ಅರಭಟ್ಟನ ಶಾಸನದ ಒಂದು ಸಾಲು ಇದೆ ಎಂದು ಡಾ. ಪತ್ತಾರ್ ಅವರು ಪ್ರಕಟಿಸಿದ್ದರು.

ಅವರ ಮಾಹಿತಿಯನ್ನು ಆಧರಿಸಿ ಸಿಡಿಲಫಡಿಯಲ್ಲಿ ಸ್ಥಳ ಪರಿಶೀಲನೆ ಮಾಡಿದಾಗ ಅಲ್ಲಿ ಕಪ್ಪೆ ಅರಭಟ್ಟನ ಶಾಸನ ಪತ್ತೆಯಾಯಿತು ಎಂದು ಡಾ. ರಾವ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಡಿಲಫಡಿಯ ಉತ್ತರದ ಬಂಡೆ ಗೋಡೆಯ ಮೇಲಿರುವ, ಬಹುಭಾಗ ಕಲ್ಲು ಸವೆದಿರುವ, ಅಸ್ಪಷ್ಟವಾಗಿರುವ ಶಾಸನವೇ ಕಪ್ಪೆ ಅರಭಟ್ಟನ ಶಾಸನ ಎಂದು ಅವರು ತಿಳಿಸಿದ್ದಾರೆ.

ಕ್ರಿ.ಶ. ಏಳನೆಯ ಶತಮಾನದ ಮಧ್ಯಕಾಲಕ್ಕೆ ಸೇರುವ ಲಿಪಿ ಸ್ವರೂಪದ ಈ ಮೂರು ಸಾಲಿನ ಶಾಸನವು ತಟ್ಟುಕೋಟೆಯ ಕಪ್ಪೆ ಅರಭಟ್ಟನ ಶಾಸನದ ಆರು ಸಾಲುಗಳು. ಶಾಸನದ ಮಧ್ಯ ಭಾಗ ಹೆಚ್ಚು ಸವೆದಿದೆ. ಆದರೆ ಆರಂಭದ ಮತ್ತು ಅಂತ್ಯದ ಭಾಗಗಳ ಅಕ್ಷರಗಳನ್ನು ಗುರುತಿಸುವುದು ಕಷ್ಟವಲ್ಲ ಎಂದು ಹೇಳಿದ್ದಾರೆ.

ಈ ಶಾಸನವು ತಟ್ಟುಕೋಟೆಯ ಶಾಸನಕ್ಕಿಂತಲೂ ಸ್ವಲ್ಪ ಹಿಂದಿನದೆಂದು ಊಹಿಸಲಾಗಿದೆ, ಇದರ ಬಗ್ಗೆ ಇನ್ನೂ ಹೆಚ್ಚಿನ ಅಧ್ಯಯನ ಆಗಬೇಕಿದೆ ಎಂದು ಗೋಪಾಲರಾವ್ ಅವರು ಮಾಹಿತಿ ನೀಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.