ಸಾಗರ: ಮಗುವಿಗೆ ಕಲಿಕೆ ಎಂಬುದು ಸಹಜ ಪ್ರಕ್ರಿಯೆ ಆಗಿದ್ದು ಕಲಿಸುತ್ತೇವೆ ಎಂಬ ಮನೋಭಾವಕ್ಕಿಂತ ಕಲಿಯಲು ಅವರಿಗೆ ಸೂಕ್ತ ವಾತಾವರಣ ನಿರ್ಮಿಸುವುದು ಮುಖ್ಯ ಎಂದು ರಂಗಕರ್ಮಿ ದೇವೇಂದ್ರ ಬೆಳೆಯೂರು ಹೇಳಿದರು.ಸ್ಪಂದನ ರಂಗ ತಂಡ ರವೀಂದ್ರನಾಥ ಟ್ಯಾಗೋರರ ಸ್ಮರಣಾರ್ಥ ಏರ್ಪಡಿಸಿರುವ ಮಕ್ಕಳ ರಂಗ ತರಬೇತಿ ಶಿಬಿರ ‘ಚೈತ್ರಮೇಳ-2011’ನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ತಮ್ಮತನ ಕಳೆದುಕೊಳ್ಳದ ಹಾಗೆ ಅವರನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಕರ್ಮಿ ವಿಠ್ಠಲ ಭಂಡಾರಿ ಮಾತನಾಡಿ, ಸಾಂಪ್ರದಾಯಿಕ ಶಿಕ್ಷಣ ಪದ್ಧತಿ ಹೊಂದಿರುವ ಕೊರತೆಗಳನ್ನು ರಂಗ ತರಬೇತಿ ಶಿಬಿರಗಳು ನಿವಾರಿಸುವ ರೀತಿಯಲ್ಲಿ ಇರಬೇಕು ಎಂದು ಸಲಹೆ ಮಾಡಿದರು.ಶಿಕ್ಷಕರು ಹಾಗೂ ಪೋಷಕರ ಉಪದೇಶಗಳಿಂದ ಮಕ್ಕಳು ಸುಧಾರಿಸುವುದಿಲ್ಲ. ಉಪದೇಶಕ್ಕಿಂತ ನಡೆ-ನುಡಿ ಮೂಲಕವೆ ಮಕ್ಕಳಿಗೆ ಆದರ್ಶಪ್ರಾಯರಾಗಬೇಕು ಎಂದು ಹೇಳಿದರು.
ಮಗುವಿನ ಸ್ಪರ್ಶ ಅರಿತವರು ಮಾತ್ರ ಅದರ ಮನಸ್ಸನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ. ಪೋಷಕರಲ್ಲಿ ಹೊಸತನ ಇಲ್ಲದಿದ್ದಾಗ ಮಕ್ಕಳು ಮಾತ್ರ ಬೇರೆ ರೀತಿಯಲ್ಲಿ ಬೆಳೆಯಬೇಕು ಎಂದು ಭಾವಿಸುವುದು ತಪ್ಪಾಗುತ್ತದೆ. ಮಕ್ಕಳ ಶಿಬಿರಗಳು ವ್ಯವಹಾರಿಕ ಜಗತ್ತಿನ ವಿದ್ಯಮಾನಗಳಿಂದ ದೂರ ಉಳಿದು ಮಾನವೀಯ ಸಂಬಂಧದ ಸಮಾಜ ನಿರ್ಮಿಸುವ ಕನಸನ್ನು ಮಕ್ಕಳಲ್ಲಿ ಬಿತ್ತಬೇಕು ಎಂದು ಹೇಳಿದರು.
ನಗರಸಭಾ ಸದಸ್ಯ ಹಾಗೂ ರಂಗ ಕಲಾವಿದ ಸಂತೋಷ್ ಶೇಟ್ ಮುಖ್ಯ ಅತಿಥಿಯಾಗಿದ್ದರು. ಶಿಬಿರದ ಸಂಚಾಲಕಿ ಎಂ.ವಿ. ಪ್ರತಿಭಾ ಪ್ರಾಸ್ತಾವಿಕ ಮಾತನಾಡಿದರು. ಸಂಯೋಜಕಿ ವಿಜಯಶ್ರೀ ನಿರೂಪಿಸಿದರು. ಸ್ಪಂದನ ತಂಡದ ಮಕ್ಕಳು ‘ಪ್ರೀತಿಯ ಕಾಳು’ ನಾಟಕವನ್ನು ಪ್ರದರ್ಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.