ADVERTISEMENT

ಕಲುಷಿತ ಪಶು ಆಹಾರ ಸೇವನೆ: ಹಸುಗಳ ಸಾವು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2011, 19:30 IST
Last Updated 17 ಅಕ್ಟೋಬರ್ 2011, 19:30 IST

ಮದ್ದೂರು: ಕಲುಷಿತ ಪಶು ಆಹಾರ ಸೇವಿಸಿ ಮೂರು ಹಸುಗಳು ಮೃತಪಟ್ಟ ಘಟನೆ ಸಮೀಪದ ಚಾಮನಹಳ್ಳಿಯಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.  ಕೃಷಿಕ ಸಿ.ಸಿ.ಪುಟ್ಟರಾಜು ಅವರಿಗೆ ಈ ಹಸುಗಳು ಸೇರಿದ್ದಾಗಿವೆ.

ಭಾನುವಾರ ರಾತ್ರಿ ಪುಟ್ಟರಾಜು ಅವರು ಮನ್‌ಮುಲ್‌ನಿಂದ ವಿತರಿಸಲಾದ ಪಶು ಆಹಾರ (ಫೀಡ್ಸ್) ಹಾಗೂ ಅಂಗಡಿಯಿಂದ ಖರೀದಿಸಿದ ರವೆ  ಬೂಸಾವನ್ನು ಮಿಶ್ರಣಗೊಳಿಸಿ ಹಸುಗಳಿಗೆ ನೀಡಿದ್ದರು. ಅದನ್ನು ತಿಂದ ಬಳಿಕ ಹಸುಗಳು ಸತ್ತಿವೆ. ಆದ್ದರಿಂದ ಪಶು ಆಹಾರದ ಗುಣಮಟ್ಟ ಕುರಿತು ಸಂಶಯ ಉಂಟಾಗಿದೆ.

ಸೋಮವಾರ ಬೆಳಗಿನ ಜಾವ 4 ಗಂಟೆಯಲ್ಲೂ ಇದೇ ಮಾದರಿ ಮಿಶ್ರ ಆಹಾರವನ್ನು ಹಸುಗಳಿಗೆ ನೀಡಿದ್ದರು. ಬೆಳಿಗ್ಗೆ 5 ಗಂಟೆ ವೇಳೆಗೆ ಹಾಲು ಕರೆಯಲು ಪುಟ್ಟರಾಜು ತೆರಳಿದಾಗ ಮೂರು ಹಸುಗಳು ಒದ್ದಾಡಿ ಅಸು ನೀಗಿದವು ಎನ್ನಲಾಗಿದೆ.

ಸ್ಥಳಕ್ಕೆ ಭೇಟಿ ನೀಡಿದ ಮನ್‌ಮುಲ್ ಕ್ಷೇತ್ರಾಧಿಕಾರಿ ಕೃಷ್ಣಮೂರ್ತಿ ವಲಯ ಪಶು ವೈದ್ಯರೊಡನೆ ಹಸುಗಳ ಮರಣೋತ್ತರ ಪರೀಕ್ಷೆ ನಡೆಸಿದರು. ~ಪಶು ಆಹಾರ ಕಲುಷಿತಗೊಂಡಿದೆಯೇ? ಸಾವಿಗೆ ಕಾರಣಗಳು ಏನು ಎಂಬುದು ಪ್ರಯೋಗಾಲಯದ ಪರೀಕ್ಷೆಗೆ ಒಳಪಡಿಸಿ ನಂತರ ತಿಳಿಯಲಿದೆ~ ಎಂದು ತಿಳಿಸಿದರು.

ತಹಶೀಲ್ದಾರ್ ನಾಗರಾಜು ಮೃತ ಹಸುಗಳ ಮಹಜರು ನಡೆಸಿದರು. ಬದುಕಿಗೆ ಆಧಾರವಾಗಿದ್ದ ಹಸುಗಳನ್ನು ಕಳೆದುಕೊಂಡಿದ್ದ ಮಾಲೀಕ ಪುಟ್ಟರಾಜು ಹಾಗೂ ಕುಟುಂಬದವರ ಗೋಳು ಮೇರೆಮೀರಿತ್ತು. ಸ್ಥಳಕ್ಕೆ ಶಾಸಕಿ ಕಲ್ಪನಾ ಸಿದ್ದರಾಜು, ಸರ್ಕಾರದಿಂದ ಅಗತ್ಯ ಪರಿಹಾರ ಒದಗಿಸುವ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.