ADVERTISEMENT

ಕುವೆಂಪು ವಿವಿ: ಜೈವಿಕ ಇಂಧನ ಉದ್ಯಾನ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2011, 19:00 IST
Last Updated 19 ಏಪ್ರಿಲ್ 2011, 19:00 IST

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯ, ಜಟ್ರೋಪ ಆಧಾರಿತ ಜೈವಿಕ ಇಂಧನ ಉದ್ಯಾನ ನಿರ್ಮಿಸಲು ನಿರ್ಧರಿಸಿದೆ.ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಈ ಉದ್ಯಾನ ಸ್ಥಾಪನೆ ಸಂಬಂಧ ಮಂಗಳವಾರ ಕುವೆಂಪು ವಿಶ್ವವಿದ್ಯಾಲಯದಲ್ಲಿ ಕುಲಪತಿ ಪ್ರೊ.ಎಸ್.ಎ. ಬಾರಿ ಅವರು ಮೈಸೂರಿನ ಲ್ಯಾಬ್‌ಲ್ಯಾಂಡ್ ಬಯೋಟೆಕ್ ಪ್ರೈ ಲಿಮಿಟೆಡ್ ಜತೆ ಒಪ್ಪಂದ ಮಾಡಿಕೊಂಡರು.

ನಂತರ ಮಾತನಾಡಿದ ಪ್ರೊ.ಎಸ್.ಎ. ಬಾರಿ, ನಗರದ ಸಹ್ಯಾದ್ರಿ ಕಾಲೇಜಿನ ಆವರಣದ ಎರಡು ಎಕರೆ ಪ್ರದೇಶದಲ್ಲಿ ಈ ಉದ್ಯಾನ ಸ್ಥಾಪನೆಯಾಗಲಿದೆ. ಅಲ್ಲದೇ, ಜೈವಿಕ ಇಂಧನದಲ್ಲಿ ಸ್ನಾತಕೋತ್ತರ ಡಿಪ್ಲೊಮಾ ಆರಂಭಿಸಲಾಗುವುದು ಎಂದರು.ಈ ಪರಿಸರ ಸ್ನೇಹಿ ಇಂಧನದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು, ಇಂಧನ ಕುರಿತು ಸಂಶೋಧನೆ ನಡೆಸುವುದು ಹಾಗೂ ವಿಶ್ವವಿದ್ಯಾಲಯದ ಸ್ವಂತ ಬಳಕೆಗೆ ಈ ಇಂಧನವನ್ನೇ ಉಪಯೋಗಿಸುವುದು ಉದ್ಯಾನ ಸ್ಥಾಪನೆಯ ಉದ್ದೇಶ ಎಂದು ವಿವರಿಸಿದರು.

ವಿಶ್ವವಿದ್ಯಾಲಯ ಈಗಾಗಲೇ ಸೌರಶಕ್ತಿ ಬಳಕೆ ಮಾಡುವತ್ತ ಮಹತ್ವದ ಹೆಜ್ಜೆ ಇಟ್ಟಿದೆ. ಈಗ ’ಜೈವಿಕ ಇಂಧನ ಉದ್ಯಾನ’ ನಿರ್ಮಿಸುವ ಮೂಲಕ ಇನ್ನೊಂದು ದಾಖಲೆ ಮಾಡಿದೆ ಎಂದರು.
ಜಟ್ರೋಪ ಆಧಾರಿತ ಜೈವಿಕ ಇಂಧನ ಉದ್ಯಾನ ನಿರ್ಮಿಸಿ, ಇಲ್ಲಿ ಉತ್ಪಾದನೆಯಾಗುವ ಇಂಧನವನ್ನು ವಿಶ್ವವಿದ್ಯಾಲಯದ ವಾಹನಗಳಿಗೆ ಬಳಸುವ ಚಿಂತನೆ ಮಾಡಿರುವ ದೇಶದ ಪ್ರಪ್ರಥಮ ವಿಶ್ವವಿದ್ಯಾಲಯ ಕುವೆಂಪು ವಿಶ್ವವಿದ್ಯಾಲಯ ಎಂದು ಕಂಪೆನಿ ಅಧ್ಯಕ್ಷ ಡಾ.ಸುಧೀರ್‌ಕುಮಾರ್ ಶೆಟ್ಟಿ ತಿಳಿಸಿದರು.ಕಂಪೆನಿಯ ವ್ಯವಸ್ಥಾಪಕ ನಿರ್ದೇಶಕಿ ಡಾ.ಗೀತಾ ಸಿಂಗ್, ಕುವೆಂಪು ವಿವಿ ಕುಲಸಚಿವರಾದ ಪ್ರೊ.ಎಂ. ಕೃಷ್ಣಪ್ಪ, ಪ್ರೊ.ಎ. ರಾಮೇಗೌಡ, ಡಾ.ವೆಂಕಟೇಶ್ವರಲು, ಡಾ.ಎಚ್.ಎನ್. ರಮೇಶ್‌ಬಾಬು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.