ADVERTISEMENT

ಕುಸ್ತಿ: ಆನಂದ್‌ಗೆ ಶ್ರೀಸೇವಾಲಾಲ್ ಕಂಠೀರವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 6:30 IST
Last Updated 16 ಫೆಬ್ರುವರಿ 2011, 6:30 IST

ನ್ಯಾಮತಿ: ಸಮೀಪದ ಸೂರಗೊಂಡನಕೊಪ್ಪದಲ್ಲಿ ಸೇವಾಲಾಲ್ ಮತ್ತು ಮರಿಯಮ್ಮದೇವಿ ಜಾತ್ರಾ ನಿಮಿತ್ತ ನಡೆದ ಎರಡು ದಿನದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಅಂತಿಮವಾಗಿ ಧಾರವಾಡದ ‘ಮಿಲ್ಟ್ರಿ’ ಆನಂದ್‌ಗೆ ‘ಸೇವಾಲಾಲ್ ಕಂಠೀರವ’ ಪ್ರಶಸ್ತಿ ಲಭಿಸಿತು.ಮಂಗಳವಾರ ನಡೆದ ಅಂತಿಮ ಸುತ್ತಿನ ಕುಸ್ತಿಯಲ್ಲಿ ಮಹಾರಾಷ್ಟ್ರದ ಮಂಜು ಮತ್ತು ಧಾರವಾಡದ ’ಮಿಲ್ಟ್ರಿ’ ಆನಂದ ಅವರ ನಡುವೆ ಸುಮಾರು 45 ನಿಮಿಷದ ಸೆಣಸಾಟ ಅಭಿಮಾನಿಗಳನ್ನು ಮೈನೆವಿರೆಳಿಸಿತು. ಕೊನೆಯಲ್ಲಿ ಪಾಯಿಂಟ್ ಆಧಾರದ ಮೇಲೆ ಮಿಲ್ಟ್ರಿ ಆನಂದ್ ವಿಜೇತ ಎಂದು ತೀರ್ಪು ನೀಡಲಾಯಿತು. ವಿಜೇತರಿಗೆ ಬೆಳ್ಳಿಗದೆ ಮತ್ತು ನಗದು ಬಹುಮಾನ ನೀಡಿ ಸನ್ಮಾನಿಸಲಾಯಿತು.

ಲೋಕೇಶ್ ಎಲ್. ಶೆಟ್ಟಿ ದಾವಣಗೆರೆ (ಶ್ರೀ ಸೇವಾಲಾಲ್ ಕುಮಾರ್ ರಾಜ್ಯ ಪ್ರಶಸ್ತಿ), ರಮೇಶ ಹೊಳೆಹೊನ್ನೂರು (ಸೇವಾಲಾಲ್ ಕಿಶೋರ್ ಪ್ರಶಸ್ತಿ), ಕೂಡ್ಲಿ ಶಿವಕುಮಾರ್ (ಸೇವಾಲಾಲ್ ಶ್ರೀಪ್ರಶಸ್ತಿ), ಆನಂದ ದಾವಣಗೆರೆ (ಸೇವಾಲಾಲ್ ಅಭಿಮನ್ಯು), ದೆಹಲಿಯ ಪ್ರವೀಣ (ಸೇವಾಲಾಲ್ ಅರ್ಜುನ ಪ್ರಶಸ್ತಿ).ಮಹಿಳಾ ವಿಭಾಗದಲ್ಲಿ ಬೆಳಗಾವಿಯ ಆರತಿ ಶ್ರೀ ಮರಿಯಮ್ಮ ಮಹಿಳಾ ಕೇಸರಿ ಪ್ರಶಸ್ತಿಯನ್ನು ಪಡೆದರು.ಕುಸ್ತಿ ಪಂದ್ಯಾವಳಿಯಲ್ಲಿ ವಿವಿಧ ರಾಜ್ಯಗಳಿಂದ ಪೈಲ್ವಾನರು ಆಗಮಿಸಿದ್ದರು. 

ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯ ವ್ಯವಸ್ಥಾಪಕರಾಗಿ ಕರ್ನಾಟಕ ಕಂಠೀರವ ಪ್ರಶಸ್ತಿ ಪೈಲ್ವಾನ್ ಸುರೇಶನಾಯ್ಕ, ಆಯನೂರು ಶಿವನಾಯ್ಕ, ಡಾ.ಬೂದ್ಯನಾಯ್ಕ, ಕುಂಚೇನಹಳ್ಳಿ ಶಿವನಾಯ್ಕ, ಹಾಲಾನಾಯ್ಕ, ಜಿ. ಶಿವರಾಮನಾಯ್ಕ ಕಾರ್ಯ ನಿರ್ವಹಿಸಿದರು.

ಕುಸ್ತಿ ವೀಕ್ಷಿಸಿದ ಗಣ್ಯರು
ಸೂರಗೊಂಡನಕೊಪ್ಪದಲ್ಲಿ ನಡೆದ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯನ್ನು ಅಬಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ, ಬಂಜಾರ್ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ. ಬಸವರಾಜನಾಯ್ಕ, ಮಾಜಿ ಶಾಸಕ ಮಹಿಮ ಪಟೇಲ್, ಸರ್ದಾರ್ ಸ್ವಾಮೀಜಿ, ಪಾಂಡೊಮಟ್ಟಿ ಶ್ರೀ, ಹಗರಿಬೊಮ್ಮನಹಳ್ಳಿ ಶಾಸಕ ನೇಮಿರಾಜನಾಯ್ಕ ಕುಸ್ತಿಯನ್ನು ಕುತೂಹಲದಿಂದ ವೀಕ್ಷಿಸಿ, ಮುಂದಿನ ದಿನಗಳಲ್ಲಿ ವಿಶೇಷ ಪ್ರೋತ್ಸಾಹ ನೀಡುವುದಾಗಿ ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.