ADVERTISEMENT

ಕೂಲಿ ಪಾವತಿಗೆ ಆಗ್ರಹಿಸಿ ಶಾಸಕರಿಗೆ ಮುತ್ತಿಗೆ

​ಪ್ರಜಾವಾಣಿ ವಾರ್ತೆ
Published 14 ಜೂನ್ 2011, 19:30 IST
Last Updated 14 ಜೂನ್ 2011, 19:30 IST

ಹುಮನಾಬಾದ್: ಉದ್ಯೋಗ ಖಾತರಿ ಕೂಲಿಹಣ ಪಾವತಿಗೆ ಆಗ್ರಹಿಸಿ, ಹತ್ತಿರದ ಮಾಣಿಕನಗರದಲ್ಲಿನ ನೂರಾರು ಮಹಿಳಾ ಕೂಲಿಕಾರರು ಮಂಗಳವಾರ ಶಾಸಕ ರಾಜಶೇಖರ ಪಾಟೀಲರಿಗೆ ಮುತ್ತಿಗೆ ಹಾಕಿದರು.

ಕೆಲಸ ಮಾಡಿ ಎರಡು ವರ್ಷ ಗತಿಸಿದರೂ ಗ್ರಾಮ ಪಂಚಾಯಿತಿ ಅಧ್ಯಕ್ಷ, ಸದಸ್ಯರು ಮತ್ತು ಅಭಿವೃದ್ದಿ ಅಧಿಕಾರಿ ಪರಸ್ಪರ ಒಬ್ಬರ ಮೇಲೆ ಮತ್ತೊಬ್ಬರು ಆರೋಪ, ಪ್ರತ್ಯಾರೋಪ ಮಾಡುವುದರ ಮೂಲಕ ಹಣ ಪಾವತಿ ವಿಷಯದಲ್ಲಿ ಚೆಲ್ಲಾಟ ಆಡುತ್ತಿದ್ದಾರೆ ಎಂದು ಕೂಲಿಕಾರ ಮಹಿಳೆ ಈರಮ್ಮ, ಪ್ರೇಮಾಬಾಯಿ ಗೌಳಿ ಶಾಸಕರಲ್ಲಿ ನೋವು ತೋಡಿಕೊಂಡರು. ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಣವಂತರಿದ್ದಾರೆ. ಇನ್ನೂ ಅಭಿವೃದ್ದಿ ಅಧಿಕಾರಿ ಹಾಗೂ ಸಿಬ್ಬಂದಿಗೆ ತಪ್ಪದೆ ಸಂಬಳ ಬರುತ್ತದೆ.

ಅವರಿಗೆ ನಮ್ಮ ನೋವು ಹೇಗೆ ಗೊತ್ತಾಗುತ್ತದೆ? ಎಂದು ಮುತ್ತಿಗೆ ನಿರತ ಪ್ರೇಮಾ ಗೌಳಿ, ಕಲ್ಲಮ್ಮ, ಶೋಭಾವತಿ, ಶಾಣವ್ವ, ಸಂಗೀತಾ, ಶಾಮಲಾ, ಶಕುನು ಮೊದಲಾದವರು ಆಕ್ರೋಶ ವ್ಯಕ್ತಪಡಿಸಿದರು.

ಸಮಸ್ಯೆ ಆಲಿಸಿದ ಶಾಸಕ ಪಾಟೀಲ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ಅಭಿವೃದ್ದಿ ಅಧಿಕಾರಿ ಭಾಗ್ಯಜ್ಯೋತಿ ಧೋರಣೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ದೂರವಾಣಿ ಮೂಲಕ ತಾಲ್ಲೂಕು ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಶಿವಾಜಿ ಡೋಣಿ ಅವರನ್ನು ಸಂಪರ್ಕಿಸಿ, ಹಣಪಾವತಿಗೆ ಇರುವ ತೊಡಕು ಸರಿಪಡಿಸಿ, ಸಮಸ್ಯೆ ಬಗೆಹರಿಸುವಂತೆ ಆದೇಶಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.