ಬಾಗಲಕೋಟೆ: ಸೇವಾ ನಿವೃತ್ತಿ ನಂತರ ಕೆವಿಜಿ ಬ್ಯಾಂಕ್ ನೌಕರರಿಗೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿ ಇಲ್ಲಿನ ಕೆವಿಜಿ ಬ್ಯಾಂಕಿನ ನೌಕರರು ಸೋಮವಾರ ಪ್ರತಿಭಟನೆ ನಡೆಸಿದರು.
ನವನಗರದ ಕೆವಿಜಿ ಬ್ಯಾಂಕ್ ಪ್ರಧಾನ ಕಚೇರಿ ಎದುರು ಜಮಾಯಿಸಿದ ನಿವೃತ್ತ ಬ್ಯಾಂಕ್ ನೌಕರರು ಹಾಗೂ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ನೌಕರರು, ಸರ್ಕಾರದ ವಿರುದ್ಧ
ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಬ್ಯಾಂಕ್ ನಲ್ಲಿ ಕೆಲಸ ನಿರ್ವಹಿಸಿ ನಿವೃತ್ತಿಯಾದ ನೌಕರರಿಗೆ ಪಿಂಚಣಿ ಹಣ ಸಿಗದೇ ತೊಂದರೆ ಅನುಭವಿಸುತ್ತಿದ್ದಾರೆ. ಸಾಕಷ್ಟು ಜನ ನೌಕರರು ಬೇರೆ ಬೇರೆ ಕೆಲಸಕ್ಕೆ ಹೋಗುತ್ತಿದ್ದಾರೆ. ಆದ್ದರಿಂದ ಬ್ಯಾಂಕ್ ನೌಕರರ ಹಿತದೃಷ್ಟಿಯಿಂದ ಸೇವಾ ನಿವೃತ್ತಿ ನಂತರ ನೌಕರರಿಗೆ ಪಿಂಚಣಿ ನೀಡಬೇಕು ಎಂದು ಆಗ್ರಹಿಸಿದರು.
ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳ ಖಾಸಗೀಕರಣ ಮಾಡಬಾರದು. ರಾಷ್ಟ್ರೀಕೃತ ಬ್ಯಾಂಕುಗಳು ಮತ್ತು ಗ್ರಾಮೀಣ ಬ್ಯಾಂಕುಗಳ ನೌಕರರ ವೇತನ, ಸೇವಾ ಹಾಗೂ ಬಡ್ತಿ ನಿಯಮಾವಳಿಯಲ್ಲಿ ಸಮಾನತೆ ಜಾರಿಗೊಳಿಸಬೇಕು. ಅನುಕಂಪ ಆಧಾರಿತ ನೇಮಕಾತಿ ಮಾಡಿಕೊಳ್ಳಬೇಕು. ದಿನಗೂಲಿ ನೌಕರರನ್ನು ಖಾಯಂಗೊಳಿಸಬೇಕು ಎಂದು ಒತ್ತಾಯಿಸಿದರು.
ನೌಕರರು ಕೆಲಸಕ್ಕೆ ಹಾಜರಾಗದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಗ್ರಾಹಕರು ಪರದಾಡು
ವಂತಾಯಿತು. ಪ್ರತಿಭಟನೆಯಲ್ಲಿ ಪ್ರವೀಣ ಅರಳಿಮಟ್ಟಿ, ಶರಣು ಆಂಟಿನ್, ಸಿ.ಈ.ಅರಳಿಮಟ್ಟಿ, ವಿರೇಶ ಬಡ್ಡಿ, ಎಸ್.ಸಿ.ಬಿರಾದಾರ, ಎನ್.ಎಸ್.ಪಾಟೀಲ ಸೇರಿದಂತೆ ನಿವೃತ್ತ ಹಾಗೂ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್ ನೌಕರರು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.