ಗೌರಿಬಿದನೂರು: ಅಂತರ ರಾಜ್ಯ ರಸ್ತೆ ಎಂದು ಹೆಸರು ಪಡೆದಿರುವ ಬೆಂಗಳೂರಿನಿಂದ ಗೌರಿಬಿದನೂರು ಮಾರ್ಗದ ಆಂಧ್ರಪ್ರದೇಶದ ಹಿಂದೂಪುರಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಳಾಗಿದೆ. ತಾಲ್ಲೂಕಿನ ಕಲ್ಲೂಡಿ ಸಮೀಪ ಸಂಪೂರ್ಣವಾಗಿ ಹದಗೆಟ್ಟಿದ್ದು, ವಾಹನಗಳು ಸಂಚರಿಸಲು ತೊಂದರೆಯಾಗಿದೆ.
ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಈ ಸ್ಥಳದಲ್ಲಿ ಡಾಂಬರು ಕಂಡು ಸುಮಾರು ವರ್ಷಗಳೇ ಕಳೆದಿದ್ದು, ಸಂಬಂಧಪಟ್ಟವರು ಗಮನಹರಿಸಿಲ್ಲ. ಮಳೆ ಬಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಮೊಣಕಾಲುದ್ದ ಗುಂಡಿಗಳಾಗಿ ವಾಹನ ಸವಾರರು ವಾಹನ ಚಲಾಯಿಸಲು ಹರಸಹಾಸ ಪಡಬೇಕಾಗಿದೆ.
ರಸ್ತೆ ಸಂಪೂರ್ಣ ಕೆಸರುಗದ್ದೆಯಾಗಿ ಪರಿಣಮಿಸಿದೆ. ರಾತ್ರಿ ಸಮಯದಲ್ಲಿ ಹಲವು ವಾಹನ ಸವಾರರು ಬಿದ್ದು ಗಾಯಗೊಂಡಿದ್ದಾರೆ. ಈ ರಸ್ತೆಯಲ್ಲಿ ಭಾರಿ ಬಾರ ಹೊತ್ತ ಕಬ್ಬಿಣ ಸಾಗಿಸುವ ಲಾರಿಗಳು ಸದಾ ಸಂಚರಿಸುವುದರಿಂದ ರಸ್ತೆ ಬೇಗ ಹಾಳಾಗುತ್ತದೆ ಎನ್ನುತ್ತಾರೆ ಸ್ಥಳಿಯ ಜನರು. ರಸ್ತೆ ಡಾಂಬರೀಕರಣ ಮಾಡಿಸಿ ವಾಹನಗಳು ಮತ್ತು ಜನರು ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಕಲ್ಲೂಡಿ ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.