ADVERTISEMENT

ಕೊರೆಯುವ ಚಳಿಯಲ್ಲಿ ರೋಗಿಗಳ ಪರದಾಟ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2017, 6:48 IST
Last Updated 24 ಡಿಸೆಂಬರ್ 2017, 6:48 IST

ತಾವರಗೇರಾ: ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬಾಣಂತಿ ಮತ್ತು ಎರಡು ದಿನದ ಶಿಶುವಿಗೆ ಹಾಸಿಗೆ, ಹೊದಿಕೆ ನೀಡದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಸಮೀಪದ ಸಂಗನಾಳ ಗ್ರಾಮದ ಶರಣಮ್ಮ ಎಂಬ ಗರ್ಭಿಣಿಯನ್ನು ಮೂರು ದಿನಗಳ ಹಿಂದೆ ಹೆರಿಗೆಗಾಗಿ ಇಲ್ಲಿನ ಸಮುದಾಯ ಆಸ್ಪತ್ರೆಗೆ ಕರೆತರಲಾಗಿತ್ತು. ಆಸ್ಪತ್ರೆಯಲ್ಲಿ ಹೆರಿಗೆ ಆಗಿದ್ದು. ನಂತರ ಆಸ್ಪತ್ರೆಯಲ್ಲಿ ಉಳಿಯುವಂತೆ ವೈದ್ಯರು ಹೇಳಿದಾಗ ಆ ಬಾಣಂತಿ ಮತ್ತು ಮನೆಯ ಸಂಬಂಧಿಕರು ರಾತ್ರಿ ಅಲ್ಲಿಯೇ ತಂಗಿದ್ದರು. ಆದರೆ ಆಸ್ಪತ್ರೆ ಸಿಬ್ಬಂದಿ ಮಾತ್ರ ಆ ಶಿಶು ಮತ್ತು ಬಾಣಂತಿಗೆ ಹಾಸಿಗೆ, ಹೊದಿಕೆ ನೀಡದಿದ್ದರಿಂದ ಕೊರೆಯುವ ಚಳಿಯಲ್ಲಿ ನಡುಗುತ್ತ ತಾಯಿ ಹಾಗೂ ಮಗು ರಾತ್ರಿ ಕಳೆದಿದ್ದಾರೆ.

‘ಆಸ್ಪತ್ರೆಯಲ್ಲಿ ಎರಡು ದಿನದ ಶಿಶು ಮತ್ತು ಬಾಣಂತಿಗೆ ಸಹ ಕರುಣೆ ತೋರದೆ ನಿರ್ಲಕ್ಷ್ಯ ವಹಿಸಿದ್ದಾರೆ. ರೋಗಿಗಳ ಸಂಬಂಧಿಕರೇ ಹಾಸಿಗೆ, ಹೊದಿಕೆ ತರಬೇಕು. ಆಸ್ಪತ್ರೆಯಲ್ಲಿ ಬೆಡ್‌ಶೀಟ್‌ ಇಲ್ಲ ಎಂದು ಈ ಬಗ್ಗೆ ವಾರ್ಡ್‌ ಸಿಬ್ಬಂದಿ ಉತ್ತರಿಸಿದರು’ ಎಂದು ಬಾಣಂತಿಯ ಸಂಬಂಧಿ ಹನಮೇಶ ಅಳಲು ತೋಡಿಕೊಂಡರು.

ಆಸ್ಪತ್ರೆಯಲ್ಲಿ ಬೆಡ್‌ಶೀಟ್ ಸಮಸ್ಯೆ ತಿಳಿಯುತ್ತಿದಂತೆ ವೈದ್ಯಾಧಿಕಾರಿ ಪ್ರಶಾಂತ ತಾಳಿಕೋಟಿ, ವೈದ್ಯೆ ಡಾ. ಕಾವೇರಿ ಶನಿವಾರ ಮುಂಜಾನೆ ವಾರ್ಡ್‌ಗಳಿಗೆ ದಿಢೀರ್‌ ಭೇಟಿ ನೀಡಿ, ಬಾಣಂತಿ, ಶಿಶುವಿಗೆ ತುರ್ತು ವ್ಯವಸ್ಥೆ ಮಾಡುವಂತೆ ಸಿಬ್ಬಂದಿಗೆ ಸೂಚನೆ ನೀಡಿದರು.

ADVERTISEMENT

‘ಕಳೆದ ಎರಡು ದಿನಗಳಿಂದ ಆಸ್ಪತ್ರೆಗೆ ಬರುವ ರೋಗಿಗಳಿಗೆ ಹೊದಿಕೆ, ಹಾಸಿಗೆ ನೀಡುತ್ತಿಲ್ಲ. ಮೂಲ ಸೌಲಭ್ಯಗಳ ಕೊರತೆ ಇದೆ. ಆಸ್ಪತ್ರೆಯ ಶೌಚಾಲಯಗಳು ದುರಸ್ತಿ ಇಲ್ಲದೆ ಬಿಗ ಹಾಕಲಾಗಿದೆ. ಕೇಂದ್ರದಲ್ಲಿ ಸುಸಜ್ಜಿತ ವ್ಯವಸ್ಥೆ ಇದ್ದರೂ ಅಲ್ಲಲ್ಲಿ ಸ್ವಚ್ಛತೆ ಇಲ್ಲದೆ ಸೊಳ್ಳೆಗಳು ಹೆಚ್ಚಾಗಿವೆ. ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರಿದ್ದು, ಸಿಬ್ಬಂದಿಗಳ ಕರ್ತವ್ಯ ಪರಿಶೀಲನೆ ವಿಳಂಬವೆ ಇದಕ್ಕೆ ಕಾರಣವಾಗಿದೆ’ ಎಂದು ಕಿಲ್ಲಾರಹಟ್ಟಿ ಸಮೀಪದ ಬೊಮ್ಮನಾಳ ಗ್ರಾಮದ ನಿವಾಸಿ ಹೇಳಿದರು.

* * 

‘ಎರಡು ದಿನದ ಹಿಂದೆ ಬೆಡ್‌ಶೀಟ್‌ಗಳನ್ನು ಸ್ವಚ್ಛಗೊಳಿಸಲು ಕೊಡಲಾಗಿದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಜೊತೆಗೆ ರೋಗಿಗಳಿಗೆ ಸೂಕ್ತ ಸೌಲಭ್ಯ ನೀಡಲಾಗುವುದು.
ಡಾ. ಕಾವೇರಿ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.