ADVERTISEMENT

`ಕೋಳೆಗೇರಿ ಅಭಿವೃದ್ಧಿಯಲ್ಲಿ ಬಿಜೆಪಿ ಸರ್ಕಾರ ವಿಫಲ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 7:49 IST
Last Updated 17 ಡಿಸೆಂಬರ್ 2012, 7:49 IST

ಬೆಳಗಾವಿ: `ರಾಜ್ಯದ ಕೊಳೆಗೇರಿ ಜನರಿಗೆ ವಸತಿ, ನಿವೇಶನ, ಪಡಿತರ ಚೀಟಿ, ಹಕ್ಕು ಪತ್ರಗಳು ಸೇರಿದಂತೆ ಹಲವು ಸೌಕರ್ಯಗಳನ್ನು ಒದಗಿಸುವಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಾಗೂ ರಾಜ್ಯದಲ್ಲಿರುವ ಬಿಜೆಪಿ ಸರ್ಕಾರ ವಿಫಲಗೊಂಡಿವೆ' ಎಂದು ಸ್ಲಂ ಜನಾಂದೋಲನ ಕರ್ನಾಟಕ ಘಟಕದ ರಾಜ್ಯ ಸಂಚಾಲಕ ನರಸಿಂಹ ಮೂರ್ತಿ ಆರೋಪಿಸಿದರು.

ಸ್ಲಂ ಜನಾಂದೋಲನ ಕರ್ನಾಟಕ ಸಂಘದ ವತಿಯಿಂದ ಕನ್ನಡ ಸಾಹಿತ್ಯ ಭವನದಲ್ಲಿ ಈಚೆಗೆ ಹಮ್ಮಿಕೊಳ್ಳಲಾಗಿದ್ದ ಸ್ಲಂ ನಿವಾಸಿಗಳ ಜನಶಕ್ತಿ ರಾಜ್ಯ ಜಾಥಾ ಹಾಗೂ ಸಮಾವೇಶದಲ್ಲಿ ಅವರು ಮಾತನಾಡಿದರು. ಬೆಳಗಾವಿಯಲ್ಲಿ ನಡೆದ  ಅಧಿವೇಶನದಲ್ಲಿ ಆಡಳಿತಾರೂಢ ಬಿಜೆಪಿ ಅಥವಾ ಪ್ರತಿಪಕ್ಷಗಳಾಗಲಿ ಕೊಳಗೇರಿ ಜನಾಂಗದ ಸಮಗ್ರ ಅಭಿವೃದ್ಧಿ ಕುರಿತು ಧ್ವನಿ ಎತ್ತುತ್ತಿಲ್ಲ.

ರಾಜ್ಯದ ಜನಸಂಖ್ಯೆಯಲ್ಲಿ 1 ಕೋಟಿಗೂ ಹೆಚ್ಚು ಜನಸಂಖ್ಯಾ ಬಲ ಹೊಂದಿರುವ ಕೊಳಗೇರಿ ನಿವಾಸಿಗಳಾದ ನಾವು  ತ್ರಿಶಂಕು ಸ್ಥಿತಿಯಲ್ಲಿದ್ದೇವೆ. ಚುನಾವಣೆ ಸಂದರ್ಭದಲ್ಲಿ ನಮ್ಮನ್ನು ನಾಗರಿಕರನ್ನಾಗಿ ನೋಡುವ, ಇನ್ನುಳಿದ ದಿನಗಳಲ್ಲಿ ಅನಾಗರಿಕರಂತೆ ಕಡೆಗಣಿಸುವ ಜನಪ್ರತಿನಿಧಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.

ಕೊಳಗೇರಿ ಜನರ ಹಕ್ಕೋತ್ತಾಯಗಳ ಕುರಿತು ಮನದಟ್ಟು ಮಾಡಿ ಕೊಡವುದೇ ಈ ಜಾಥಾದ ಮೂಲ ಉದ್ದೇಶವಾಗಿದೆ. ಸಂಘದ ವತಿಯಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿ. 21ರವರೆಗೆ ರ‌್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅವರು ಹೇಳಿದರು.

ಅಭಿವೃದ್ಧಿ ಹೆಸರಿನಲ್ಲಿ ಸರ್ಕಾರವು ಕೈಗಾರಿಕೆ, ಬಹುರಾಷ್ಟ್ರೀಯ ಹಾಗೂ ರಾಷ್ಟ್ರೀಯ ಕಂಪೆನಿಗಳಿಗೆ ಭೂಮಿ ನೀಡುವ ಹಾಗೂ ಕಬಳಿಸುವುದನ್ನು ಬಿಟ್ಟು ಪ್ರಸ್ತುತ ಕೊಳಗೇರಿ ಜನರು ವಾಸಿಸುತ್ತಿರುವ ಮನೆಗಳನ್ನು ಅವರಿಗೆ ಬಿಟ್ಟು ಕೊಡಬೇಕು ಎಂದು ಅವರು ಆಗ್ರಹಿಸಿದರು.

ವಕೀಲ ಮಹೇಂದ್ರ ಮಹಾಂಕಾಳಿ ಮಾತನಾಡಿ, ಡಾ.ಬಿ.ಆರ್. ಅಂಬೇಡ್ಕರ್ ಸಮಾನತೆಯ ಆಧಾರದ ಮೇಲೆ ಸಂವಿ ಧಾನ ನಿರ್ಮಿಸಿದ್ದರು. ಆದರೆ ದಲಿತರು ಸಮಾನತೆಯಿಂದ ವಂಚಿತರಾಗುತ್ತಿದ್ದಾರೆ' ಎಂದು ವಿಷಾದಿಸಿದರು. ಯಾವುದೇ ಮಹಾತ್ಮರಿಂದ ಅಥವಾ ಪಕ್ಷದಿಂದ ನಮ್ಮನ್ನು ಸಂಪೂರ್ಣವಾಗಿ ಉದ್ದಾರ ಮಾಡಲು ಸಾಧ್ಯವಿಲ್ಲ ಎಂಬ ಮಾತನ್ನು ಅಂಬೇಡ್ಕರರು ಹೇಳಿದ್ದರು.

ಹೀಗಾಗಿ ನಮ್ಮ ಹಕ್ಕುಗಳನ್ನು ಪಡೆ ಯಲು ನಾವೇ ಹೋರಾಡಬೇಕು ಎಂದು ಅವರು ತಿಳಿಸಿದರು. ಗೋಪಿ ಬಳ್ಳಾರಿ, ಅನಿಲ ತಹಶೀಲ್ದಾರ, ಚಂದ್ರಮ್ಮ, ಲಕ್ಷ್ಮಣ ಯಳವರ ಹಾಜರಿದ್ದರು. ಡಿಂಗ್ರಿ ನರಸಪ್ಪ ಹಾಗೂ ಸಂಗಡಿಗರು ಪ್ರಾರ್ಥಿಸಿ ದರು. ಜಯಶ್ರೀ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT