ADVERTISEMENT

ಗಡಿಯಲ್ಲಿ ತೀವ್ರಗೊಂಡ ತಪಾಸಣೆ ಕಾರ್ಯ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2011, 19:30 IST
Last Updated 21 ಸೆಪ್ಟೆಂಬರ್ 2011, 19:30 IST

ಬಳ್ಳಾರಿ: ಬಳ್ಳಾರಿಯಿಂದ ಲಾರಿ ಮೂಲಕ ಸಾಗಿಸುತ್ತಿದ್ದ 4.95 ಕೋಟಿ ರೂಪಾಯಿಯನ್ನು ಆಂಧ್ರಪ್ರದೇಶದ ಗುಂತಕಲ್‌ನಲ್ಲಿ ಪೊಲೀಸರು ಇತ್ತೀಚೆಗೆ  ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸರು ಆಂಧ್ರದತ್ತ ತೆರಳುವ ಪ್ರತಿಯೊಂದು ವಾಹನಗಳ ತಪಾಸಣೆ ಆರಂಭಿಸಿದ್ದಾರೆ.

ಸಿಬಿಐನಿಂದ ಬಂಧಿಸಿರುವಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಹಾಗೂ ಓಎಂಸಿ ವ್ಯವಸ್ಥಾಪಕ ನಿರ್ದೇಶಕ ಬಿ.ವಿ. ಶ್ರೀನಿವಾಸರೆಡ್ಡಿ ಅವರ ಆಪ್ತರು ಎನ್ನಲಾದ ಕೆಲವರು ಲಾರಿಯಲ್ಲಿ ಹಣ ಸಾಗಿಸುತ್ತಿದ್ದ ಸಂದರ್ಭದಲ್ಲಿ ಸಿಕ್ಕಿಬಿದ್ದ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಬಳ್ಳಾರಿ- ಗುಂತಕಲ್ ರಸ್ತೆಯಲ್ಲಿರುವ ಹಗರಿ ಬಳಿಯ ತನಿಖಾ ಠಾಣೆಯ ಬಳಿ ಆಂಧ್ರದತ್ತ ತೆರಳುವ ಪ್ರತಿ ವಾಹನವನ್ನು ಸಂಪೂರ್ಣ ತಪಾಸಣೆಗೆ ಒಳಪಡಿಸಿ, ವಾಹನ ಸಂಖ್ಯೆ, ಎಲ್ಲಿಂದ ಎಲ್ಲಿಗೆ ಹೋಗುತ್ತಿದೆ, ವಾಹನದ ಚಾಲಕ, ಮಾಲೀಕ ಯಾರು ಎಂಬ ವಿವರಗಳನ್ನು ದಾಖಲಿಸಿಕೊಳ್ಳಲಾಗುತ್ತಿದೆ ಎಂದು ಪರಮದೇವನಹಳ್ಳಿ ಠಾಣೆಯ ಪಿಎಸ್‌ಐ ಫಿರೋಜ್ ಅವರು `ಪ್ರಜಾವಾಣಿ~ಗೆ ಬುಧವಾರ ತಿಳಿಸಿದರು.

ಹಣ ಸಾಗಿಸುವಾಗ ಸಿಕ್ಕಿಬಿದ್ದವರ ವಿಚಾರಣೆಯನ್ನು ಸಿಬಿಐ ಸಿಬ್ಬಂದಿ ನಡೆಸಿ ಅಗತ್ಯ ಮಾಹಿತಿಯನ್ನು ಸಂಗ್ರಹಿಸಿದ್ದಾರೆ.  ಈ ಸಂದರ್ಭದಲ್ಲಿ ವಶಪಡಿಸಿಕೊಂಡ ಹಣ ಜನಾರ್ದನ ರೆಡ್ಡಿ ಅವರಿಗೇ ಸೇರಿದ್ದು ಎಂದೂ ಆರೋಪಿಗಳು ತಿಳಿಸಿದ್ದಾರೆ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.