ADVERTISEMENT

ಗರ್ಭಗುಡಿಯಲ್ಲೇ ರೌಡಿ ಹತ್ಯೆ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST

ಶಿವಮೊಗ್ಗ: ರೌಡಿ ಮೆಂಟಲ್ ಸೀನನನ್ನು ಮುಸುಕುಧಾರಿಗಳ ತಂಡವೊಂದು ನಗರದ ಹೊಸಮನೆ ಬಡಾವಣೆಯ 3ನೇ ತಿರುವಿನ ದೊಡ್ಡಮ್ಮ ಜಲದುರ್ಗಮ್ಮ ದೇವಾಲಯದ ಗರ್ಭಗುಡಿಯಲ್ಲೇ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿ, ಪರಾರಿಯಾದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

26 ವರ್ಷದ ಮೆಂಟಲ್ ಸೀನ, ನಗರದ ಸವಾರ್‌ಲೈನ್ ರಸ್ತೆಯ ಕಾಮಾಕ್ಷಿ ಬೀದಿಯ ನಿವಾಸಿಯಾಗಿದ್ದು, ಬೆಳಿಗ್ಗೆ 10ಕ್ಕೆ ದೇವಾಲಯದ ಒಳಗೆ ಪ್ರದಕ್ಷಿಣೆ ಹಾಕುತ್ತಿದ್ದ ವೇಳೆ ಸುಮಾರು 8 ಜನರಿದ್ದ ಮುಸುಕುಧಾರಿಗಳ ತಂಡ ಅವರ ಮೇಲೆ ಹಲ್ಲೆ ಮಾಡಿದೆ.

ಮಚ್ಚು, ಲಾಂಗ್‌ಗಳಿಂದ ದೇಹದ ತಲೆ, ಎದೆ, ಕುತ್ತಿಗೆ ಭಾಗಗಳ ಮೇಲೆ ಭೀಕರವಾಗಿ ಹಲ್ಲೆ ನಡೆಸಿದ್ದು, ಸೀನ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಈ ಘಟನೆಯಿಂದ ದೇವಾಲಯದ ಆವರಣದಲ್ಲಿ ಪೂಜೆ ಸಲ್ಲಿಸಲು ಆಗಮಿಸಿದ್ದ ಭಕ್ತರು ಭಯದಿಂದ ದಿಕ್ಕಾಪಾಲಾಗಿ ಓಡಿದರು.

ಸೀನನ ಹತ್ಯೆಗೆ ಹಳೆಯ ದ್ವೇಷವೇ ಕಾರಣ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತುಳಸಿರಾಮನ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಮೆಂಟಲ್ ಸೀನ, ಕೆಲ ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ. ಕಳೆದ ತಿಂಗಳು ಮತ್ತೆ ಡಕಾಯಿತಿಗೆ ಹೊಂಚು ಹಾಕುತ್ತಿದ್ದ ವೇಳೆಯಲ್ಲಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಆ. 7ರಂದು ಮತ್ತೆ ಜಾಮೀನಿನ ಮೇಲೆ ಜೈಲಿನಿಂದ ಹೊರಬಂದಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.