ಗದಗ: ಇಲ್ಲಿನ ವೀರೇಶ್ವರ ಪುಣ್ಯಾಶ್ರಮದಲ್ಲಿ ಪಂ. ಪಂಚಾಕ್ಷರ ಗವಾಯಿಗಳ ಜಾತ್ರಾ ಮಹೋತ್ಸವದ ಅಂಗವಾಗಿ ಮಹಾ ರಥೋತ್ಸವ ಸಾವಿರಾರು ಭಕ್ತರ ಹರ್ಷೋದ್ಘಾರಗಳ ನಡುವೆ ಸೋಮವಾರ ನಡೆಯಿತು.
ಭಕ್ತರು ರಥಕ್ಕೆ ಉತ್ತತ್ತಿ, ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಜಾಂ್ ಮೇಳ ಸೇರಿದಂತೆ ವಿವಿಧ ವಾದ್ಯಮೇಳಗಳು ಸಾಥ್ ನೀಡಿದವು. ನೆರೆಯ ಬೆಳವಣಕಿ, ಡಂಬಳ, ಕೋಟುಮಚಗಿ, ನರೇಗಲ್ಲ, ರೋಣ, ಲಕ್ಕುಂಡಿ, ಹುಲಕೋಟಿ ಮೊದಲಾದ ಭಾಗಗಳ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸಿದ್ದರು.
ಟ್ರ್ಯಾಕ್ಟರ್ಗಳ ಮೂಲಕ ಮೆರವಣಿಗೆಯಲ್ಲಿ ಆಗಮಿಸಿದ ಭಕ್ತರು ಧನ-ಧಾನ್ಯವನ್ನು ಆಶ್ರಮಕ್ಕೆ ಸಮರ್ಪಿಸಿದರು. ಪಂಚಾಕ್ಷರ ಗವಾಯಿಗಳು ಹಾಗೂ ಕವಿ ಪುಟ್ಟರಾಜ ಗವಾಯಿಗಳನ್ನು ಸ್ಮರಿಸಿಕೊಂಡರು.
ಪುಟ್ಟರಾಜ ಗವಾಯಿಗಳು ಇಲ್ಲದ ಮೊದಲ ರಥೋತ್ಸವ ಇದಾಗಿತ್ತು. ಗವಾಯಿಗಳ ದರ್ಶನಕ್ಕೆಂದೇ ಪ್ರತಿವರ್ಷ ಜಾತ್ರೆಗೆ ಆಗಮಿಸುತ್ತಿದ್ದ ಭಕ್ತರಿಗೆ ಈ ಬಾರಿ ಗವಾಯಿಗಳ ನೆನಪು ಕಾಡುವಂತಿತ್ತು. ಜಾತ್ರೆಯ ಅಂಗವಾಗಿ ಆಶ್ರಮದ ಸುತ್ತ ಅಂಗಡಿ-ಮುಂಗಟ್ಟುಗಳಲ್ಲಿ ಭರ್ಜರಿ ಮಾರಾಟ ನಡೆದಿತ್ತು. ಹೆಚ್ಚಿ ನ ಭಕ್ತರು ಗವಾಯಿಗಳ ಭಾವಚಿತ್ರ, ಪುಸ್ತಕ, ಸಿ.ಡಿ. ಖರೀದಿಯಲ್ಲಿ ತೊಡಗಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.